ಕೇಜ್ರಿವಾಲ್ ಮನವಿಗೆ ಹರಿದು ಬಂತು ಲಕ್ಷ ಲಕ್ಷ ಕಾಂಚಾಣ
ನವದೆಹಲಿ, ಜುಲೈ 17: ಸಂಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕರೆಗೆ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪೂರಕವಾಗಿ ಸ್ಪಂಧಿಸಿದ್ದಾರೆ.
ಪಕ್ಷದ ಚಟುವಟಿಕೆಗಾಗಿ ಸಹಾಯ ಹಸ್ತ ನೀಡಿ ಎಂದು ಕೇಜ್ರಿವಾಲ್ ಮಾಡಿದ್ದ ಮನವಿಗೆ ಕೆಲವೇ ಗಂಟೆಗಳಲ್ಲಿ ಹದಿಮೂರು ಲಕ್ಷಕ್ಕೂ ಹೆಚ್ಚು (ರೂ 13,05,737) ದೇಣಿಗೆ ಸಂಗ್ರಹವಾಗಿತ್ತು ಎಂದು ಆಮ್ ಅದ್ಮಿ ಪಕ್ಷ ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ.
ಬುಧವಾರ (ಜು 15) ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರಿಂದ ಹದಿಮೂರು ಲಕ್ಷ ಸಂಗ್ರಹವಾಗಿತ್ತು, ಇದೊಂದು ಆರಂಭ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಹೇಳಿದ್ದಾರೆ. (ಕೇಜ್ರಿವಾಲ್ ಮನವಿಗೆ ಟ್ವಿಟರ್ ನಲ್ಲಿ ಅಪಹಾಸ್ಯ)
ಇದಾದ ನಂತರ ಮತ್ತೆ 905 ದೇಣಿಗೆದಾರರಿಂದ ರೂಪಾಯಿ 13,51,863 ಸಂಗ್ರಹವಾಗಿದೆ. ಪಕ್ಷಕ್ಕೆ ಹರಿದು ಬರುತ್ತಿರುವ ಹಣವನ್ನು ಪಕ್ಷದ ಖರ್ಚಿಗಾಗಿ ಬಳಸಿಕೊಳ್ಳಲಾಗುವುದು.

ಆಮ್ ಆದ್ಮಿ ಪಕ್ಷ ಸದಾ ದೇಣಿಗೆ ಬಯಸುವ ಪಕ್ಷವಲ್ಲ ಮತ್ತು ದೊಡ್ದ ಮಟ್ಟದಲ್ಲಿ ದೇಣಿಗೆ ಸಂಗ್ರಹಿಸಬೇಕೆನ್ನುವ ಗುರಿಯನ್ನೂ ನಾವು ಹೊಂದಿಲ್ಲ. ನಮ್ಮ ಅವಶ್ಯಕತೆಗೆ ಬೇಕಾದಷ್ಟು ಮಾತ್ರ ದೇಣಿಗೆ ಬಯಸುತ್ತಿದ್ದೇವೆ ಎಂದು ಪಕ್ಷದ ಮುಖಂಡ ಆಶಿಸ್ ತಲ್ವಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಆಪ್ ಅಧಿಕಾರಕ್ಕೆ ಬಂದ ನಂತರ ಪಕ್ಷದ ಬೊಕ್ಕಸ ಖಾಲಿಯಾಗಿದೆ. ದೈನಂದಿನ ಖರ್ಚಿಗೆ ದುಡ್ಡು ಸಾಲುತ್ತಿಲ್ಲ. ಪಕ್ಷ ನಡೆಸಲು ಸಾರ್ವಜನಿಕರೇ ನಮಗೆ ದುಡ್ಡು ನೀಡಬೇಕು.
ನಮ್ಮನ್ನು ಅಧಿಕಾರಕ್ಕೆ ತಂದಿದ್ದಕ್ಕೆ ನಾವು ಆಭಾರಿಯಾಗಿದ್ದೇವೆ. ಜನರೇ ನಮ್ಮನ್ನೀಗ ಸಲಹಬೇಕಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು.
ಆಮ್ ಆದ್ಮಿ ಕ್ಯಾಂಟೀನ್ : ತಮಿಳುನಾಡಿನಲ್ಲಿ ಭಾರೀ ಹೆಸರು ಪಡೆದಿರುವ 'ಅಮ್ಮಾ' ಕ್ಯಾಂಟೀನ್ ರೀತಿಯಲ್ಲಿ ದೆಹಲಿ ಸರ್ಕಾರವೂ 'ಆಮ್ ಆದ್ಮಿ ಕ್ಯಾಂಟೀನ್' ಗಳನ್ನು ಇನ್ನು ಎರಡು ತಿಂಗಳಲ್ಲಿ ಆರಂಭಿಸಲಿದೆ.
ಈ ಕ್ಯಾಂಟೀನ್ ನಲ್ಲಿ ಗರಿಷ್ಠ ಹತ್ತು ರೂಪಾಯಿ ಒಳಗೆ ಆಹಾರವು ಲಭ್ಯವಾಗಲಿದೆ. ಯೋಜನೆ ಜಾರಿಯಲ್ಲಿರುವ ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ ಈ ಮಾದರಿಯನ್ನು ಸಿದ್ಧಪಡಿಸಲಾಗಿದೆ ಎಂದು ಪಕ್ಷ ತಿಳಿಸಿದೆ.












Click it and Unblock the Notifications