ಸಿಬಿಐ ನಿರ್ದೇಶಕರ ಪದಚ್ಯುತಿ ನ್ಯಾಯಸಮ್ಮತವೆ? ಸುಪ್ರೀಂ ವಿಚಾರಣೆ
ಬೆಂಗಳೂರು, ಅಕ್ಟೋಬರ್ 26 : ಅಧಿಕಾರದ ಅವಧಿ ಇನ್ನೂ ಇದ್ದಾಗಲೇ, ಹಲವಾರು ಪ್ರಮುಖ ಪ್ರಕರಣಗಳ ದಾಖಲೆ ವಶಪಡಿಸಿಕೊಂಡಿದ್ದಲ್ಲದೆ, ರಾತ್ರೋರಾತ್ರಿ ಕಚೇರಿಗೆ ಬೀಗ ಹಾಕಿ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ ನಿರ್ದೇಶಕರನ್ನು ಸುದೀರ್ಘ ರಜಾ ಮೇಲೆ ಕೇಂದ್ರ ಸರಕಾರ ಕಳಿಸಿದ್ದು ನ್ಯಾಯ ಸಮ್ಮತವೆ?
ರಫೇಲ್ ಹಗರಣದ ಮೇಲೆ ಕಣ್ಣಿಟ್ಟಿದ್ದ ಪದಚ್ಯುತ ಸಿಬಿಐನ ನಿರ್ದೇಶಕ ಅಲೋಕ್ ವರ್ಮಾ ಅವರು, ತಮ್ಮ ಮೇಲೆ ಕೇಂದ್ರ ಸರಕಾರ ತೆಗೆದುಕೊಂಡಿರುವ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದವನ್ನು ತಟ್ಟಿದ್ದಾರೆ. ಅವರ ಸ್ಥಾನಕ್ಕೆ ಹಂಗಾಮಿ ನಿರ್ದೇಶಕರಾಗಿ ಎಂ ನಾಗೇಶ್ವರ ರಾವ್ ಅವರನ್ನು ತರಲಾಗಿದೆ.
ಮೋದಿಗೆ ಸಂಚಕಾರ ತರಲಿದ್ದ ಕೇಸುಗಳ ತನಿಖೆ ಮಾಡುತ್ತಿದ್ದ ಅಲೋಕ್ ಕುಮಾರ್
ತಮಗಿಷ್ಟವಾದ ದಿಕ್ಕಿನಲ್ಲಿ ಕೆಲ ಪ್ರಮುಖ ತನಿಖೆಗಳು ಸಾಗುತ್ತಿಲ್ಲವೆಂದು ಕೇಂದ್ರ ಸರಕಾರ ಈ ಕ್ರಮ ಜರುಗಿಸಿದ್ದು, ಇದರಿಂದ ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ ಪ್ರತಿಷ್ಠೆಯನ್ನು ಬಲಿಕೊಡಲಾಗಿದೆ ಎಂದು ಅಲೋಕ್ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ರಾಕೇಶ್ ಅಸ್ಥಾನಾ ಅವರ ಪರವಾಗಿ ಮಾಜಿ ಅಡ್ವೋಕೇಟ್ ಜನರಲ್ ಮತ್ತು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಶುಕ್ರವಾರ ವಾದ ಮಂಡಿಸಲಿದ್ದಾರೆ. ಈಗಾಗಲೆ ಬಿಜೆಪಿ ವಿರುದ್ಧ ಸಿಬಿಐ ಕಚೇರಿಯೆದಿರು ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಒಬ್ಬರ ವಿರುದ್ಧ ಮತ್ತೊಬ್ಬರ ಆರೋಪ
ಅತ್ಯಂತ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಒಬ್ಬರ ಮೇಲೆ ಮತ್ತೊಬ್ಬರು ಹೊರಿಸಿರುವ ಆರೋಪ. ಭ್ರಷ್ಟಾಚಾರ ಆರೋಪ ಹೊತ್ತಿರುವ ವಿಶೇಷ ನಿರ್ದೇಶಕರನ್ನೇ ಕೇಂದ್ರ ಸರಕಾರ ಉಳಿಸಲು ಈ ಕ್ರಮ ಜರುಗಿಸಿದೆ ಎಂಬುದು ವಿರೋಧಿಗಳ ಆರೋಪ. ಸದ್ಯಕ್ಕೆ ಚೆಂಡು ಸುಪ್ರೀಂ ಅಂಗಳದಲ್ಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ತ್ರಿಸದಸ್ಯರ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.
3 ಕೋಟಿ ರುಪಾಯಿ ಲಂಚ ತಿಂದ ಆರೋಪ
ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ವಿರುದ್ಧ 3 ಕೋಟಿ ರುಪಾಯಿ ಲಂಚ ತಿಂದ ಆರೋಪ ಹೊರಿಸಿ ಸಿಬಿಐನ ನಿರ್ದೇಶಕರಾದ ಅಲೋಕ್ ವರ್ಮಾ ಅವರೇ ತನಿಖೆಗೆ ಆದೇಶಿಸಿದ್ದರು. ಇದು ಇಬ್ಬರು ಅತ್ಯುನ್ನತ ಅಧಿಕಾರಗಳ ನಡುವಿನ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತು. ಮತ್ತೊಂದು ಪ್ರಕರಣವೊಂದರಲ್ಲಿ ತನಿಖೆ ನಡೆಸುತ್ತಿದ್ದ ರಾಕೇಶ್ ಅಸ್ಥಾನಾ ಅವರೇ ಆರೋಪಿ ಉದ್ಯಮಿಯಿಂದ ಭಾರೀ ಮೊತ್ತದ ಹಣ ಪಡೆದಿದ್ದರು, ಅಲ್ಲದೆ ಅವರು ಹಣ ಕೀಳುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ ಎಂಬುದು ಅವರ ಮೇಲಿರುವ ಆರೋಪವಾಗಿತ್ತು. ಇವರ ವಿರುದ್ಧ ತನಿಖೆ ಆರಂಭಿಸಿದ ಕೆಲವೇ ದಿನಗಳಲ್ಲಿ ಅಲೋಕ್ ವರ್ಮಾ ಅವರನ್ನು ಪದಚ್ಯುತಗೊಳಿಸಲಾಗಿರುವುದು ವಿವಾದಕ್ಕೆ ಗುರಿಯಾಗಿದೆ.
ಅಲೋಕ್ ವರ್ಮಾ ವಿರುದ್ಧ ರಾಕೇಶ್ ಆರೋಪ
ಸೇಡಿಗೆ ಸೇಡು ಎಂಬಂತೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿರುದ್ಧವೇ ವಿಶೇಷ ನಿರ್ದೇಶಕರಾದ ರಾಕೇಶ್ ಅಸ್ಥಾನಾ ಅವರು ಭ್ರಷ್ಟಾಚಾರ ಮಾಡಿರುವ ಆರೋಪ ಹೊರಿಸಿದ್ದರು. ಅದೇ ಉದ್ಯಮಿಯಿಂದ ಅಲೋಕ್ ವರ್ಮಾ ಅವರೂ ಲಂಚ ಪಡೆದಿದ್ದಾರೆ ಎಂದು ರಾಕೇಶ್ ಅವರು ಆರೋಪ ಹೊರಿಸಿದ್ದಾರೆ. ತಮ್ಮ ವಿರುದ್ಧ ಹೂಡಲಾಗಿರುವ ತನಿಖೆಯನ್ನು ಕೈಬಿಡಬೇಕು ಎಂದು ರಾಕೇಶ್ ಅವರು ಸುಪ್ರೀಂ ಕದ ತಟ್ಟಿದ್ದರು. ಆದರೆ, ತನಿಖೆ ನಿಲ್ಲಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಅಕ್ಟೋಬರ್ 29ರವರೆಗೆ ಅವರನ್ನು ಬಂಧಿಸಬಾರದು ಎಂದು ಮಾತ್ರ ಆದೇಶ ನೀಡಿದೆ. ರಾಕೇಶ್ ಅಸ್ಥಾನಾ ಅವರನ್ನೂ ಕೇಂದ್ರ ಸರಕಾರ ಸುದೀರ್ಘ ರಜೆಯ ಮೇಲೆ ಮನೆಗೆ ಕಳಿಸಿದೆ.
ಸಿಬಿಐ ಮುಖ್ಯಸ್ಥ ಅಲೋಕ್ ಮೇಲೆ ಕಣ್ಗಾವಲು ಸುದ್ದಿಗೆ ರೆಕ್ಕೆಪುಕ್ಕ!
ಅಧಿಕಾರಿಗಳ ಹೋಲ್ಸೇಲ್ ವರ್ಗಾವಣೆ
ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನಾ ಮತ್ತು ಅವರ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳು ಕೂಡ ಅವರಿಬ್ಬರ ವಿರುದ್ಧದ ತನಿಖೆಯನ್ನು ಮಾಡಬಾರದು ಎಂದು ಸೆಂಟ್ರಲ್ ವಿಜಿಲನ್ಸ್ ಸಮಿತಿ ಶಿಫಾರಸು ಮಾಡಿದ್ದರಿಂದ ಅಲೋಕ್ ವರ್ಮಾ ಅವರನ್ನೂ ರಾತ್ರೋರಾತ್ರಿ ಕೇಂದ್ರ ಸರಕಾರ ಮನೆಗೆ ಕಳಿಸಿತು. ಅಲ್ಲದೆ, ಈ ಆಂತರಿಕ ತನಿಖೆಯನ್ನು ಕೈಗೊಂಡಿದ್ದ ಹಲವಾರು ಅಧಿಕಾರಿಗಳನ್ನು ಹೋಲ್ಸೇಲ್ ಆಗಿ ವರ್ಗಾವಣೆ ಮಾಡಲಾಯಿತು. ಈ ಆದೇಶಕ್ಕೆ ಮಧ್ಯರಾತ್ರಿ 2 ಗಂಟೆಗೆ ಅಧಿಕಾರ ವಹಿಸಿಕೊಂಡ ಎಂ ನಾಗೇಶ್ವರ ರಾವ್ ಅವರು ಸಹಿ ಮಾಡಿದ್ದಾರೆ.
ತೆಲಂಗಾಣ ಮೂಲದ ನಾಗೇಶ್ವರ್ ಈಗ ಸಿಬಿಐ ಹಂಗಾಮಿ ನಿರ್ದೇಶಕ
ಯಾರು ಯಾರನ್ನು ಪ್ರತಿನಿಧಿಸುತ್ತಿದ್ದಾರೆ
89 ವರ್ಷದ ಹಿರಿಯ ವಕೀಲ ಫಾಲಿ ನಾರಿಮನ್ ಅವರು ಪದಚ್ಯುತ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಪರವಾಗಿ ವಾದ ಮಂಡಿಸಲಿದ್ದಾರೆ. ಮುಕುಲ್ ರೋಹಟ್ಗಿ ಅವರು ವಿಶೇಷ ನಿರ್ದೇಶಕ ಮತ್ತು ಭ್ರಷ್ಟಾಚಾರದ ಆರೋಪಿ ರಾಕೇಶ್ ಅಸ್ಥಾನಾ ಅವರನ್ನು ಪ್ರತಿನಿಧಿಸಲಿದ್ದಾರೆ. ಕೇಂದ್ರ ಸರಕಾರದ ಪರವಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ವಾದಿಸಲಿದ್ದರೆ, ಕೇಂದ್ರ ಜಾಗೃತ ಸಮಿತಿಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರತಿನಿಧಿಸಲಿದ್ದಾರೆ.
ಸಿಬಿಐ ನಿರ್ದೇಶಕರನ್ನು ಕಿತ್ತೊಗೆಯಲು ಕೇಂದ್ರಕ್ಕೆ ಅಧಿಕಾರವಿಲ್ಲ : ಪ್ರಶಾಂತ್