ಕಾವೇರಿ : ಕರೆಂಟು ಕೊಟ್ರೆ ಎನ್ಡಿಎಗೆ 'ಜಯಾ' ಕರದಂಟು
ನವದೆಹಲಿ, ಜೂ.4: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಹಾಜರಾಗದ ಮುಖ್ಯಮಂತ್ರಿಗಳು ಒಬ್ಬೊಬ್ಬರಾಗಿ ದೆಹಲಿಗೆ ತೆರಳುತ್ತಿದ್ದಾರೆ. ಮೋದಿ ಅವರನ್ನು ಭೇಟಿ ಮಾಡಿದ ಜಯಲಲಿತಾ ಅವರು ಕಾವೇರಿ, ವಿದ್ಯುತ್ ಪೂರೈಕೆ, ತಮಿಳರ ರಕ್ಷಣೆಗಾಗಿ ಮನವಿ ಸಲ್ಲಿಸಿದರೆ ಬೇಡಿಕೆ ಈಡೇರಿದರೆ ರಾಜ್ಯಸಭೆಯಲ್ಲಿ ಎನ್ಡಿಎಗೆ ಬೆಂಬಲ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಎನ್ಡಿಎ ಭಾಗವಾಗಿ ಎಐಎಡಿಎಂಕೆ ಕಾರ್ಯನಿರ್ವಹಿಸುವುದಿಲ್ಲ. ನಮ್ಮದೇನಿದ್ದರೂ ವಿಷಯಾಧಾರಿತ ಬೆಂಬಲ ಎಂದಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಗ್ಗಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧಿಕರಣದ ಆದೇಶದ ಮೇರೆಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿ, ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ ಮೇಲೆ ನದಿ ಪ್ರಾಧಿಕಾರದ ಸಭೆ ಕರೆಯುವಂತೆ ಕೂಡಾ ಜಯಲಲಿತಾ ಅವರು ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ಮುಲ್ಲ ಪೆರಿಯಾರ್ ಅಣೆಕಟ್ಟು ಹಾಗೂ ನೀರಿನ ಹಂಚಿಕೆ ಬಗ್ಗೆ ಕೂಡಾ ಮಾತುಕತೆ ನಡೆಸಿದ್ದಾರೆ. ಮುಲ್ಲಾಪೆರಿಯಾರ್ ಅಣೆಕಟ್ಟೆ ಎತ್ತರವನ್ನು 142 ಅಡಿಗೆ ಹೆಚ್ಚಿಸುವ ಸಂಬಂಧ ಸಂಪುಟ ಉಪ ಸಮಿತಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ 142 ಪುಟಗಳ ಮನವಿಯನ್ನು ಪ್ರಧಾನಿಗೆ ಸಲ್ಲಿಸಿದರು. ಜಯಾ ಅವರ ದೆಹಲಿ ಪ್ರವಾಸದ ಚಿತ್ರಗಳು, ಪ್ರಧಾನಿಗೆ ಸಲ್ಲಿಸಿದ ಮನವಿಯ ವಿವರಗಳನ್ನು ಮುಂದೆ ಓದಿ...
ಕಾವೇರಿ ನದಿ ನೀರು ಹಂಚಿಕೆ ಹಾಗೂ ವಿದ್ಯುತ್ ಹಂಚಿಕೆ
ಕಾವೇರಿ ನದಿ ನೀರು ಹಂಚಿಕೆ ಹಾಗೂ ವಿದ್ಯುತ್ ಹಂಚಿಕೆ ಬಗ್ಗೆ ಜಯಲಲಿತಾ ಅವರು ಮಾತುಕತೆ ನಡೆಸಿದ್ದು ಕೇಂದ್ರದಿಂದ ಸೆಂಟ್ರಲ್ ಗ್ರಿಡ್ ನಿಂದ ತಮಿಳುನಾಡಿಗೆ ಸಿಗಬೇಕಾಗಿರುವ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ 65 ಪುಟಗಳ ಮನವಿ ಸಲ್ಲಿಸಿದ್ದಾರೆ.
ಗಂಗಾ ಕಾವೇರಿ ನದಿ ಜೋಡಣೆ ಜಾರಿಗೊಳಿಸಿ
ಗಂಗಾ ಕಾವೇರಿ ನದಿ ಜೋಡಣೆ ಜಾರಿಗೊಳಿಸಿ ಇದು ಎನ್ಡಿಎ ಯೋಜನೆಯೂ ಆಗಿದೆ. ಪಾಲಾರ್-ನೇತ್ರಾವತಿ ನದಿ ಜೋಡಣೆ ಮಾಡಿದರೆ ವೆಲ್ಲೂರು-ತಂಜಾವೂರು ಕಡೆಯ ರೈತರಿಗೆ ಅನುಕೂಲವಾಗುತ್ತದೆ. ತಮಿಳುನಾಡಿನ ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಯೋಜನೆಗೆ ನಿಮ್ಮ ಸರ್ಕಾರ ಮೊದಲ ಆದ್ಯತೆ ನೀಡಲಿ.
ಸುಮಾರು 50 ನಿಮಿಷಗಳ ಕಾಲ ಚರ್ಚೆ
ಪ್ರಧಾನಿ ಮೋದಿ ಅವರ ಜತೆ ತಮಿಳುನಾಡು ಸಿಎಂ ಜಯಲಲಿತಾ ಅವರು ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದರು. ತಮಿಳುನಾಡು ರಾಜ್ಯ ಸಮಸ್ಯೆಗಳ ಜತೆಗೆ ಶ್ರೀಲಂಕಾ ತಮಿಳರು, ತಮಿಳುನಾಡಿನ ಮೀನುಗಾರರ ವಿಷಯದ ಬಗ್ಗೆ ಚರ್ಚಿಸಿದರು.
ರಾಜ್ಯಸಭೆಯಲ್ಲಿ ಬೆಂಬಲ ನೀಡುವಿರೇ?
ತಮಿಳುನಾಡು ಸಿಎಂ ಜಯಲಲಿತಾ ಮತ್ತು ಮೋದಿ ಮಂಗಳವಾರದ ಭೇಟಿ ನಂತರ ಮಾತನಾಡಿ, ರಾಜ್ಯಸಭೆ ಸಂಖ್ಯಾ ಬಲದ ಕುರಿತ ಪ್ರಶ್ನೆಗೆ, 'ಅಂಥ ಸನ್ನಿವೇಶ ಬಂದಾಗ ನೋಡೋಣ' ಎಂದು ನಗುತ್ತ ನುಡಿದರು.
ಲೋಕಸಭೆಯಲ್ಲಿ 37 ಸದಸ್ಯರ ಎಡಿಎಂಕೆ, ಮೂರನೆ ದೊಡ್ಡ ಪಕ್ಷ. ರಾಜ್ಯಸಭೆಯಲ್ಲಿ 10 ಸದಸ್ಯರಿದ್ದಾರೆ. ಇನ್ನು ಲೋಕಸಭೆಯಲ್ಲಿ 34, ರಾಜ್ಯಸಭೆಯಲ್ಲಿ 12 ಸದಸ್ಯರುಳ್ಳ ತೃಣಮೂಲದ ಮಮತಾ ಬ್ಯಾನರ್ಜಿ, 'ಒಳ್ಳೆಯ ಕೆಲಸ ಮಾಡಿದರೆ ಬೆಂಬಲಿಸುತ್ತೇವೆ' ಎಂದಿದ್ದಾರೆ. ಈ ಎರಡೂ ಬೆಂಬಲಿಸಿದರೆ ಲೋಕಸಭೆ ಎನ್ಡಿಎ ಬಲ 406ಕ್ಕೇರಲಿದೆ.ಎಡಿಎಂಕೆ, ಟಿಎಂಸಿ, ಬಿಜೆಡಿ ಸೇರಿದರೆ ರಾಜ್ಯಸಭೆಯಲ್ಲಿ ಸದಸ್ಯಬಲ 90. 9 ಪಕ್ಷೇತರರು, ಸಣ್ಣ ಪುಟ್ಟ ಪಕ್ಷಗಳ ಬೆಂಬಲ ಗಿಟ್ಟಿಸಿಕೊಳ್ಳುವುದು ಕಷ್ಟವಲ್ಲ.
*
243
ರಾಜ್ಯಸಭೆಯ
ಸದಸ್ಯ
ಬಲ
*
233
ಹಾಲಿ
ಸಂಖ್ಯಾಬಲ
(10
ಸ್ಥಾನ
ಖಾಲಿ)
*
64
ಬಿಜೆಪಿ(42)
ಸೇರಿ
ಎನ್ಡಿಎ
ಸದಸ್ಯರು
*
10
ಎಐಎಡಿಎಂಕೆ
*
12
ಟಿಎಂಸಿ
*
4
ಬಿಜೆಡಿ
ರಾಷ್ಟಪತಿಗಳನ್ನು ಭೇಟಿ ಮಾಡಿದ ಜಯಾ
ರಾಷ್ಟಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ ತಮಿಳುನಾಡಿನ ಸಿಎಂ ಜಯಲಲಿತಾ
ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ಜಯಾ
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ತಮಿಳುನಾಡಿನ ಸಿಎಂ ಜಯಲಲಿತಾ