ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಘೋಷಿಸಲು ವಿಎಚ್ಪಿ ಒತ್ತಾಯ
ನವದೆಹಲಿ, ಅಕ್ಟೋಬರ್ 1: ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಘೋಷಿಸುವಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ಇಂದು ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿವೆ, ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆ , ಹೀಗಾಗಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯಗೊಳಿಸಬೇಕು ಎಂದು ವಿಎಚ್ಪಿ ರಾಷ್ಟ್ರೀಯ ಕಾರ್ಯದರ್ಶಿ ಆಚಾರ್ಯ ರಾಧಾಕೃಷ್ಣ ಹೇಳಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಶಿಕ್ಷಕರೂ ಭಗವದ್ಗೀತೆಯನ್ನು ಅಧ್ಯಯನ ಮಾಡುವಂತೆ ಮಾಡಬೇಕು. ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳ ಬೋಧನೆ ಹಾಗೂ ಕಲಿಕೆಯನ್ನು ಶಿಕ್ಷಕರ ತರಬೇತಿ ಪಠ್ಯಕ್ರಮದ ಒಂದು ಭಾಗವಾಗಿ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ಕರ್ತವ್ಯಪ್ರಜ್ಞೆಯನ್ನು ಬೆಳೆಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಜನರಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿರುವುದನ್ನು ತಡೆಯಲು ಮತ್ತು ಸರ್ಕಾರಿ ಕರ್ತವ್ಯಪ್ರಜ್ಞೆ ಜಾಗೃತಗೊಳಿಸಲು ನಿಯಮಿತವಾಗಿ ಭಗವದ್ಗೀತೆಯನ್ನು ಪಠಣ ಮಾಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದೆ.
ಭಾರತದ ನಾಗರೀಕತೆ ಮತ್ತು ಧರ್ಮ ಸಂಸ್ಕೃತಿ ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದುದು ಎಂಬುದು ನಿರ್ವಿವಾದ. ಆರ್ಯರು ಭಾರತಕ್ಕೆ ವಲಸೆ ಬಂದಾಗ ವೇದಗಳನ್ನು ತಂದರು. ವೇದಗಳು ಅಪೌರುಷೇಯವಾದವುಗಳು ಅವುಗಳನ್ನು ಯಾರೂ ರಚಿಸಲಿಲ್ಲ.
ಇದು ಸ್ಪಷ್ಟವಾಗಬೇಕಾದರೆ, ದೇವುಡು ಅವರು ಹೇಳುವಂತೆ ಶ್ರುತಿ, ಸ್ಮೃತಿ ಎಂಬ ಗ್ರಂಥರಾಶಿಯನ್ನು ಗಮನಿಸಬೇಕು. ಶ್ರುತಿ ಎನ್ನುವುದು ದೈವಕೃಪೆಯಿಂದ ದೊರೆತ ಸಾಹಿತ್ಯವಾದರೆ, ಸ್ಮೃತಿ ಎನ್ನುವುದು ಹಿಂದಿನ ಮಹಾಪುರುಷರು ಹೇಳಿದುದನ್ನು ನೆನಪಿಸಿಕೊಂಡು ಬರೆದುದು. ಶ್ರುತಿ ಶ್ಲೋಕಗಳಿಂದ ಕೂಡಿದ ಭಗವದ್ಗೀತೆ ಆರ್ಷೇವಾದುದು.
ಅದನ್ನು ಯಾರೂ ರಚಿಸಲಿಲ್ಲ. ಅದು ಭಗವಂತನ ಅವತಾರವೇ ಆದ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದುದು . ಅಂದರೆ, ಅರ್ಜುನ ಒಬ್ಬನಿಗಷ್ಟೇ ಹೇಳಿದುದಲ್ಲ ಇಡೀ ಮಾನವ ಕುಲವನ್ನೇ ಉದ್ದೇಶಿಸಿ ಹೇಳಿದುದು ಎಂಬುದು ಯಾರಿಗೇ ಆಗಲಿ ಸುಸ್ಪಷ್ಟವೇ ಆಗಿದೆ.
ಭಾರತದಲ್ಲಿ ಅತ್ಯಂತ ಪ್ರಾಚೀನ ಧರ್ಮಸಂಸ್ಕೃತಿಯ ಮೂಲ ಆಕರ ಗ್ರಂಥಗಳಾದ ವೇದಗಳ ಮೂಲದಿಂದ ಬಂದ ಭಗವದ್ಗೀತೆಯು ಪ್ರಸ್ತುತ ಕಲಿಯುಗದ ಹಿಂದಿನ ದ್ವಾಪರ ಯುಗದಲ್ಲಿ ಗೊಲ್ಲನಾದರೂ ದೈವಾಂಶಸಂಭೂತನೆನಿಸಿದ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದದು. ಭಗವದ್ಗೀತೆ ಇಡಿ ಮಾನವ ಕುಲವನ್ನೇ ಉದ್ದೇಶಿಸಿ ಬೋಧಿಸಿದ ಮಾನವಧರ್ಮಗ್ರಂಥವೇ ಎಂಬುದು ಅದನ್ನು ಓದಿದ ಸಾಮಾನ್ಯರಿಗೂ ಅರ್ಥವಾಗದಿರದು.
ಮೇಲೆ ಹೇಳಿದಂತೆ ಹಿಂದೂಧರ್ಮದ ಮುಖ್ಯಶಾಖೆಗಳಂತಿವೆ ಶೈವ, ಜೈನ, ಸಿಖ್ ಜನಾಂಗೀಯ ಧರ್ಮಗಳು. ಬೌದ್ಧಧರ್ಮವೂ ಮೂಲತಃ ಹಿಂದೂಧರ್ಮದ ಮೂಲದಿಂದ ಭಾರತದಲ್ಲೇ ಹುಟ್ಟಿ ಪ್ರತ್ಯೇಕವಾದುದು. ಬೌದ್ಧಧರ್ಮವೂ ಸೇರಿದಂತೆ ಹಿಂದೂಧರ್ಮ,ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಬೋಧಿಸಿರುವುದೆಲ್ಲ ಮಾನವಧರ್ಮವನ್ನೇ ಅಲ್ಲವೇ...? ನಮ್ಮ ಎಲ್ಲ ಜನಾಂಗೀಯ ಧರ್ಮಗಳ ಮೂಲೋದ್ದೇಶ ಮಾನವಧರ್ಮವೇ.
ಸರ್ಕಾರಿ ಸಂಸ್ಥೆಗಳಲ್ಲಿ 15 ದಿನಕ್ಕೊಮ್ಮೆ ಭಗವದ್ಗೀತೆ ಪಠಣ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.