ದೆಹಲಿ ಜನರಿಗೆ ಈಗ 'ಬೆಂಕಿ' ಎಂದರೆ ಬಲು ಇಷ್ಟ!
ದೆಹಲಿ, ಡಿಸೆಂಬರ್.18: ಬೆಂಕಿ ಎಂದರೆ ಸಾಕು ಎಂಥವರೂ ಬೆಚ್ಚಿ ಬೀಳುತ್ತಾರೆ, ಭಯ ಪಡುತ್ತಾರೆ. ಆದರೆ, ರಾಷ್ಟ್ರ ರಾಜಧಾನಿ ಜನರಿಗೆ ಮಾತ್ರ ಈಗಿನ ಮಟ್ಟಿಗೆ ಬೆಂಕಿ ಎಂದರೆ ಬಲು ಇಷ್ಟವಾಗುತ್ತಿದೆ. ಅದಕ್ಕೂ ಬಹುಮುಖ್ಯವಾದ ಕಾರಣವೂ ಇದೆ.
ಹೌದು, ದೆಹಲಿಯಲ್ಲಿ ಜನರು ಬೆಂಕಿಯನ್ನು ಬಿಟ್ಟು ಇರಲಾರದಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಏಕೆಂದರೆ 22 ವರ್ಷಗಳಲ್ಲೇ ಕಂಡು ಕೇಳರಿಯದಂತಾ ಚಳಿ ರಾಷ್ಟ್ರ ರಾಜಧಾನಿಯನ್ನು ಆವರಿಸಿದೆ. ಮೈಕೊರೆಯುವ ಚಳಿಯಿಂದ ಬಚಾವ್ ಆಗಲು ಜನರು ಬೆಳ್ಳಂಬೆಳಗ್ಗೆ ಬೆಂಕಿ ಕಾಸಿಕೊಳ್ಳುತ್ತಾ ಕೂರುವಂತೆ ಆಗಿದೆ.
ಡಿಸೆಂಬರ್.18 ಬುಧವಾರ ಬೆಳಗಿನ ಚಳಿ ಹೊಸ ದಾಖಲೆಯನ್ನೇ ಬರೆದಿದೆ. ವಾತಾವರಣದಲ್ಲಿನ ಉಷ್ಣಾಂಶ ಕನಿಷ್ಠ 7.2 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಗರಿಷ್ಠ 14 ಡಿಗ್ರಿ ಸೆಲ್ಸಿಯಸ್ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿ ಹಾಗೂ ಎನ್ ಸಿಆರ್ ಪ್ರದೇಶದಲ್ಲಿ ತೀವ್ರ ಚಳಿ ಆವರಿಸಿದ್ದು, ಕಳೆದ ಸೋಮವಾರ ಹಾಗೂ ಮಂಗಳವಾರ ಗರಿಷ್ಠ ಉಷ್ಣಾಂಶ 12.2 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದು ಕಳೆದ 22 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಉಷ್ಣಾಂಶ ಎನ್ನಲಾಗಿದೆ.
ದೆಹಲಿಯಲ್ಲಿ ಆವರಿಸಿರುವ ಚಳಿಗೆ ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದೆಹಲಿಯಷ್ಟೇ ಅಲ್ಲದೇ ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನ್ ನಲ್ಲೂ ವಾತಾವರಣ ತೀರಾ ಹದಗೆಟ್ಟಿದೆ. ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ ಎಂದು ವಾಯು ಗುಣಮಟ್ಟ ವಾತಾವರಣ ಪ್ರಸಾರ ಹಾಗೂ ಸಂಶೋಧನಾ ಘಟಕ ತಿಳಿಸಿದೆ.












Click it and Unblock the Notifications