ಚಂದ್ರಬಾಬು- ರಾಹುಲ್ ಒಟ್ಟಾಗಿ ಬಿಜೆಪಿ ವಿರುದ್ಧ ರಣ ಕಹಳೆ
ನವದೆಹಲಿ, ನವೆಂಬರ್ 1: ಪ್ರಜಾತಂತ್ರ ವ್ಯವಸ್ಥೆ ಹಾಗೂ ಸಾಂವಿಧಾನಿಕ ಸಂಸ್ಥೆಗಳು ಮತ್ತು ಈ ದೇಶದ ಭವಿಷ್ಯದ ಸಲುವಾಗಿ 2019ರ ಲೋಕಸಭೆ ಚುನಾವಣೆಗೆ ವಿಪಕ್ಷಗಳೆಲ್ಲ ಒಗ್ಗಟ್ಟಾಗುವುದು ಅಗತ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ. ಇಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ನಂತರ ಮಾತನಾಡಿದ್ದಾರೆ. "ಇದು ಪ್ರಜಾತಂತ್ರದ ಅಗತ್ಯ" ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
"ನಾವು ಒಟ್ಟಿಗೆ ಇದ್ದೇವೆ. ಹಿಂದಿನ ವಿಚಾರಗಳನ್ನು ಬಿಟ್ಟು, ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಚಿಂತಿಸಲು ನಿರ್ಧರಿಸಿದ್ದೇವೆ. ವಿಪಕ್ಷಗಳು ಒಟ್ಟಾಗಿ ಕೆಲಸ ಮಾಡುವುದು ಈಗ ದೇಶದ ಪಾಲಿಗೆ ತುರ್ತಾದ ವಿಷಯ. ದೇಶವನ್ನು ಏಳಿಗೆಯತ್ತ ಕೊಂಡೊಯ್ಯಬೇಕಿದೆ" ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸತತ 45ನಿಮಿಷ ಮೋದಿ ವಿರುದ್ದ ಕೆಂಡಕಾರಿದ ಚಂದ್ರಬಾಬು ನಾಯ್ಡು
ಈ ವರ್ಷದ ಮಾರ್ಚ್ ತನಕ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿಯು ಬಿಜೆಪಿಯ ಮಿತ್ರ ಪಕ್ಷವಾಗಿ, ಕಾಂಗ್ರೆಸ್ ನ ಸಾಂಪ್ರದಾಯಿಕ ಎದುರಾಳಿಯಾಗಿತ್ತು. ಆದರೆ ಈಗ ಬಿಜೆಪಿ ಜತೆಗೆ ಮೈತ್ರಿ ಕಡಿದುಕೊಂಡಿರುವ ಟಿಡಿಪಿಯು ಕಾಂಗ್ರೆಸ್ ಜತೆಗೆ ಸಖ್ಯ ಬೆಳೆಸಿದೆ.
ಒಟ್ಟಾಗಿ ಕೆಲಸ ಮಾಡುವ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ ಬಿಜೆಪಿಯನ್ನು ಸೋಲಿಸುವುದು ಎಂದು ಇಬ್ಬರೂ ನಾಯಕರು ಹೇಳಿದ್ದಾರೆ. ಬಿಜೆಪಿ ವಿರುದ್ಧದ ಒಕ್ಕೂಟವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷವೇ ಪ್ರಮುಖ ವಿರೋಧ ಪಕ್ಷ ಎಂದಿದ್ದಾರೆ ಚಂದ್ರಬಾಬು ನಾಯ್ಡು. "ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುವುದು ಮುಖ್ಯ. ಉಳಿದಿದ್ದೆಲ್ಲ ನಂತರ" ಎಂದಿದ್ದಾರೆ ರಾಹುಲ್ ಗಾಂಧಿ.
ದೇಶದ ಚೌಕೀದಾರ್ ಕಳ್ಳ ಕಳ್ಳ ಕಳ್ಳ ಎಂದು ಕೂಗಿದ ರಾಹುಲ್ ಗಾಂಧಿ
ಚಂದ್ರಬಾಬು ನಾಯ್ಡು ಮಾತನಾಡಿ, ಸದ್ಯದಲ್ಲೇ ಎಲ್ಲ ವಿರೋಧ ಪಕ್ಷಗಳು ಒಂದು ವೇದಿಕೆಯಲ್ಲಿ ಸೇರಲಿದ್ದೇವೆ. ಅಲ್ಲಿ ಮುಂದಿನ ಕಾರ್ಯತಂತ್ರ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ. ಈ ವಾರದಲ್ಲೇ ನಾಯ್ಡು ಎರಡನೇ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದಾರೆ. ಎನ್ ಸಿಪಿಯ ಶರದ್ ಪವಾರ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾರನ್ನು ಭೇಟಿ ಆಗಿದ್ದಾರೆ. ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾರನ್ನು ಭೇಟಿ ಮಾಡಿದ್ದಾರೆ.
ಮಿಜೋರಾಂ ಅಂತ ನೂರು ಬಾರಿ ಬರೀರಿ... ರಾಹುಲ್ ಗೆ ಬಿಜೆಪಿ ಶಿಕ್ಷೆ!
ಟಿಡಿಪಿ ಹಾಗೂ ಕಾಂಗ್ರೆಸ್ ಈಗಾಗಲೇ ತೆಲಗಾಣದಲ್ಲಿ ಮೈತ್ರಿ ಮಾಡಿಕೊಂಡಿವೆ. ಅಲ್ಲಿನ ವಿಧಾನಸಭೆಯ 119 ಸ್ಥಾನಗಳ ಪೈಕಿ 90ರಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದೆ. 29 ಸ್ಥಾನಗಳಲ್ಲಿ ಟಿಡಿಪಿ, ತೆಲಂಗಾಣ ಜನ ಸಮಿತಿ, ಸಿಪಿಐ ಸ್ಪರ್ಧಿಸಲಿವೆ. 2020ರಲ್ಲಿ ಆಂಧ್ರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ.