ರೈತರ ಪ್ರತಿಭಟನೆ: 50,000 ಕೋಟಿ ರೂಪಾಯಿ ವ್ಯವಹಾರ ನಷ್ಟವಾಗಿದೆ ಎಂದ CAIT
ನವದೆಹಲಿ, ಜನವರಿ 22: ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ಇಲ್ಲಿಯವರೆಗೆ ಸುಮಾರು 50,000 ಕೋಟಿ ರೂಪಾಯಿ ವ್ಯವಹಾರ ನಷ್ಟವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.
''ಎದುರಾಗಿರುವ ಬಿಕ್ಕಟ್ಟನ್ನು ಸರಿಪಡಿಸಲು ಕೃಷಿ ಕಾಯ್ದೆಗಳ ಜಾರಿಯನ್ನು ಮುಂದಿನ ಒಂದೂವರೆ ವರ್ಷ ಅಮಾನತುಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಮತ್ತು ರೈತ ಮುಖಂಡರೊಂದಿಗೆ ಜಂಟಿ ಸಮಿತಿಯನ್ನು ರಚಿಸುವ ಸರ್ಕಾರದ ಹೊಸ ಪ್ರಸ್ತಾಪವು ಸಾಕಷ್ಟು ಸಮರ್ಥನೀಯ ಮತ್ತು ಸಮಂಜಸವಾಗಿದೆ'' ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.
1.5 ವರ್ಷ ಕೃಷಿ ಕಾಯ್ದೆ ಅಮಾನತು: ಕೇಂದ್ರ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿದ ರೈತರು
ಈ ಸಂಕಷ್ಟ ಸಂದರ್ಭದಲ್ಲಿ ರೈತರು ಕೇಂದ್ರದ ಪ್ರಸ್ತಾಪವನ್ನು ಕೃಷಿ ಸಮುದಾಯದ ಮತ್ತು ಕೃಷಿ ವ್ಯಾಪಾರದಲ್ಲಿ ತೊಡಗಿರುವವರ ಹಿತದೃಷ್ಟಿಯಿಂದ ಒಪ್ಪಿಕೊಳ್ಳಬೇಕು ಮತ್ತು ಅವರ ಆಂದೋಲನವನ್ನು ಕೈಬಿಡಬೇಕು ಎಂದು ಖಂಡೇಲ್ವಾಲ್ ಹೇಳಿದರು.
ಒಂದು ವೇಳೆ ರೈತರು ಇನ್ನೂ ಸರ್ಕಾರದ ಪ್ರಸ್ತಾವನೆಯನ್ನು ಸ್ವೀಕರಿಸದಿದ್ದರೆ, ಅವರು ಪರಿಹಾರದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ನಿರ್ಣಯಿಸಲಾಗುತ್ತದೆ ಮತ್ತು ಇದರಿಂದ ಸಮಸ್ಯೆಗಳನ್ನು ಸೃಷ್ಟಿಸಲು ಹೆಚ್ಚು ಸಿದ್ಧರಿರುತ್ತವೆ ಎಂದು ಅವರು ಹೇಳಿದರು.
ಇದೇ ವೇಳೆ ಉದ್ದೇಶಿತ ಜಂಟಿ ಸಮಿತಿಯಲ್ಲಿ ವ್ಯಾಪಾರಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಖಂಡೇಲ್ವಾಲ್ ಸರ್ಕಾರಕ್ಕೆ ಮನವಿ ಮಾಡಿದರು.