ಡಿ.ಕೆ.ಶಿವಕುಮಾರ್ ವಿರುದ್ಧ ರಾಶಿಗಟ್ಟಲೆ ಸಾಕ್ಷ್ಯ ನೀಡಿದ ಇಡಿ
ನವದೆಹಲಿ, ಸೆಪ್ಟೆಂಬರ್ 19: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಪರ ವಕೀಲರು ಇಂದು ನ್ಯಾಯಾಲಯದಲ್ಲಿ ರಾಶಿಗಟ್ಟಲೆ ದಾಖಲೆಗಳನ್ನು ಸಾಕ್ಷ್ಯವಾಗಿ ನೀಡಿದರು.
ಡಿ.ಕೆ.ಶಿವಕುಮಾರ್ ಅವರ ಬ್ಯಾಂಕ್ ಖಾತೆ ದಾಖಲೆ, ಆದಾಯ ತೆರಿಗೆ ಪಾವತಿ, ಆಸ್ತಿ ದಾಖಲೆ, ಡಿ.ಕೆ.ಶಿವಕುಮಾರ್ ಕುಟುಂಬದವರ ಬ್ಯಾಂಕ್ ಖಾತೆ ದಾಖಲೆ, ವ್ಯವಹಾರ, ಆಸ್ತಿ ಖರೀದಿ ದಾಖಲೆ ಡಿ.ಕೆ.ಶಿವಕುಮಾರ್ ಆಪ್ತರ ವ್ಯವಹಾರ, ಆಸ್ತಿ ದಾಖಲೆಗಳು ಅದರಲ್ಲಿ ಸೇರಿತ್ತು.
ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡುವುದನ್ನು ಕಠುವಾಗಿ ವಿರೋಧಿಸಿದ ಇಡಿ ಪರ ವಕೀಲ ನಟರಾಜನ್, 'ಡಿ.ಕೆ.ಶಿವಕುಮಾರ್ ಅವರು ಮಾಡಿರುವ ಭ್ರಷ್ಟಾಚಾರದ ತುಣುಕು ಅಷ್ಟೆ ಇದು' ಎಂದು ನ್ಯಾಯಾಲಯಕ್ಕೆ ಹೇಳಿದರು.

'ಸಾಲಕೊಟ್ಟವರ ಹೆಸರೂ ಸಹ ಗೊತ್ತಿಲ್ಲ ಐಶ್ವರ್ಯಾಗೆ'
'ಡಿಕೆ.ಶಿವಕುಮಾರ್ ಅವರ ನಾಲ್ಕು ಬ್ಯಾಂಕ್ ಖಾತೆಗಳ ಬಗ್ಗೆ ಇನ್ನೂ ತನಿಖೆ ಆಗಬೇಕಿದೆ. ಅಷ್ಟೆ ಅಲ್ಲ ಡಿ.ಕೆ.ಶಿವಕುಮಾರ್ ಮಗಳು ಕೋಟ್ಯಂತರ ಸಾಲ ಪಡೆದಿದ್ದಾರೆ ಎಂದು ಆದಾಯ ಮಾಹಿತಿಯಲ್ಲಿ ಹೇಳಲಾಗಿದೆ. ಆದರೆ ಆಕೆಗೆ ಸಾಲ ಕೊಟ್ಟವರು ಯಾರು ಎಂಬುದು ಸಹ ಗೊತ್ತಿಲ್ಲ' ಎಂದು ನಟರಾಜ್ ವಾದ ಮಾಡಿದರು.

ಕೃಷಿ ಮೂಲದಿಂದ ಇಷ್ಟೋಂದು ಆದಾಯ ಗಳಿಸಲು ಸಾಧ್ಯವೇ: ಇಡಿ
ಕೃಷಿ ಮೂಲದಿಂದ ಕಳೆದ ವರ್ಷ 1.38 ಕೋಟಿ ಆದಾಯ ಬಂದಿದೆ ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ಆದರೆ 20 ವರ್ಷದ ಕೃಷಿ ಆದಾಯವನ್ನೂ ಒಟ್ಟು ಸೇರಿಸಿದರೂ 830 ಕೋಟಿ ಆಸ್ತಿ ಆಗುವುದಿಲ್ಲ ಹಾಗಿದ್ದಮೇಲೆ ಅಷ್ಟೊಂದು ಹಣ ಸಂಪಾದನೆ ಮಾಡಿದ್ದು ಹೇಗೆ? ಎಂದು ಪ್ರಶ್ನಿಸಿದರು ಇಡಿ ಪರ ವಕೀಲ ನಟರಾಜ್.

ನೋಟ್ ಬ್ಯಾನ್ ಆದಾಗ ಡಿಕೆಶಿ ಹಣ ವರ್ಗಾವಣೆ?
ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ ನಟರಾಜ್, ಹವಾಲಾ ದಂಧೆ ನಡೆದಿದೆ, ಅದು ಹೇಗೆ ನಡೆದಿದೆ ಎಂದು ತನಿಖೆ ನಡೆಯುತ್ತಿದೆ. ಅಕ್ರಮ ಹಣದಿಂದ ಸಂಪಾದಿಸಿದ ಆಸ್ತಿ ಅಪರಾಧದ ಆಸ್ತಿ ಆಗುತ್ತದೆ. ಅದೂ ಸಹ ಕ್ರಿಮಿನಲ್ ಅಪರಾಧವೇ ಹಾಗಾಗಿ ಇದನ್ನು ಐಟಿ ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಜಾಮೀನು ಕೇಳುವುದರಲ್ಲಿ ಅರ್ಥವಿಲ್ಲ ಎಂದು ನಟರಾಜ್ ವಾದಿಸಿದರು.

ಜಾಮೀನು ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ
ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಾಗಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಡಿಕೆಶಿ ಶನಿವಾರದ ವರೆಗೆ ತಿಹಾರ್ ಜೈಲಿನಲ್ಲಿ ದಿನ ಕಳೆಯಲಿದ್ದಾರೆ.












Click it and Unblock the Notifications