ಕೊನೆಗೂ ಪುತ್ರನನ್ನು ಒಪ್ಪಿ, ಅಪ್ಪಿಕೊಂಡ ತಿವಾರಿ
ನವದೆಹಲಿ, ಮಾರ್ಚ್ 3- ಸಾಕಷ್ಟು ಮೊಂಡಾಟ ನಡೆಸಿದ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ ಅವರು ರೋಹಿತ್ ಶೇಖರ್ ಎಂಬ ಯುವಕನನ್ನು ತಮ್ಮ ಪುತ್ರ ಎಂದು ಒಪ್ಪಿ, ಅಪ್ಪಿಕೊಂಡಿದ್ದಾರೆ.
ಎನ್ ಡಿ ತಿವಾರಿ ವಿಷಯವನ್ನು ಸುಪ್ರೀಂಕೋರ್ಟಿನವರೆಗೂ ಎಳೆದೊಯ್ದಿದ್ದರು. ಸುಪ್ರೀಂಕೋರ್ಟ್ ಸಹ ಡಿಎನ್ಎ ವರದಿಯನ್ನಾಧರಿಸಿ, ತಿವಾರಿಯೇ ರೋಹಿತ್ ಅಪ್ಪ ಎಂದು ಘೋಷಿಸಿದರೂ ಆಂಧ್ರ ಪ್ರದೇಶದ ಮಾಜಿ ರಾಜ್ಯಪಾಲ ತಿವಾರಿ ಮುಖ ತಿರುಗಿಸಿದ್ದರು. ಕೋರ್ಟ್ ಸಹ ತಿವಾರಿಯನ್ನು ತರಾಟೆಗೆ ತೆಗೆದುಕೊಂಡಿತ್ತು.

ಕೊನೆಗೆ ಗತ್ಯಂತರವಿಲ್ಲವೆಂದಾಗ 'ಕೋರ್ಟಿನಾಚೆಗೆ ಸೆಟ್ಲ್ ಮಾಡಿಕೊಳ್ಳಬಹುದಿತ್ತಲ್ವಾ? ಸುಮ್ನೆ ನನ್ನ ಮರ್ಯಾದೆ ತೆಗೆದೆ' ಎಂದು ಪುತ್ರ ರೋಹಿತನನ್ನು ತಿವಾರಿ ಇತ್ತೀಚೆಗೆ ಗದರಿಕೊಂಡಿದ್ದರು. ಈಗಲೂ ಅಷ್ಟೇ, ಸುಪ್ರೀಂಕೋರ್ಟಿನಿಂದ ದೆಹಲಿ ಹೈಕೋರ್ಟಿಗೆ ಪ್ರಕರಣ ವಾಪಸಾಗಿದೆ. ಈ ಮಧ್ಯೆ, ತಿವಾರಿ ತಮ್ಮ ಮಗನನ್ನು ಒಪ್ಪಿಕೊಂಡಿರುವುದರಿಂದ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆಯಿದೆ.
89 ವರ್ಷದ ವಯೋವೃದ್ಧ ನಾಯಕ ರೋಹಿತ್ ಶೇಖರನನ್ನು ನಿನ್ನೆ ಭಾನುವಾರ ತಮ್ಮ ಮನೆಗೆ ಆಹ್ವಾನಿಸಿ, ಆತನೊಂದಿಗೆ ಭಾವನಾತ್ಮಕವಾಗಿ ಮಾತುಕತೆ ನಡೆಸಿದರು. ಮಗನೇ ನಿನ್ನ ವಿಷಯದಲ್ಲಿ ಕೋರ್ಟಿನಲ್ಲಿ ಹೋರಾಡಿ ಹೋರಾಡಿ ಸಾಕಾಗಿದೆ. ಇನ್ನು ಕೈಯಲ್ಲಿ ಆಗೋಲ್ಲ. ಹೌದು ನಾನೇ ನಿನ್ನ ಅಪ್ಪ. ನಿಮ್ಮ ಅಮ್ಮ (ಉಜ್ವಲ ಶರ್ಮಾ) ಮತ್ತು ನಿನ್ನೊಂದಿಗೆ ಮತ್ತೆ ಜತೆಗೂಡಲು ನನಗೆ ಸಂತೋಷವಾಗುತ್ತಿದೆ' ಎಂದು ಅನೇಕ ವರ್ಷಗಳ ಬಳಿಕ ಮೊದಲ ಬಾರಿಗೆ ರೋಹಿತ್ ಜತೆ, ತಿವಾರಿ ಮಾತನಾಡಿದರು.

ಆಂಧ್ರ ಪ್ರದೇಶದ ಮಾಜಿ ರಾಜ್ಯಪಾಲ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಡಿ ತಿವಾರಿ ಅವರು ನನ್ನ ತಂದೆ ಎಂದು 34 ವರ್ಷ ರೋಹಿತ್ ಶೇಖರ್ 2008ರಲ್ಲಿ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲೇರಿದ್ದರು.
ಆನಂತರ ಆ ಸಿಕ್ಕಿನಿಂದ ಬಿಡಿಸಿಕೊಳ್ಳಲು ತಿವಾರಿ ಶತಾಯಗತಾಯ ಯತ್ನಿಸಿದರು. ಆದರೆ ಕೊನೆಗೆ ರೋಹಿತ್ ಶೇಖರ್ ವಿಜಯದ ನಗೆ ಬೀರಿದ್ದಾರೆ. ನಮ್ಮಪ್ಪ ತಿವಾರಿ ನನಗೆ ಜನ್ಮಕೊಟ್ಟ ತಾಯಿಯ ಜತೆ ಸಂಬಂಧ ಹೊಂದಿದ್ದರು. ನನ್ನ ಅನೇಕ ಹುಟ್ಟುಹಬ್ಬಗಳಲ್ಲಿ ತಿವಾರಿ ಅವರು ಭಾಗವಹಿಸಿದ್ದರು ಎಂದು ಹೇಳಿ ರೋಹಿತ್ ವಾದ ಮಂಡಿಸಿದ್ದರು.












Click it and Unblock the Notifications