ಪ್ರಧಾನಿ ಮೋದಿ ಬಳಿ ಕೇಜ್ರಿವಾಲ್ ಮಾಡಿದ ಅಪರೂಪದ ಮನವಿ
ನವದೆಹಲಿ, ಜುಲೈ 25: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ಆಪ್ ಸರಕಾರದ ನಡುವಿನ ವೈಮನಸ್ಸು ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿ ಬಳಿ ಅಪರೂಪದ ಮನವಿಯೊಂದನ್ನು ಮಾಡಿದ್ದಾರೆ.
ಕೇಂದ್ರ ಸರಕಾರದ ವಿರುದ್ದ ನೇರ ಸಂಘರ್ಷಕ್ಕಿಳಿದಿರುವ ಕೇಜ್ರಿ ಸರಕಾರ, ದೆಹಲಿಯ ಹಲವು ಭಾಗದಲ್ಲಿ ಪ್ರಧಾನಿ ಮೋದಿಯ ಬಳಿ ಮನವಿ ಮಾಡುವ ಜೊತೆಗೆ ಅಣಕವಾಡುವ ಹೋರ್ಡಿಂಗ್ಸ್ ಅನ್ನು ಅಳವಡಿಸಿದೆ.
ಹಿಂದಿಯಲ್ಲಿ ಬರೆಯಲಾಗಿರುವ ಈ ಬೋರ್ಡಿನಲ್ಲಿ "ಪ್ರಧಾನಮಂತ್ರಿ ಸರ್, ಪ್ಲೀಸ್ ದೆಹಲಿ ಸರಕಾರಕ್ಕೆ ಆಡಳಿತ ನಡೆಸಲು ಬಿಡಿ, ದೆಹಲಿ ಸರಕಾರ ಸರಿಯಾಗಿ ಆಡಳಿತ ನಡೆಸುತ್ತಿದೆ" ಎಂದು ಬರೆಯಲಾಗಿರುವ ಬೋರ್ಡ್ ದೆಹಲಿಯ ರಸ್ತೆಗಳಲ್ಲಿ ರಾರಾಜಿಸುತ್ತಿದೆ.

ಭ್ರಷ್ಟಾಚಾರ ನಿಗ್ರಹ ದಳ (Anti Corruption Branch) ಮತ್ತು ದೆಹಲಿ ಮಹಿಳಾ ಕಮಿಷನ್ (Delhi Commission for Women) ಇಲಾಖೆಯ ದೈನಂದಿನ ಕಾರ್ಯಗಳಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪದ ವಿರುದ್ದ ಆಮ್ ಆದ್ಮಿ ಸರಕಾರ ಈ ಹೋರ್ಡಿಂಗ್ ನಗರದೆಲ್ಲಡೆ ಹಾಕಿದೆ.
ಈ ಎರಡೂ ಇಲಾಖೆಗಳು ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ, ಎಸಿಬಿಗೆ ಹೊಸ ಮುಖ್ಯಸ್ಥರನ್ನು ನೇಮಿಸುವ ಮೂಲಕ ಕಾನೂನು ಬಾಹಿರ ಕ್ರಮವನ್ನು ಕೇಂದ್ರ ಗೃಹ ಇಲಾಖೆ ತೆಗೆದುಕೊಂಡಿದೆ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಎಸಿಬಿ ನೇರವಾಗಿ ಕೇಂದ್ರ ಸಚಿವರೊಬ್ಬರ ವಿರುದ್ದ ಎಫ್ಐಆರ್ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದೆಹಲಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತನ್ನಿ, ನಿಮಗೆ ಆಗದಿದ್ದಲ್ಲಿ ದೆಹಲಿ ಪೊಲೀಸ್ ಇಲಾಖೆಯನ್ನು ದೆಹಲಿ ಸರಕಾರದ ವ್ಯಾಪ್ತಿಗೆ ತನ್ನಿ ಎಂದು ಕೇಜ್ರಿವಾಲ್, ಪ್ರಧಾನಿಗೆ ಸವಾಲೆಸೆದಿದ್ದಾರೆ.












Click it and Unblock the Notifications