ಏಳನೇ ಸುತ್ತಿನಲ್ಲೂ ಆಗಲಿಲ್ಲ ಸಂಧಾನ, ಕೃಷಿ ಕಾನೂನು ರದ್ದುಗೊಳಿಸುವುದಿಲ್ಲ ಎಂದ ಕೇಂದ್ರ ಸರ್ಕಾರ!
ನವದೆಹಲಿ, ಜನವರಿ 04: ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಕುರಿತಾದ ಗೊಂದಲವು ಏಳನೇ ಸುತ್ತಿನ ಸಭೆಯಲ್ಲೂ ಪರಿಹಾರ ಕಾಣದೆ ಮುಂದುವರಿದಿದೆ. ರೈತರು ಮತ್ತು ಕೇಂದ್ರದ ನಡುವೆ ನಡೆದ ಸಭೆಯು ಒಮ್ಮತ ಅಭಿಪ್ರಾಯ ಮೂಡಿಬರದೆ ಅಂತ್ಯಗೊಂಡಿದೆ.
ಸಭೆಯಲ್ಲಿ ಪಟ್ಟು ಬಿಡದ ರೈತರು ಬೆಳೆಗಳ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವಂತೆ ಸರ್ಕಾರವನ್ನು ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ. ಜೊತೆಗೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಆದರೆ ಇದಕ್ಕೆ ಒಪ್ಪದ ಸಚಿವರು ಕೃಷಿ ಕಾನೂನು ಹಿಂಪಡೆಯುವುದಿಲ್ಲ, ಸುಪ್ರೀಂಕೋರ್ಟ್ಗೆ ಹೋಗಿ ಎಂದು ತಿಳಿಸಿದ್ದಾರೆ ಎಂದು ರೈತರ ಅಭಿಪ್ರಾಯವನ್ನು ಎನ್ಡಿಟಿವಿ ವರದಿ ಮಾಡಿದೆ.
''ಕೃಷಿ ಸಚಿವ ನರೇಂದ್ರ ತೋಮರ್ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ, ಕಾನೂನುಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗುವಂತೆ ಅವರು ಹೇಳಿದರು" ಎಂದು ಸಭೆಯಲ್ಲಿ ಭಾಗವಹಿಸಿದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸರ್ವಾನ್ ಸಿಂಗ್ ಪಾಂಡರ್ ಹೇಳಿದ್ದಾರೆ.

ಏಳನೇ ಸುತ್ತಿನಲ್ಲೂ ಯಾವುದೇ ಫಲ ಸಿಗದ ಕಾರಣ ಜನವರಿ 8ರಂದು ಮತ್ತೆ ಭೇಟಿಯಾಗಲು ಉಭಯ ಕಡೆಯವರು ಸಮ್ಮತಿಸಿದ್ದಾರೆ. ಅಂದೂ ಕೂಡ ಬೇಡಿಕೆ ಈಡೇರದಿದ್ದರೆ ಜನವರಿ 26 ರಂದು ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ.
ಹಿಂದಿನ ಸಭೆಯಂತೆ ಕೇಂದ್ರದ ಮೂವರು ಮಂತ್ರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯೆಲ್ ಮತ್ತು ಸೋಮ್ ಪ್ರಕಾಶ್ ಉಪಸ್ಥಿತರಿದ್ದರು. ಕೃಷಿ ಕಾನೂನು ಬಗ್ಗೆ ರೈತ ಸಂಘಟನೆಗಳು ಯಾವುದೇ ದೂರು ನೀಡಿದರೆ ಅದನ್ನು ಸರ್ಕಾರ ಪರಿಗಣಿಸುತ್ತದೆ ಎಂದು ಸ್ಪಷ್ಟಪಡಿಸಲಾಯಿತು. ಜೊತೆಗೆ ಜನವರಿ 8ಕ್ಕೆ ಮತ್ತೊಂದು ಸುತ್ತಿನ ಸಭೆಗೆ ಉಭಯ ಕಡೆಯವರು ಒಪ್ಪಿದ್ದಾರೆ.












Click it and Unblock the Notifications