Government employees transfer: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಕುರಿತು ಹೊಸ ಮಾರ್ಗಸೂಚಿ, ಇಲ್ಲಿದೆ ನೆಮ್ಮದಿ ಸುದ್ದಿ
Government Employees: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಿಗಳ ಕುರಿತು ಸರ್ಕಾರವು ಆಗಾಗ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಹಾಗೆಯೇ ಇದೀಗ ನೌಕರರ ವರ್ಗಾವಣೆ ಸಂಬಂಧ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗುತ್ತಿದ್ದ ಗೊಂದಲಗಳಿಗೆ ತೆರೆ ಎಳೆಯುವ ಹೊಸ ಮಾರ್ಗಸೂಚಿಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಅಬಕಾರಿ ಉಪ ಆಯುಕ್ತ ಕೆ.ಅರುಣ್ ಕುಮಾರ್ ಅವರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆ ಯಾವುದೇ ನೌಕರರನ್ನು ಸ್ಥಳನಿಯೋಜನೆ ಮಾಡದೇ ಕಡ್ಡಾಯ ನಿರೀಕ್ಷಣೆಯಲ್ಲಿ ಇಡುವುದು ನ್ಯಾಯಾಲಯದ ನಿರ್ದೇಶನಕ್ಕೆ ವಿರುದ್ಧ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹೈಕೋರ್ಟ್ನಿಂದ ಮಹತ್ವದ ತೀರ್ಪು
ಕೋರ್ಟ್ ನೀಡಿದ ಈ ಮಹತ್ವದ ತೀರ್ಪು ಆಡಳಿತಾತ್ಮಕ ವ್ಯವಸ್ಥೆಯಲ್ಲಿನ ಪ್ರಮುಖ ಬದಲಾವಣೆಗೆ ಕಾರಣವಾಗಿದೆ. ಈವರೆಗೆ ಕೆಲ ಸಮಯದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬಳಿಕ ಅವರನ್ನು ತಕ್ಷಣ ಸ್ಥಳನಿಯುಕ್ತಿ ನೀಡದೆ ನಿರೀಕ್ಷಣೆಯಲ್ಲಿ ಇಡಲಾಗುತ್ತಿತ್ತು. ಪರಿಣಾಮ ನೌಕರರ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿತ್ತು. ಅಲ್ಲದೆ ಆಡಳಿತಾತ್ಮಕ ಕಾರ್ಯಚಟುವಟಿಕೆಗಳಲ್ಲಿ ವಿಳಂಬ ಆಗುತ್ತಿತ್ತು.
ಹೊಸ ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳು
ಹೊಸ ಮಾರ್ಗಸೂಚಿ ಪ್ರಕಾರ ಸಾಮಾನ್ಯವಾಗಿ ಯಾವುದೇ ಅಧಿಕಾರಿ ಅಥವಾ ನೌಕರರನ್ನು ವರ್ಗಾವಣೆ ಮಾಡುವ ವೇಳೆ ಮುಂದಿನ ಹುದ್ದೆಯನ್ನು ಸೂಚಿಸದೆ ವರ್ಗಾವಣೆ ಆದೇಶ ಹೊರಡಿಸಬಾರದು. ಇದು ನೌಕರರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಆಡಳಿತಾತ್ಮಕ ಗೌರವವನ್ನು ಹೆಚ್ಚಿಸುತ್ತದೆ. ಆದರೆ ಕಾನೂನು ಸಂಬಂಧಿತ ಸಮಸ್ಯೆಗಳು, ಅಮಾನತು, ಹಣದ ದುರ್ಬಳಕೆ, ಅಧಿಕಾರ ದುರುಪಯೋಗ, ಗಂಭೀರ ಇಲಾಖಾ ವಿಚಾರಣೆಗಳಂತಹ ಪ್ರಕರಣಗಳಲ್ಲಿ ಮಾತ್ರ ತಕ್ಷಣ ಸ್ಥಳನಿಯುಕ್ತಿ ನೀಡಲು ಸಾಧ್ಯವಾಗದಿದ್ದರೆ, ಗರಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷಣೆಯಲ್ಲಿ ಇಡಬಾರದು ಎಂದು ಸರ್ಕಾರ ತಿಳಿಸಿದೆ.
ಅತ್ಯಂತ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಸೂಕ್ತ ಕಾರಣಳೊಂದಿಗೆ ಮುಖ್ಯಮಂತ್ರಿಯವರ ಪೂರ್ವಾನುಮೋದನೆ ಪಡೆದು ಗರಿಷ್ಠ ಮೂರು ತಿಂಗಳವರೆಗೆ ಕಡ್ಡಾಯ ನಿರೀಕ್ಷಣೆಯಲ್ಲಿಡಬಹುದು. ಇದು ಆಡಳಿತಾತ್ಮಕ ನಿರ್ಧಾರಗಳಿಗೆ ರಾಜಕೀಯ ಮತ್ತು ಕಾನೂನುಮಟ್ಟದ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.
ಈ ಆದೇಶವು ನೌಕರರ ಹಕ್ಕುಗಳನ್ನು ಕಾಪಾಡುವ ಜೊತೆಗೆ, ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ಶಿಸ್ತನ್ನು ತರಲು ಸಹಾಯಕ ಆಗಲಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಉಂಟಾಗುವ ಅಸ್ಪಷ್ಟತೆಗಳನ್ನು ನಿವಾರಿಸಿ ನೌಕರರಿಗೆ ನ್ಯಾಯ ದೊರಕುವಂತೆ ಮಾಡುವ ಉದ್ದೇಶದಿಂದ ಸರ್ಕಾರವು ಈ ಕ್ರಮ ಕೈಗೊಂಡಿದೆ. ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ ಈ ಪ್ರಕಟಣೆಯನ್ನು ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದುವರೆಗೆ ರಾಜಕೀಯ ಪ್ರಭಾವ ಅಥವಾ ಇಲಾಖೆಯೊಳಗಿನ ಗೊಂದಲಗಳಿಂದ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಿಂಗಳುಗಟ್ಟಲೆ ಯಾವುದೇ ಪೋಸ್ಟಿಂಗ್ ನೀಡದೆ ಕಾಯಿಸಲಾಗುತ್ತಿತ್ತು. ಇದರಿಂದ ನೌಕರರ ಮಾನಸಿಕ ನೆಮ್ಮದಿ ಹಾಳಾಗುವುದರ ಜೊತೆಗೆ ಇಲಾಖೆಯ ಕೆಲಸ ಕಾರ್ಯಗಳೂ ವಿಳಂಬವಾಗುತ್ತಿದ್ದವು. ಸರ್ಕಾರದ ಈ ಹೊಸ ಆದೇಶದಿಂದಾಗಿ ಸಚಿವಾಲಯದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲಾ ಇಲಾಖಾ ಮುಖ್ಯಸ್ಥರು ಇನ್ಮುಂದೆ ನಿಯಮ ಉಲ್ಲಂಘಿಸುವಂತಿಲ್ಲ. ಈ ಹೊಸ ನಿಯಮವು ಆಡಳಿತದಲ್ಲಿ ಪಾರದರ್ಶಕತೆ ತರಲಿದ್ದು, ನೌಕರರ ಹಕ್ಕುಗಳನ್ನು ರಕ್ಷಿಸಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications