ಎಂಜೆ ಅಕ್ಬರ್ ಕೇಸ್: ಪತ್ರಕರ್ತೆ ಪ್ರಿಯಾ ರಮಣಿಗೆ ಕೋರ್ಟಿನಿಂದ ಸಮನ್ಸ್
ನವದೆಹಲಿ, ಜನವರಿ 29: ಕೇಂದ್ರದ ಮಾಜಿ ಸಚಿವ, ಮಾಜಿ ಸಂಪಾದಕ ಎಂಜೆ ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಅವರನ್ನು ಆರೋಪಿಯನ್ನಾಗಿಸಲಾಗಿದೆ. ದೆಹಲಿಯ ಕೋರ್ಟ್ ವೊಂದರಿಂದ ಮಂಗಳವಾರದಂದು ಪ್ರಿಯಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಎಂಜೆ ಅಕ್ಬರ್ ಅವರೊಂದಿಗೆ ಈ ಹಿಂದೆ ಸಹದ್ಯೋಗಿಯಾಗಿದ್ದ ಪ್ರಿಯಾ ರಮಣಿ ಎಂಬುವರು ಮೊದಲಿಗೆ ಟ್ವಿಟ್ಟರ್ನಲ್ಲಿ #metoo ಅಭಿಯಾನದ ಅಡಿ ಎಂಜೆ ಅಕ್ಬರ್ ಅವರ ಕಾಮಚೇಷ್ಟೆಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದರು.
#MeToo : ಎಂಜೆ ಅಕ್ಬರ್ ವಿರುದ್ಧ ತಿರುಗಿಬಿದ್ದ ಸಂತ್ರಸ್ತ ವನಿತೆಯರು
ದೆಹಲಿಯ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಎಂಜೆ ಅಕ್ಬರ್ ಅವರು ಪ್ರಿಯಾ ಅವರ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಮನವಿಯನ್ನು ಪುರಸ್ಕರಿಸಿ, ಪ್ರಿಯಾಗೆ ಸಮನ್ಸ್ ಜಾರಿ ಮಾಡಿದ್ದು, ಫೆಬ್ರವರಿ 25ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾ, ನಮ್ಮ ಕಥೆ ವ್ಯಥೆ ಹೇಳಿಕೊಳ್ಳುವ ಸಮಯ ಬಂದಿದೆ ಎಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಜೆ ಅಕ್ಬರ್ ಸೇರಿದಂತೆ 7 ಮಂದಿ ತಮ್ಮ ಹೇಳಿಕೆಗಳನ್ನು ಕೋರ್ಟಿನಲ್ಲಿ ಜನವರಿ 11ರಂದು ದಾಖಲಿಸಿದ್ದಾರೆ.
ಈಗ ನನ್ನ ಕಥೆ ಹೇಳುವ ಸಮಯ ಬಂದಿದೆ : ಪ್ರಿಯಾ ರಮಣಿ
ಟೆಲಿಗ್ರಾಫ್, ಏಷ್ಯನ್ ಏಜ್, ದಿ ಸಂಡೇ ಗಾರ್ಡಿಯನ್ ಮುಂತಾದ ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕರಾಗಿದ್ದ ಎಂಜೆ ಅಕ್ಬರ್ ಅವರು ಭಾರತೀಯ ಜನತಾ ಪಕ್ಷ ಸೇರಿದರು. ರಾಜ್ಯಸಭಾ ಸದಸ್ಯರಾದ ಅಕ್ಬರ್ ಅವರು ನಂತರ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. 20ಕ್ಕೂ ಅಧಿಕ ಪತ್ರಕರ್ತೆಯರು ಆರೋಪ ಮಾಡಿದ ಬಳಿಕ, ತೀವ್ರ ಒತ್ತಡಕ್ಕೆ ಒಳಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಯಿತು.
ಕಾನೂನು ಹೋರಾಟಕ್ಕಾಗಿ ಸಚಿವ ಹುದ್ದೆಗೆ ರಾಜೀನಾಮೆ
ವಿದೇಶಾಂಗ ಖಾತೆ ರಾಜ್ಯ ಸಚಿವ ಅಕ್ಬರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಿತ್ತು. ಕೇಂದ್ರ ಸರ್ಕಾರ ಕೂಡಾ ಈ ಪ್ರಕರಣದಿಂದ ಭಾರಿ ಮುಜುಗರಕ್ಕೆ ಒಳಗಾಗಿತ್ತು. ಅಂತಿಮವಾಗಿ ಎಂಜೆ ಅಕ್ಬರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿರುವ ಬಗ್ಗೆ ಹೇಳಿಕೆ ನೀಡಿ, ನನ್ನ ಮೇಲೆ ಸುಳ್ಳು ಆರೋಪಗಳು ಬಂದಿರುವ ಕಾರಣ, ರಾಜೀನಾಮೆ ನೀಡಿ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಸ್ವಂತ ಬಲದ ಮೇಲೆ ಹೋರಾಡುತ್ತೇನೆ ಎಂದಿದ್ದರು
ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ
ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿರುವ ಎಂಜೆ ಅಕ್ಬರ್ ಪರ 97 ವಕೀಲರ ದೊಡ್ಡ ತಂಡ ವಾದ ಮಾಡುತ್ತಿದೆ. ಅಕ್ಬರ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಕ್ಬರ್ ವಿರುದ್ಧ 20ಕ್ಕೂ ಅಧಿಕ ಪತ್ರಕರ್ತೆಯರು ಆರೋಪ ಹೊರೆಸಿದ್ದರು. ದೂರು ದಾಖಲಿಸಿ, ಪೊಲೀಸರ ಮುಂದೆ ಹೇಳಿಕೆ ನೀಡಿದವರು ಕಡಿಮೆ. ಪತ್ರಕರ್ತೆ ಪ್ರಿಯಾ ರಮಣಿ ಅವರು ಮುಂಚೂಣಿಯಲ್ಲಿದ್ದಾರೆ.
#metoo ಅಭಿಯಾನದ ಬಿಸಿ ತಟ್ಟಿದೆ
ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ನಂತರ, ಪ್ರಮುಖ ರಾಷ್ಟ್ರೀಯ ದೈನಿಕ ಹಿಂದೂಸ್ತಾನ್ ಟೈಮ್ಸ್ ನ ರಾಜಕೀಯ ವಿಭಾಗದ ಸಂಪಾದಕ, ಮುಖ್ಯ ಬ್ಯೂರೋ ಪ್ರಶಾಂತ್ ಝಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಎಡಿಟರ್ ಕೆಆರ್ ಶ್ರೀನಿವಾಸನ್ ವಿರುದ್ಧ ಪತ್ರಕರ್ತೆ ಸಂಧ್ಯಾ ಮೆನನ್ ಏಳು ಮಂದಿ ಮಹಿಳೆಯರು ಆರೋಪಿಸಿದ್ದಾರೆ. ನಾನಾ ಪಾಟೇಕರ್, ಚಿತ್ರಕರ್ಮಿ ವಿಕಾಸ್ ಬೆಹ್ಲ್, ಲೇಖಕ ಚೇತನ್ ಭಗತ್, ಕಾಮಿಕ್ ಉತ್ಸವ್ ಚಕ್ರವರ್ತಿ, ನಟ ರಜತ್ ಕಪೂರ್ ಅವರಿಗೆ #metoo ಅಭಿಯಾನದ ಬಿಸಿ ತಟ್ಟಿದೆ.
ಮ್ಯಾಗಜೀನ್ ನಲ್ಲಿ ಅಕ್ಬರ್ ವಿರುದ್ಧ ಲೇಖನ
ಅಕ್ಬರ್ ವಿರುದ್ಧ ಮೊದಲ ಬಾರಿ ದನಿಯೆತ್ತಿದ್ದ ಪ್ರಿಯಾ ರಮಣಿ ಅವರು, ಅಕ್ಬರ್ ವಿರುದ್ಧ ನಾವು ಯಾರೂ ಷಡ್ಯಂತ್ರ ಮಾಡಿಲ್ಲ, ಅವರಂತೆ ನಮಗ್ಯಾರಿಗೂ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ. ನಾವು ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಪಣಕ್ಕಿಟ್ಟು ಅವರು ಎಸಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದೇವೆ. ಯಾವುದೇ ಮಾನನಷ್ಟ ಮೊಕದ್ದಮೆಯಾಗಲಿ ಸತ್ಯವೇ ನಮ್ಮ ಬಲವಾದ ರಕ್ಷಣಾ ಅಸ್ತ್ರ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರು ಒಂದು ವರ್ಷದ ಹಿಂದೆಯೇ ಎಂಜೆ ಅಕ್ಬರ್ ಅವರ ಹೆಸರನ್ನು ಪ್ರಸ್ತಾಪಿಸದೆ ವೋಗ್ ಮ್ಯಾಗಜೀನ್ ನಲ್ಲಿ ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ವಿಸ್ತೃತವಾಗಿ ಬರೆದಿದ್ದರು. ಪ್ರಿಯಾ ರಮಣಿಯನ್ನು ಸಂದರ್ಶನಕ್ಕೆಂದೆ ಹೋಟೆಲಿಗೆ ಕರೆದಿದ್ದಲ್ಲದೆ, ಅವರು ಮದ್ಯವನ್ನು ತೆಗೆದುಕೊಳ್ಳಲು ಒತ್ತಾಯಿಸಿ, ರೋಮ್ಯಾಂಟಿಕ್ ಹಾಡನ್ನು ಹಾಡುತ್ತ ಅವರನ್ನು ಪಲ್ಲಂಗದ ಮೇಲೆ ತಮ್ಮ ಪಕ್ಕದ ಕೂಡಬೇಕೆಂದು ಒತ್ತಾಯಿಸಿದ್ದರು.