Get Updates
Get notified of breaking news, exclusive insights, and must-see stories!

ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ

ಕೃಷಿಯಿಂದ ಯುವಕರು ಹಿಂದೆ ಸರಿಯುತ್ತಿದ್ದಾರೆ. ಅದರಲ್ಲೂ ಕೃಷಿಯಿಂದ ಲಾಭವಿಲ್ಲ, ಕೃಷಿ ಕೆಲಸಗಳಿಗೆ ಜನ ಸಿಗುತ್ತಿಲ್ಲ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಕೇಳಿ ಬರುತ್ತಿರುವ ಮಾತು. ಆದರೆ ಭಾರತದಲ್ಲಿ ಇಂದಿಗೂ ಲಕ್ಷಾಂತರ ಜನ ಕೃಷಿಯನ್ನೇ ಪ್ರಧಾನ ಕಸುಬನ್ನಾಗಿಸಿಕೊಂಡಿದ್ದಾರೆ. ಸಣ್ಣ ಹಿಡುವಳಿದಾರರು ಇಂದಿಗೂ ಕೃಷಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಕೃಷಿ ಉತ್ಪನ್ನಗಳ ಪೋಲು ಹಾಗೂ ಸಂಸ್ಕರಣೆಯಲ್ಲಿ ಆಗುತ್ತಿರುವ ಸವಾಲುಗಳು ಹೆಚ್ಚು. ಕೃಷಿಯಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳನ್ನು ನೋಡಿ, ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡವರ ಬಗ್ಗೆ ಈ ಲೇಖನ. ಕೃಷಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಮೆಕಾನಿಕಲ್ ಎಂಜಿನಿಯರ್ ಮಾಡಿರುವ ಶೈಲಜಾ ವಿಠಲ್ ಅವರ ಯಶೋಗಾಥೆ ಇಲ್ಲಿದೆ.

ಕರ್ನಾಟಕದ ಮೈಸೂರಿನ ಶೈಲಜಾ ವಿಠಲ್ ಅವರು 35ಕ್ಕೂ ಹೆಚ್ಚು ಕೃಷಿ ಯಂತ್ರಗಳನ್ನು ಪರಿಚಯಿಸಿದ್ದಾರೆ. ಈ ಯಂತ್ರಗಳಿಂದ ಲಕ್ಷಾಂತರ ಜನ ರೈತರ ಬದುಕು ಹಸನಾಗಿದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ರೈತರಿಗೂ ಇವರು ಕೃಷಿ ಯಂತ್ರಗಳನ್ನು ಪರಿಚಯಿಸಿದ್ದಾರೆ. ಇವರ ಕೃಷಿ ಯಂತ್ರಗಳ ಮತ್ತೊಂದು ವಿಶೇಷವೆಂದರೆ ಕಡಿಮೆ ಬೆಲೆ, ಮನೆಗಳಲ್ಲೇ ನಿರ್ವಹಿಸಬಹುದಾದ ಸಾಮರ್ಥ್ಯ ಹಾಗೂ ಸಣ್ಣ ಹಿಡುವಳಿದಾರರಿಗೆ ಬೇಕಾಗುವ ಸಣ್ಣ ಯಂತ್ರಗಳನ್ನು ತಯಾರಿಸುವುದು. ಈ ಯಂತ್ರಗಳ ಮತ್ತೊಂದು ವಿಶೇಷವೆಂದರೆ ಇವು ಹಾಳಾದರೆ ಸುಲಭವಾಗಿ ರಿಪೇರಿ ಮಾಡಿಕೊಳ್ಳಬಹುದು. ಕರ್ನಾಟಕದಲ್ಲಿ ಇವರ ಕೃಷಿ ಯಂತ್ರಗಳು ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿವೆ. ಶೈಲಜಾ ವಿಠಲ್ ಅವರ ಕೃಷಿ ಯಂತ್ರಗಳ ಮಾದರಿಯನ್ನು ನೋಡಿ ಹಲವರು ಕರ್ನಾಟಕದಲ್ಲಿ ವಿವಿಧ ಮಾದರಿಯ ಕೃಷಿ ಯಂತ್ರಗಳನ್ನು ತಯಾರಿಸಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಇದೊಂದು ಕೃಷಿ ಕ್ರಾಂತಿಯಾಗಿಯೇ ಬದಲಾಗಿದೆ. ಇವರ ಯಶೋಗಾಥೆ ವಿವರವನ್ನು ಅವರಿಂದಲೇ ಕೇಳೋಣ.

Shailaja Vitthal

ಕೃಷಿ ಯಂತ್ರಗಳನ್ನು ತಯಾರಿಸುವ ಕಾಯಕ ಪ್ರಾರಂಭವಾಗಿದ್ದು ಸಣ್ಣದೊಂದು ಅಡಿಕೆ ಸಿಪ್ಪೆ ತೆಗೆಯುವ ಯಂತ್ರದಿಂದ. ಅಸ್ಸಾಂನಲ್ಲಿದ್ದ ಸಂದರ್ಭದಲ್ಲಿ ಅಲ್ಲಿನ ಸಹಾಯಕ ಸಿಬ್ಬಂದಿಯಿಂದ ಸಣ್ಣದೊಂದು ಅಡಿಕೆ ಬಿಡಿಸುವ ಕೃಷಿ ಯಂತ್ರವನ್ನು ಶೈಲಜಾ ವಿಠಲ್ ಅವರು ತಯಾರಿಸಿದ್ದೆ. ಆದರೆ ಈ ಯಂತ್ರವು ಯಶಸ್ವಿಯಾಗಲಿಲ್ಲ. ಈ ಯಂತ್ರವನ್ನು ನೋಡಿ ಮನೆಯವರೆಲ್ಲರೂ ನಕ್ಕಿದ್ದರು. ಮೊದಲು ತಯಾರಿಸಿದ್ದ ಅಡಿಕೆ ಕೃಷಿ ಯಂತ್ರವು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಅಸ್ಸಾಂನಲ್ಲಿ ಇರುವ ಅಡಿಕೆಗೂ ಕರ್ನಾಟಕದಲ್ಲಿರುವ ಅಡಿಕೆಗೂ ಅಜಗಜಾಂತರವಿದೆ. ಇದೇ ಕಾರಣಕ್ಕೆ ಅಲ್ಲಿ ತಯಾರಿಸಿದ ಯಂತ್ರವು ಕರ್ನಾಟಕದಲ್ಲಿನ ಅಡಿಕೆ ಸಂಸ್ಕರಣೆಗೆ ಯೋಗ್ಯವಾಗಿರಲಿಲ್ಲ. ಹೇಗೂ ನೀನು ಒಂದು ಪ್ರಯೋಗ ಪ್ರಾರಂಭಿಸಿದ್ದೀಯ, ಅದನ್ನು ಕರ್ನಾಟಕದಲ್ಲೇ ಮುಂದುವರಿಸು ಎಂದು ಪತಿ, ಐಐಟಿ ಪ್ರೊಫೆಸರ್ ಡಾ. ವಿಜಯ್ ವಿಠಲ್ ಬೆಂಬಲ ಕೊಟ್ಟರು. ಇದು ಮುಂದೆ ಧರ್ಮ ಟೆಕ್ನಾಲಜಿ ಎನ್ನುವ ಕೃಷಿ ಯಂತ್ರೋಪಕರಣಗಳ ಸಂಸ್ಥೆ ಪ್ರಾರಂಭಕ್ಕೂ ಸಾಕ್ಷಿಯಾಯಿತು.

ಮೊದಲ ಪ್ರಯೋಗ ಕೈಗೂಡಲಿಲ್ಲ

ಕೃಷಿಯ ಸಂಪರ್ಕವೇ ಇಲ್ಲದ ಶೈಲಜಾ ವಿಠಲ್ ಅವರು ಕೃಷಿಕರಿಗಾಗಿ ತಯಾರಿಸಿರುವ ಯಂತ್ರೋಪಕರಣಗಳ ಲಿಸ್ಟ್‌ ದೊಡ್ಡದಿದೆ. ಕೃಷಿಕರೊಂದಿಗೆ ಬೆರೆತು ಕೃಷಿ ರೈತರಿಗಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಹೊಸ ಮಾದರಿಯ ಯಂತ್ರಗಳನ್ನು ಶೈಲಜಾ ವಿಠಲ್ ಅವರು ತಯಾರಿಸಿದ್ದಾರೆ. ಇಂದಿಗೂ ಇವರು ತಯಾರಿಸುತ್ತಿರುವ ಹೊಸ ಯಂತ್ರಗಳು ಕೃಷಿ ಕ್ಷೇತ್ರದಲ್ಲಿ ಕೃಷಿ ಉತ್ಪನ್ನಗಳ ಪೋಲು ಕಡಿಮೆಗೆ ಹಾಗೂ ರೈತರಿಗೆ ಸಹಕಾರಿಯಾಗಿದೆ. ಇಂದು ಶೈಲಜಾ ವಿಠಲ್ ಅವರು 35ಕ್ಕೂ ಹೆಚ್ಚು ಕೃಷಿ ಯಂತ್ರಗಳನ್ನು ತಯಾರಿಸಿದ್ದಾರೆ. ಆದರೆ ಮೊದ ಮೊದಲು ಇವರು ತಯಾರಿಸಿದ್ದ ಅಡಿಕೆ ಕಾಯಿ ಸಿಪ್ಪೆ ಸುಲಿಯುವ ಯಂತ್ರವು ಯಶಸ್ವಿಯಾಗಲಿಲ್ಲ. ಈ ಯಂತ್ರದಲ್ಲಿ ಅಡಿಕೆಗಳನ್ನು ಹಾಕಿದರೆ, ಅಡಿಕೆ ಬಿಡಿಸಲು ಸಾಧ್ಯವಾಗುತ್ತಿರಲಿಲ್ಲ, ಯಂತ್ರದಿಂದ ಅಡಿಕೆ ಉದುರುವುದನ್ನು ನೋಡಿ, ಪತಿಯ ಊರಿನಲ್ಲಿ ಸಂಬಂಧಿಕರು, ತೋಟದ ಕೆಲಸ ಮಾಡುವವರು ನಕ್ಕಿದ್ದರು ಎಂದು ಮೊದಮೊದಲು ಯಂತ್ರ ತಯಾರಿಸಿದಾಗ ಅನುಭವವನ್ನು ಹಂಚಿಕೊಳ್ಳುತ್ತಾರೆ ಶೈಲಜಾ ವಿಠಲ್.

Shailaja Vitthal

ತುಮಕೂರಿನಲ್ಲಿ ಅಡಿಕೆಯ ಯಂತ್ರದ ಮೊದಲ ಪ್ರಯೋಗ ನಡೆಯಿತು. ಆದರೆ ಅದು ಯಶಸ್ವಿಯಾಗಲಿಲ್ಲ. ಮುಂದೆ ಎರಡು ವರ್ಷಗಳ ಪ್ರಯೋಗದ ನಂತರ ಇವರು ತಯಾರಿಸಿದ ಅಡಿಕೆ ಬಿಡಿಸುವ ಕೃಷಿ ಯಂತ್ರವು ಈಗ ಕರ್ನಾಟಕದಾದ್ಯಂತ ಬಳಕೆಯಲ್ಲಿದೆ. ಮಾತ್ರವಲ್ಲ ಅಡಿಕೆ ಕೃಷಿಯಲ್ಲಿ ಆಗುತ್ತಿದ್ದ ಅಡಿಕೆ ಪೋಲಾಗುವುದನ್ನು ತಡೆದು ಅಡಿಕೆ ಮೌಲ್ಯವರ್ಧನೆಗೂ ಸಹಕಾರಿಯಾಗಿದೆ.

ಶೈಲಜಾ ವಿಠಲ್ ಅವರ ಪ್ರಮುಖ ಕೃಷಿ ಉತ್ಪನ್ನಗಳು

ಶೈಲಜಾ ವಿಠಲ್ ಅವರು 35ಕ್ಕೂ ಹೆಚ್ಚು ಕೃಷಿ ಯಂತ್ರಗಳನ್ನು ತಯಾರಿಸಿದ್ದಾರೆ. ಅದರಲ್ಲಿ ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವರಾಹ ಘಟಕ, ವಾದಿರಾಜ ಒಲೆ, ಸೈಕಲ್‌ ವೀಡರ್‌, ಈರುಳ್ಳಿ ಬಿತ್ತನೆ ಯಂತ್ರ, ರಾಗಿ ಹಾಗೂ ಭತ್ತ ಬಿತ್ತನೆ ಮಾಡುವ ಯಂತ್ರ, ದಾಳಿಂಬೆ ಕಾಳು ಬಿಡಿಸುವ ಯಂತ್ರ ಹಾಗೂ ಗೊರಬಲು ಪಾಲಿಷರ್ ಯಂತ್ರಗಳು ಪ್ರಮುಖವಾಗಿವೆ. ಇವರು ಆವಿಷ್ಕಾರ ಮಾಡಿದ ಯಂತ್ರಗಳಿಗೆ ಹೊಸ ಸೇರ್ಪಡೆಯೆಂದರೆ ಹುಣಸೆ ಬಿಡಿಸುವ ಯಂತ್ರ ಹುಣಸೆ ಬಿಡಿಸುವ ಯಂತ್ರವು ಹುಣಸೆ ಕೃಷಿಯಲ್ಲಿ ಹೊಸ ಕ್ರಾಂತಿ ಸೃಷ್ಟಿ ಮಾಡಿದೆ. ಹುಣಸೆ ಬೆಳೆಗಾರರು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಹುಣಸೆ ಬಿಡಿಸುವ ಕಾರ್ಮಿಕರ ಕೊರತೆ ಹಾಗೂ ಹುಣಸೆ ಮೌಲ್ಯವರ್ಧನೆ ಕೊರತೆಯೂ ಪ್ರಮುಖವಾಗಿದೆ. ಇದೀಗ ಶೈಲಜಾ ವಿಠಲ್ ಅವರು ತಯಾರಿಸಿರುವ ಯಂತ್ರವು ಹುಣಸೆ ಬಿಡಿಸುವುದಕ್ಕೆ ಬಹಳಷ್ಟು ಸಹಕಾರಿಯಾಗಿದೆ.

Shailaja Vitthal

ಅಡಿಕೆ ಪಾಲಿಷರ್ ಯಂತ್ರ: ಈರುಳ್ಳಿಯ ಮೌಲ್ಯವರ್ಧನೆಗೆಂದು ತಯಾರಿಸಿದ ಯಂತ್ರವೊಂದು ಅಡಿಕೆ ಪಾಲಿಷರ್ ಆಗಿ ಬದಲಾಯಿತು. ಇದೊಂದು ಪ್ರಯೋಗವಾಗಿ ಮೊದಲು ಮಾಡಲಾಯಿತು. ಸಾಕಷ್ಟು ಯಶಸ್ಸು ಗಳಿಸಿತು. ಇಂದು ಕರ್ನಾಟಕದಲ್ಲಿ ಅಡಿಕೆ ಬೆಳೆಗಾರಲ್ಲಿ ಬಹುತೇಕರು ಅಡಿಕೆ ಪಾಲಿಷರ್ ಯಂತ್ರವನ್ನು ಬಳಸುತ್ತಾರೆ. ಈ ಯಂತ್ರದಿಂದ ಅಡಿಕೆ ಪೋಲಿಗೆ ಕಡಿವಾಣ ಬಿದ್ದಿದ್ದು, ಎರಡನೇ ಹಾಗೂ ಮೂರನೇ ಹಂತದಲ್ಲಿ ವ್ಯರ್ಥವಾಗುತ್ತಿದ್ದ ಅಡಿಕೆಯೂ ಮಾರಾಟವಾಗುವುದಕ್ಕೆ ಸಾಧ್ಯವಾಯಿತು ಎನ್ನುವುದು ಶೈಲಜಾ ವಿಠಲ್ ಅವರ ಮಾತು. ಒಂದೇ ಯಂತ್ರದಲ್ಲಿ ಹಸಿ, ಕೆಂಪು ಹಾಗೂ ಒಣ ಅಡಿಕೆ ಸಿಪ್ಪೆ ಬಿಡಿಸುವುದಕ್ಕೆ ಸಾಧ್ಯವಿರುವುದು ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ.

ವಾದಿರಾಜ ಒಲೆ: ಶೈಲಜಾ ಅವರು ತಯಾರಿಸಿದ ಯಂತ್ರಗಳಲ್ಲಿ ಹೆಚ್ಚು ಮನ್ನಣೆ ಗಳಿಸಿರುವ ಯಂತ್ರಗಳಲ್ಲಿ ವಾದಿರಾಜ ಒಲೆ ಸಹ ಪ್ರಮುಖವಾಗಿದೆ. ಸಾಂಪ್ರದಾಯಿಕ ಒಲೆಗಳಿಂದ ಹೊರಹೊಮ್ಮುವ ಹೊಗೆಯನ್ನು ಈ ಯಂತ್ರವು ತಪ್ಪಿಸಿದೆ. ಮಹಿಳೆಯರ ಆರೋಗ್ಯದ ದೃಷ್ಟಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ವಾದಿರಾಜ ಒಲೆ ಸಹಕಾರಿಯಾಗಿದೆ. ಕಡಿಮೆ ಸೌದೆ ಬಳಸುವ, ಹೆಚ್ಚು ಹೊಗೆ ಉಗುಳದ ವಾದಿರಾಜ ಒಲೆ ಯಂತ್ರವನ್ನು ತಯಾರಿಸಿದ್ದು, ದೇಶದ ವಿವಿಧ ಭಾಗದಲ್ಲಿ ಬಳಕೆಯಲ್ಲಿದೆ. ಕಾಗದ, ತೆಂಗಿನ ಚಿಪ್ಪು, ಕಡ್ಡಿಗಳ ಹಾಗೂ ಒಣತ್ಯಾಜ್ಯದ ಮೂಲಕ ಈ ಒಲೆಯಲ್ಲಿ ಸುಲಭವಾಗಿ ಅಡುಗೆ ಮಾಡಬಹುದಾಗಿದೆ.

ವೆಟ್ ಪ್ಯಾಡಿ ಸೀಡ್ ಡ್ರಿಲ್: ಕೃಷಿಕರಿಗೆ ಅದರಲ್ಲೂ ಸಣ್ಣ ಕೃಷಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ವೆಟ್ ಪ್ಯಾಡಿ ಸೀಡ್ ಡ್ರಿಲ್ ಎನ್ನುವ ಯಂತ್ರವನ್ನು ತಯಾರಿಸಲಾಗಿದೆ. ಈ ಯಂತ್ರವು ಭತ್ತದ ಕೃಷಿಕರ ಪಾಲಿಗೆ ಸಂಜೀವಿನಿ ಎಂದೇ ಹೇಳಬಹುದು. ಭತ್ತದ ಮಡಿ ಮಾಡುವುದರಿಂದ ಪ್ರಾರಂಭಿಸಿ ನಾಟಿ ಮಾಡುವವರೆಗೂ ಈ ಯಂತ್ರವನ್ನು ಬಳಸಬಹುದಾಗಿದೆ.

ದಾಳಿಂಬೆ - ಹುಣಸೆ ಬಿಡಿಸುವ ಯಂತ್ರ: ಶೈಲಜಾ ಅವರು ಆವಿಷ್ಕಾರ ಮಾಡಿದ ಯಂತ್ರಗಳಲ್ಲಿ ದಾಳಿಂಬೆ ಹಾಗೂ ಹುಣಸೆ ಬಿಡಿಸುವ ಯಂತ್ರಗಳಿಗೂ ಭಾರಿ ಬೇಡಿಕೆ ಇದೆ. ದಾಳಿಂಬೆ ಬಿಡಿಸುವ ಯಂತ್ರವನ್ನು ಮೊದಲು ಇರಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ದಾಳಿಂಬೆ ಯಂತ್ರವನ್ನು ಶೈಲಜಾ ಅವರು ತಯಾರಿಸಿದ ನಂತರ ವಿದೇಶಿ ಉತ್ಪನ್ನಗಳ ಮೇಲೆ ಅವಲಂಬನೆ ಮಾಡುವುದು ತಪ್ಪಿತು. ಅಲ್ಲದೆ ಹುಣಸೆ ಬಿಡುವ ಯಂತ್ರವೂ ಸಹ ಈಗ ರೈತರಿಗೆ ಸಾಕಷ್ಟು ಅನುಕೂಲವನ್ನು ತಂದುಕೊಟ್ಟಿದೆ.

ಕೃಷಿಕರಿಗೆ ಶೈಲಜಾ ಅವರ ಪ್ರಮುಖ ಸಲಹೆಗಳು

ಸಣ್ಣ ಯಂತ್ರಗಳನ್ನು ಖರೀದಿ ಮಾಡುವುದು ತಪ್ಪಲ್ಲ ರೈತರು ಸಣ್ಣ ಯಂತ್ರಗಳನ್ನು ಖರೀದಿ ಮಾಡುವುದರಿಂದ ಅನುಕೂಲವಾಗಲಿದೆ. ದೊಡ್ಡ ಯಂತ್ರಗಳನ್ನೇ ಖರೀದಿ ಮಾಡಬೇಕು ಎಂದು ಏನಿಲ್ಲ ಸಣ್ಣ ಸಣ್ಣ ಯಂತ್ರಗಳಿಂದ ರೈತರಿಗೆ ಅನುಕೂಲವಾಗಲಿದೆ. ಸಣ್ಣ ಹಿಡುವಳಿದಾರರು ಸಣ್ಣ ಅಥವಾ ಅವಶ್ಯಕತೆಗೆ ಅನುಗುಣವಾಗಿ ಯಂತ್ರವನ್ನು ಖರೀದಿ ಮಾಡಬಹುದು. ನಾಲ್ಕೈದು ಜನ ರೈತರು ಸೇರಿ ಸಣ್ಣ ಯಂತ್ರವನ್ನು ಖರೀದಿ ಮಾಡುವುದರಿಂದ ಹಣ ಉಳಿತಾಯವಾಗಲಿದೆ. ಅಲ್ಲದೆ ದೀರ್ಘ ಅವಧಿಯಲ್ಲಿ ಲಾಭವಾಗಲಿದೆ ಎನ್ನುವುದು ಶೈಲಜಾ ಅವರ ಪ್ರಮುಖ ಸಲಹೆಯಾಗಿದೆ.

ರೈತರು ಸಂಘಟಿತರಾಗಬೇಕು

ನಮ್ಮ ರೈತರು ಸಂಘಟಿತರಾಗಬೇಕು. ರೈತರು ಸಂಘಟಿತರಾದರೆ ಮಧ್ಯಮವರ್ತಿಗಳು ಹಾವಳಿ ಇರುವುದಿಲ್ಲ. ಯಂತ್ರಗಳ ಖರೀದಿ ವಿಚಾರದಲ್ಲಿಯೂ ರೈತರು ಇದೇ ಮಾದರಿಯನ್ನು ಅನುಸರಿಸುವುದು ಉತ್ತಮ. ಇದರಿಂದ ರೈತರು ಕೃಷಿಯಲ್ಲಿ ಲಾಭ ಗಳಿಸುವುದಕ್ಕೆ ಸಾಧ್ಯವಿದೆ. ಯಂತ್ರಗಳು ರೈತರ ಕೆಲಸವನ್ನು ಸುಲಭ ಮಾಡಲಿದ್ದು, ಉತ್ಪನ್ನಗಳ ಮೌಲ್ಯವರ್ಧನೆಗೆ ಸಹಕಾರಿ ಆಗಿದೆ ಎನ್ನುತ್ತಾರೆ ಶೈಲಜಾ.

ಮಹಿಳಾ ರೈತರು ತಾವೇ ವ್ಯಾಪಾರ ಮಾಡಬೇಕು

ಇನ್ನು ಕೃಷಿಯಲ್ಲಿ ರೈತ ಮಹಿಳೆಯರು ಕೆಲಸ ಮಾಡುವುದರೊಂದಿಗೆ ವ್ಯವಹಾರದಲ್ಲೂ ಭಾಗಿಯಾಗಬೇಕು. ಕೃಷಿಯಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ವ್ಯಾಪಾರದಲ್ಲಿ ರೈತರೇ ಇರುವುದರಿಂದ ಕೃಷಿಯಲ್ಲಿ ರೈತ ಮಹಿಳೆಯರು ಹಿಂದುಳಿಯುತ್ತಿದ್ದಾರೆ. ರೈತ ಮಹಿಳೆಯರು ಸಹ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ವ್ಯವಹಾರದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ಶೈಲಜಾ ಅವರ ಸಲಹೆಯಾಗಿದೆ.

ಕೃಷಿ ಯಂತ್ರೋಪಕರಣ ಬೇಕಿರುವವರು ಸಂಪರ್ಕಿಸಬಹುದು

ಶೈಲಜಾ ವಿಠಲ್ ಅವರು ಹಲವು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿದ್ದಾರೆ. ಇವರ ಬಳಿ 450 ರೂಪಾಯಿಯಿಂದ 15 ಲಕ್ಷ ರೂ.ವರೆಗಿನ ಯಂತ್ರಗಳು ಇವೆ. ಹೆಚ್ಚಿನ ಮಾಹಿತಿಗೆ ತುಮಕೂರು ಜಿಲ್ಲೆಯ ಸಪ್ತಗಿರಿ ಬಡಾವಣೆಯಲ್ಲಿರುವ ಧರ್ಮಾ ಟೆಕ್ನಾಲಜಿ ಸಂಪರ್ಕ ಸಂಖ್ಯೆ: 7975888025 ಕರೆ ಮಾಡಬಹುದು.

ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಜನ ಹೆಚ್ಚಾಗಿ ಕೇಳುವ ಪ್ರಶ್ನೆಗಳು

1. ಶೈಲಜಾ ವಿಠಲ್ ಅವರ ಕೃಷಿ ಯಂತ್ರಗಳ ಬೆಲೆ ಎಷ್ಟು

ಯಂತ್ರಗಳ ಬೆಲೆಯು 450 ರೂಪಾಯಿಯಿಂದ ಆರಂಭವಾಗಿ ಸುಮಾರು 15 ಲಕ್ಷ ರೂ. ವರೆಗೆ ಇದೆ. ರೈತರ ಅಗತ್ಯಕ್ಕೆ ಅನುಗುಣವಾಗಿ ಸಣ್ಣ ಮತ್ತು ಮಧ್ಯಮ ಯಂತ್ರಗಳು ಲಭ್ಯವಿವೆ.

2. ಈ ಯಂತ್ರಗಳು ಸಣ್ಣ ರೈತರಿಗೆ ಉಪಯುಕ್ತವೇ?

ಹೌದು, ವಿಶೇಷವಾಗಿ ಸಣ್ಣ ಹಿಡುವಳಿದಾರರಿಗಾಗಿ ಕಡಿಮೆ ಬೆಲೆಯ, ಸುಲಭ ನಿರ್ವಹಣೆಯ ಯಂತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಕೆಲ ಯಂತ್ರಗಳನ್ನು ರೈತರು ಸೇರಿ ಖರೀದಿಸಬಹುದಾಗಿದೆ.

3. ಯಂತ್ರಗಳು ಹಾಳಾದರೆ ರಿಪೇರಿ ಸುಲಭವೇ?

ಹೌದು, ಸ್ಥಳೀಯವಾಗಿ ಸುಲಭವಾಗಿ ದುರಸ್ತಿ ಮಾಡಿಕೊಳ್ಳುವಂತೆ ಯಂತ್ರಗಳನ್ನು ತಯಾರಿಸಲಾಗಿದೆ. ಸ್ಪೇರ್ ಪಾರ್ಟ್ಸ್ ಕೂಡ ಸುಲಭವಾಗಿ ಸಿಗುತ್ತವೆ.

4. ಯಂತ್ರೋಪಕರಣಗಳನ್ನು ಖರೀದಿಸಲು ಅಥವಾ ಹೆಚ್ಚಿನ ಮಾಹಿತಿಗೆ ಹೇಗೆ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ಧರ್ಮಾ ಟೆಕ್ನಾಲಜಿ ಸಂಸ್ಥೆಯನ್ನು 7975888025 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+