ಐಎನ್ಎಕ್ಸ್ ಮೀಡಿಯಾ ಲಂಚ ಹಗರಣ : ಇಡಿ ಮುಂದೆ ಪಿ ಚಿದಂಬರಂ ಹಾಜರು
ನವದೆಹಲಿ, ಡಿಸೆಂಬರ್ 19 : ಐಎನ್ಎಕ್ಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರಿಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಈಗಾಗಲೆ ಅವರು ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಗೆ ಆಗಮಿಸಿದ್ದು, ಈ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಎದುರಿಸಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರನ್ನು ಫೆಬ್ರವರಿಯಲ್ಲಿ ಚೆನ್ನೈ ಏರ್ಪೋರ್ಟ್ ನಲ್ಲಿ ಸಿಬಿಐ ಬಂಧಿಸಿತ್ತು.

ಐಎನ್ಎಕ್ಸ್ ಮೀಡಿಯಾ ಮಾಲಿಕರಾದ, ಈಗ ಜೈಲಿನಲ್ಲಿರುವ ಪೀಟರ್ ಮತ್ತು ಇಂದ್ರಾಣಿಯವರಿಂದ 10 ಲಕ್ಷ ರುಪಾಯಿ ಲಂಚ ಪಡೆದ ಆರೋಪ ಕಾರ್ತಿ ಮೇಲಿದೆ. ಕೋಟ್ಯಂತರ ರುಪಾಯಿ ತೆರಿಗೆ ವಂಚನೆ ಮಾಡಿದ ಪ್ರಕರಣದಿಂದ ತಮ್ಮ ಪ್ರಭಾವ ಬಳಸಿ ಪಾರು ಮಾಡಲು ಪೀಟರ್ ಮತ್ತು ಇಂದ್ರಾಣಿ ಅವರು ಕಾರ್ತಿ ಚಿದಂಬರಂ ಅವರನ್ನು ಬಳಸಿಕೊಂಡಿದ್ದರು ಎಂಬ ಆರೋಪವೂ ಇದೆ.
2007ರಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (Foreign Investment Promotion Board)ಯಿಂದ 4.62 ಕೋಟಿ ರುಪಾಯಿ ಹೂಡಿಕೆ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ ಮಾರಿಷಸ್ ನ ಎರಡು ಕಂಪನಿಗಳಿಂದ ಪೀಟರ್ ಮತ್ತು ಇಂದ್ರಾಣಿ ಒಡೆತನದ ಕಂಪನಿ ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ ರುಪಾಯಿಗಳು.
ಇದರ ವಿರುದ್ಧ ಕಂದಾಯ ಇಲಾಖೆ ವಿಚಾರಣೆಗೆ ಆದೇಶಿಸಿತ್ತು. ಈ ವಿಚಾರಣೆಯನ್ನು ತಪ್ಪಿಸಲು ಕಾರ್ತಿ ಅವರು ತಮ್ಮ ಕಂಪನಿಯ ಮೂಲಕ ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ 10 ಲಕ್ಷ ರುಪಾಯಿ ಕಮಿಷನ್ ಪಡೆದಿದ್ದರು.












Click it and Unblock the Notifications