ಕಳಂಕಿತ ಜನಪ್ರತಿನಿಧಿಗಳಿಗೆ ಸರ್ಕಾರದ ಬೆಂಬಲ

ಮಂಗಳವಾರ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಸುಗ್ರೀವಾಜ್ಞೆಗೆ ಅನುಮೋದನೆ ಪಡೆಯಲಾಗಿದೆ. ಈ ಮೂಲಕ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಗುರಿಯಾದ ಶಾಸಕ ಅಥವಾ ಸಂಸದರನ್ನು ಕೂಡಲೇ ಅನರ್ಹಗೊಳಿಸಿ ಎಂಬ ಸುಪ್ರೀಂ ಆದೇಶಕ್ಕೆ ಹಿನ್ನಡೆಯಾಗಿದೆ.
ಅಧೀನ ನ್ಯಾಯಾಲಯಗಳು ಜನಪ್ರತಿನಿಧಿಗಳ ವಿರುದ್ಧ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗುವ ಮೇಲ್ಮನವಿಯನ್ನು ಉನ್ನತ ನ್ಯಾಯಾಲಯಗಳು 90 ದಿನದೊಳಗೆ ಒಪ್ಪಿಕೊಂಡರೆ ಅಂಥ ಶಾಸಕ ಅಥವಾ ಸಂಸದರು ಶಿಕ್ಷೆಗೊಳಗಾಗಿದ್ದರೂ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಸುಗ್ರೀವಾಜ್ಞೆ ಅವಕಾಶ ಕಲ್ಪಿಸಿದೆ.
ಜನಪ್ರತಿನಿಧಿಗಳು ವಿಧಾನಸಭೆ ಹಾಗೂ ಸಂಸತ್ನ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬಹುದು. ಆದರೆ, ಅವರ ವಿರುದ್ಧದ ಪ್ರಕರಣ ಇತ್ಯರ್ಥವಾಗುವ ತನಕ ಕಳಂಕಿತರು ಮತ ಹಾಕುವಂತಿಲ್ಲ ಹಾಗೂ ವೇತನ ಸ್ವೀಕರಿಸುವಂತಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.
ಕಳಂಕಿತ ಜನಪ್ರತಿನಿಧಿಗಳ ವಿರುದ್ಧ ಸುಪ್ರೀಂ ಕೊರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸುವ ಸಲುವಾಗಿ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಎಲ್ಲಾ ಪಕ್ಷಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಜನಪ್ರತಿನಿಧಿ ಕಾಯಿದೆ (ಎರಡನೇ ತಿದ್ದುಪಡಿ) ವಿಧೇಯಕ ರೂಪಿಸಿ ರಾಜ್ಯಸಭೆಯಲ್ಲಿ ಮಂಡಿಸಿದೆ.
ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಈ ವಿಧೇಯಕ ಮಂಡನೆಯಾಗಲಿದ್ದು, ಸಂಸತ್ ಉಭಯ ಸದನಗಳ ಒಪ್ಪಿಗೆ ದೊರೆತರೆ, ಜೈಲು ಶಿಕ್ಷೆಗೆ ಒಳಗಾಗಿರುವ ಜನಪ್ರತಿನಿಧಿಗಳ ಸ್ಥಾನಗಳಿಗೆ ಯಾವುದೇ ಭಯವಿರುವುದಿಲ್ಲ. (2 ವರ್ಷ ಜೈಲಿನಲ್ಲಿದ್ದರೆ ಶಾಸಕ, ಸಂಸದ ಸ್ಥಾನ ಅನರ್ಹ)
ಕಳಂಕಿತರು ಎಷ್ಟು : ದೇಶದಲ್ಲಿ ಶೇ.31ರಷ್ಟು ಜನಪ್ರತಿನಿಧಿಗಳು ಕಳಂಕಿತರು ಎಂದು 'ನ್ಯಾಷನಲ್ ಎಲೆಕ್ಷನ್ ವಾಚ್' ಹಾಗೂ 'ಪ್ರಜಾಪ್ರಭುತ್ವ ಸುಧಾರಣಾ ಒಕ್ಕೂಟ' (ಎಡಿಆರ್) ಸಿದ್ಧಪಡಿಸಿರುವ ವರದಿ ಬಹಿರಂಗೊಳಿಸಿದೆ.
ವರದಿಯಂತೆ ದೇಶದ ಒಟ್ಟು 4,835 ಶಾಸಕರು ಹಾಗೂ ಸಂಸದರಲ್ಲಿ 1,448 ಮಂದಿ ವಿರುದ್ಧ ಕ್ರಿಮಿನಲ್ ಪ್ರಕಕರಣಗಳಿವೆ. 162 ಸಂಸದರ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ. 641 ಶಾಸಕರ ವಿರುದ್ಧ ಕೊಲೆ, ಅತ್ಯಾಚಾರ, ಸುಲಿಗೆ, ಅಪಹರಣ ಮುಂತಾದ ಪ್ರಕರಣಗಳು ದಾಖಲಾಗಿವೆ.












Click it and Unblock the Notifications