ಚಿದಂಬರಂ ಪ್ರಭಾವಿ ವ್ಯಕ್ತಿ: ಮತ್ತೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್
ನವದೆಹಲಿ, ಸೆಪ್ಟೆಂಬರ್ 30: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಮತ್ತೆ ನಿರಾಶೆಯುಂಟುಮಾಡಿದೆ.
ಚಿದಂಬರಂ ಅವರು ಕಾಂಗ್ರೆಸ್ನ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವುದರಿಂದ ಸಾಕ್ಷ್ಯಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಚಿದಂಬರಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾ. ಸುರೇಶ್ ಕುಮಾರ್ ಕೈತ್, ಚಿದಂಬರಂ ಅವರು ಸಾಕ್ಷ್ಯ ಹಾಳು ಮಾಡಲು ಅವಕಾಶವಿಲ್ಲ. ಆದರೆ ಸಾಕ್ಷಿಗಳ ಮೇಲೆ ಅವರು ಪ್ರಭಾವ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಭಿಪ್ರಾಯಪಟ್ಟರು.

ಆಗಸ್ಟ್ 21ರಂದು ತಮ್ಮ ಜೋರ್ ಬಾಗ್ ನಿವಾಸದಲ್ಲಿ ಸಿಬಿಐನಿಂದ ಬಂಧಿತರಾದ ಚಿದಂಬರಂ ಅವರು ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸದೆ ನೇರವಾಗಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಅವರು ತಿಹಾರ್ ಜೈಲಿನಲ್ಲಿ ಅ. 3ರವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಂಧನವಾಗಿ 40 ದಿನಗಳಾಗಿದ್ದರೂ ಚಿದಂಬರಂ ಅವರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಈ ಅವಧಿಯಲ್ಲಿ ಅವರು ಸುಮಾರು 14 ದಿನಗಳನ್ನು ಸಿಬಿಐ ವಶದಲ್ಲಿ ಕಳೆದಿದ್ದು, 25 ದಿನಗಳಿಂದ ತಿಹಾರ್ ಜೈಲಿನಲ್ಲಿದ್ದಾರೆ.
ಚಿದಂಬರಂ ಅವರ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಚಿದಂಬರಂ ಅವರು ಬೇರೆ ದೇಶಕ್ಕೆ ಪರಾರಿಯಾಗುವ ಅಪಾಯವಿದೆ. ಅವರ ವಿರುದ್ಧ ಗಂಭೀರ ಆರೋಪವಿದೆ. ಹೀಗಾಗಿ ಅವರು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಜತೆಗೆ ಬೇರೆ ದೇಶಕ್ಕೆ ಪರಾರಿಯಾದರೂ ಅಲ್ಲಿ ನೆಲೆಸುವಷ್ಟು ಹಣ ಅವರ ಬಳಿ ಇದೆ ಎಂದು ವಾದಿಸಿದರು.
ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಅವರು ಈ ವಾದವನ್ನು ಒಪ್ಪಿಕೊಳ್ಳಲಿಲ್ಲ. ಚಿದಂಬರಂ ಅವರು ಪರಾರಿಯಾಗುವ ಅಪಾಯ ಅಥವಾ ಯಾವುದೇ ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆಯಿಲ್ಲ. ಆದರೆ ಅವರು ಸಂಸದರಾಗಿರುವುದರಿಂದ ಮತ್ತು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ನಿರಾಕರಿಸಲಾಗದು ಎಂದರು.












Click it and Unblock the Notifications