ದೆಹಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ 150% ಏರಿಕೆ, ಬಿಜೆಪಿ ಟೀಕೆ
ನವದೆಹಲಿ, ಆಗಸ್ಟ್ 8: ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ಸರಕಾರ ಮಂಗಳವಾರದಂದು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು 150% ಏರಿಕೆ ಮಾಡಿದ್ದು, ಈ ವರೆಗೆ ಇದ್ದ 4 ಕೋಟಿ ರುಪಾಯಿ ಮೊತ್ತವನ್ನು 10 ಕೋಟಿಗೆ ಏರಿಸಿದೆ. ಇನ್ನು ಮುಂದೆ ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿ ಅಡಿಯಲ್ಲಿ ಪ್ರತಿ ವರ್ಷ 10 ಕೋಟಿ ರುಪಾಯಿ ಪಡೆಯಲಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಮಂಗಳವಾರ ದೆಹಲಿ ವಿಧಾನಸಭೆಯಲ್ಲಿ ಈ ವಿಚಾರ ತಿಳಿಸಲಾಗಿದೆ. ದೆಹಲಿಯ ಎಪ್ಪತ್ತು ಶಾಸಕರು ಈ ಅನುದಾನ ಪಡೆಯಲಿದ್ದಾರೆ. ದೆಹಲಿ ವ್ಯಾಪ್ತಿಯಲ್ಲಿ ಬರುವ ಏಳು ಸಂಸದರಿಗೆ ಕೇಂದ್ರ ಸರಕಾರ ನಿಗದಿ ಮಾಡಿರುವ ನಿಧಿಗಿಂತ ದುಪ್ಪಟ್ಟು ಮೊತ್ತವನ್ನು ಶಾಸಕರ ಪ್ರದೇಶಾಭಿವೃದ್ಧಿಗೆ ನೀಡಲಾಗುತ್ತಿದೆ.
ಗೌರ್ನರ್ ಆದೇಶವನ್ನು ಸಾರ್ವಜನಿಕವಾಗಿ ಹರಿದು ಹಾಕಿದ ಅರವಿಂದ್ ಕೇಜ್ರಿವಾಲ್
ಜನರು ಕೇಳಿಕೊಂಡು ಬರುವ ಸಣ್ಣ-ಸಣ್ಣ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಈ ಅನುದಾನದಿಂದ ಸಹಾಯ ಆಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಈ ಹೆಚ್ಚುವರಿ ಮೊತ್ತವನ್ನು ಯಾವ ಮೂಲದಿಂದ ನೀಡಲಾಗುತ್ತದೆ ಎಂಬುದನ್ನು ಅವರು ವಿವರಿಸಿಲ್ಲ. ಈ ಹೆಚ್ಚುವರಿ ಮೊತ್ತಕ್ಕೆ ಪೂರಕ ಅನುದಾನ ಅಥವಾ ಪರಿಷ್ಕೃತ ಬಜೆಟ್ ನಲ್ಲಿ ಹೊಂದಾಣಿಕೆ ಮಾಡಬೇಕಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ವಿಧಾನ ಸಭೆಯ ಬಲ ಎಪ್ಪತ್ತರಷ್ಟಿದ್ದು, ಅದರಲ್ಲಿ ಆಪ್ ನ 66 ಶಾಸಕರು ಹಾಗೂ ಬಿಜೆಪಿಯ 4 ಶಾಸಕರಿದ್ದಾರೆ. ಇನ್ನು ದೆಹಲಿ ವಿಧಾನಸಭೆ ವಿಪಕ್ಷ ನಾಯಕ ವಿಜೇಂದ್ರ ಗುಪ್ತಾ ಈ ನಡೆಯನ್ನು ಟೀಕಿಸಿದ್ದಾರೆ. ಮೂರು ವರ್ಷದಿಂದ ಆಪ್ ಶಾಸಕರು ಯಾವ ಕೆಲಸವನ್ನೂ ಮಾಡಿಲ್ಲ. ಈಗ ಚುನಾವಣೆಗಳು ಹತ್ತಿರ ಇರುವಾಗ ಶಾಸಕರ ಅನುದಾನ ಹೆಚ್ಚಿಸಿದರೆ ಜನರಿಗೇನೂ ಪ್ರಯೋಜನವಿಲ್ಲ ಎಂದಿದ್ದಾರೆ.
ಇನ್ನು ಅನುದಾನದ ಖರ್ಚಿನ ವಿಚಾರದಲ್ಲಿ ಇರುವ ಮಾರ್ಗದರ್ಶಿ ಸೂತ್ರಗಳೇ ಸರಿಯಿಲ್ಲ. ಅವುಗಳನ್ನು ಸರಳಗೊಳಿಸಬೇಕು ಎಂದು ಗುಪ್ತಾ ಹೇಳಿದ್ದಾರೆ. ಇತ್ತ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಶಾಸಕರಿಗೆ ಅನುದಾನ ಖರ್ಚಿನ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದಿದ್ದಾರೆ.