ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಬೇಡಿ : ದೆಹಲಿ ಸರ್ಕಾರ
ನವದೆಹಲಿ, ಜ. 17: ಶಾರುಖ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ನಟ, ನಟಿಯರಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಮನವಿ ಮಾಡಿಕೊಂಡಿದೆ. ದಯವಿಟ್ಟು ಆರೋಗ್ಯಕ್ಕೆ ಹಾನಿಕಾರವಾದ ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಬೇಡಿ, ನೀವು ನೀಡುವ ಪ್ರಚಾರದಿಂದ ಸಾರ್ವಜನಿಕರಿಗೆ ತೊಂದರೆ ಎಂದು ಅರವಿಂದ್ ಕೇಜ್ರಿವಾಲ್ ಕೋರಿದ್ದಾರೆ.
ನಟ ಶಾರುಖ್ ಖಾನ್ ಅಲ್ಲದೆ, ಅಜಯ್ ದೇವಗನ್, ಸೈಫ್ ಅಲಿ ಖಾನ್, ಗೋವಿಂದ, ಅರ್ಬಾಜ್ ಖಾನ್, ಸನ್ನಿ ಲಿಯೋನ್ ಅವರಿಗೆ ಈ ರೀತಿ ಮನವಿ ಪತ್ರವೊಂದು ತಲುಪಿದೆ. ಪಾನ್ ಮಸಾಲದಲ್ಲಿರುವ ಅಡಿಕೆ ಕ್ಯಾನ್ಸರ್ ಕಾರಕ ಎಂದು ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಈ ಜಾಹೀರಾತುಗಳನ್ನು ಕೈಬಿಟ್ಟು ನಮ್ಮ ತಂಬಾಕು ವಿರೋಧಿ ಅಭಿಯಾನದೊಡನೆ ಕೈ ಜೋಡಿಸಿ, ಇದರಿಂದ ಲಕ್ಷಾಂತರ ಮಂದಿ ಜೀವ ಉಳಿಸಬಹುದು. ಬಾಯಿ ಕ್ಯಾನ್ಸರ್ ನಿಂದ ಲಕ್ಷಾಂತರ ಮಂದಿ ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ ಎಂದು ವಿವರಿಸಲಾಗಿದೆ.
ತಜ್ಞರ ಪ್ರಕಾರ ಕೆಫೈನ್, ತಂಬಾಕು ಹಾಗೂ ಆಲ್ಕೋಹಾಲ್ ನಂತೆ ಪಾನ್ ಮಸಾಲ ಕೂಡಾ ಚಟವಾಗಿ ಬಹುಬೇಗ ಜನರಿಗೆ ಅಂಟಿಕೊಳ್ಳುತ್ತದೆ, ಇದರಿಂದ ಕ್ಯಾನ್ಸರ್ ರೋಗ ಬೆಳೆಯುತ್ತದೆ. ನೀವೆಲ್ಲ ದೇಶದ ಯುವ ಜನತೆಗೆ ಮಾದರಿಯಾಗಿದ್ದೀರಿ, ನಿಮ್ಮ ಮಾತು ನಂಬಿ ಚಟ ಬೆಳೆಸಿಕೊಂಡವರು ಯಾರ ಮಾತನ್ನು ಕೇಳುವುದಿಲ್ಲ. ಹೀಗಾಗಿ ನಿಮಗೆ ದೇಶದ ಯುವ ಜನತೆ ತಿದ್ದುವ ಅವಕಾಶ ಇಲ್ಲಿದೆ ಎಂಡು ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ. ಎಸ್ ಕೆ ಅರೋರಾ ಹೇಳಿದ್ದಾರೆ.












Click it and Unblock the Notifications