ಮತಯಂತ್ರ ದೋಷ: ಸುಪ್ರೀಂ ಮೊರೆ ಹೋಗಲಿರುವ ವಿಪಕ್ಷಗಳು
ನವದೆಹಲಿ, ಏಪ್ರಿಲ್ 24: ಮೂರನೇ ಹಂತದ ಲೋಕಸಭಾ ಚುನಾವಣೆಯ ನಂತರ ಮತಯಂತ್ರ ದೋಷದ ಆರೋಪದೊಂದಿಗೆ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆಹೋಗುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏಪ್ರಿಲ್ 23 ರಂದು ಲೋಕಸಭೆಯ ಮೂರನೇ ಹಂತದ ಮತದಾನ ಒಟ್ಟು 15 ರಾಜ್ಯಗಳ, 117 ಕ್ಷೇತ್ರಗಳಲ್ಲಿ ನಡೆದಿತ್ತು. ಇವುಗಳಲ್ಲಿ ಹಲವು ಇವಿಎಂ(Electronic Voting Machines) ಮತ್ತು ವಿವಿಪ್ಯಾಟ್(Voter Verifiable Paper Audit Trail) ಗಳು ದೋಷಪೂರಿತವಾಗಿದ್ದವು ಎಂದು ವಿರೋಧ ಪಕ್ಷಗಳು ದೂರಿದ್ದವು.
"ಕನಿಷ್ಠ ಪಕ್ಷ ಏ.50 ರಷ್ಟು ವಿವಿಪ್ಯಾಟ್ ಸ್ಲಿಪ್ ಗಳನ್ನು ಒಮ್ಮೆ ಪರಿಶೀಲಿಸಿ, ನಂತರವೇ ಮತಎಣಿಕೆ ಮಾಡಬೇಕು ಎಂದು ನಾವು ಸುಪ್ರೀಂ ಕೋರ್ಟ್ ಗೆ ಮೊರೆಹೋಗಲಿದ್ದೇವೆ" ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ, ಟಿಡಿಪಿ ಮುಖಂಡ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಕಾಂಗ್ರೆಸ್, ಎನ್ ಸಿಪಿ, ಟಿಡಿಪಿ, ಟಿಎಂಸಿ, ಎಎಪಿ, ಸಿಪಿಐಎಂ, ಸಿಪಿಐ, ಡಿಎಂಕೆ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆಹೋಗುವುದಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿವೆ.
ಕಳೆದ ಲೋಕಸಭೆ ಚುನಾವಣೆ ಮತ್ತು ನಂತರ ನಡೆದ ಹಲವು ವಿಧಾನಸಭೆ ಚುನಾವಣೆಯ ಸಮಯದಲ್ಲೂ ವಿಪಕ್ಷಗಳು ಇವಿಎಂ ದೋಷದ ಬಗ್ಗೆ ಸುಪ್ರೀಂ ಮೊರೆಹೋಗಿದ್ದವು. ಇವಿಎಂ ಅನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದವು. ಆದರೆ ಇವಿಎಂ ಅನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬ ಆದೇಶ ನೀಡಿ, ಸುಪ್ರೀಂ ಕೋರ್ಟ್ ವಿಪಕ್ಷಗಳಿಗೆ ಮುಖಭಂಗವನ್ನುಂಟು ಮಾಡಿತ್ತು.
ಲೋಕಸಭೆಗೆ ಈಗಾಗಲೇ ಒಟ್ಟು 3 ಹಂತಗಳಲ್ಲಿ ಚುನಾವಣೆ ನಡೆದಿದ್ದು, ಇನ್ನೂ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಬೇಕಿದೆ. ಮೇ 19 ರವರೆಗೆ ಚುನಾವಣೆ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications