ಕೊವಿಡ್19 ಭೀತಿಯಿಂದ ಆತ್ಮಹತ್ಯೆಗೆ ಶರಣಾದ IRS ಅಧಿಕಾರಿ
ನವದೆಹಲಿ, ಜೂನ್ 15: ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಕೊರೊನಾವೈರಸ್ ಸೋಂಕು ಹರಡುವ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 56 ವರ್ಷ ವಯಸ್ಸಿನ ವ್ಯಕ್ತಿ ತಮ್ಮ ಕಾರಿನಲ್ಲಿ ಕುಳಿತು ಆಸಿಡ್ ಮಾದರಿ ದ್ರವವನ್ನು ಸೇವಿಸಿ ಮೃತರಾಗಿದ್ದಾರೆ.
IRS ಅಧಿಕಾರಿ ಹೆಸರು ಬಹಿರಂಗ ಪಡಿಸದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ದೆಹಲಿಯ ದ್ವಾರಕ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಜುಲೈ, ಆಗಸ್ಟ್ ಅಲ್ಲ ಭಾರತದಲ್ಲಿ ನವೆಂಬರ್ನಲ್ಲಿ ಕೊರೊನಾ ಸೋಂಕು ತಾರಕಕ್ಕೆ!
ಮೃತ ವ್ಯಕ್ತಿ ಇರುವ ಕಾರಿನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಇದರಲ್ಲಿ ಕೊವಿಡ್ 19 ಬಗ್ಗೆ ಭೀತಿ ಇರುವುದನ್ನು ಉಲ್ಲೇಖಿಸಿದ್ದಾರೆ. ನನ್ನ ಕುಟುಂಬ ಸುರಕ್ಷಿತವಾಗಿರಬೇಕು, ಆರೋಗ್ಯದಿಂದಿರಬೇಕು ಅವರಿಗೆ ಕೊರೊನಾವೈರಸ್ ಸೋಂಕು ಹರಡಬಾರದು, ನಾನು ಅವರಿಗೆ ಈ ರೀತಿ ಕಷ್ಟ ನೀಡಲಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಅಧಿಕಾರಿಗೆ ಕಳೆದ ವಾರ ಕೊವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. ನಂತರ ಮರು ಪರೀಕ್ಷೆಯಲ್ಲಿ ನೆಗಟಿವ್ ಎಂದು ವರದಿ ಬಂದಿತ್ತು. ಆದರೆ, ಕೊವಿಡ್ 19 ಆತಂಕದಿಂದ ಬಳಲುತ್ತಿದ್ದರು. ಕುಟುಂಬಕ್ಕೆ ವೈರಸ್ ಸೋಂಕು ಹರಡಬಹುದು ಎಂಬ ಚಿಂತೆ ಕಾಡತೊಡಗಿ ಕೊರಗಿದ್ದಾರೆ.
ದ್ವಾರಕ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿ ನಿದ್ರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಅಧಿಕಾರಿಯ ಶವ ಸಿಕ್ಕಿದೆ. ಪ್ರಾಥಮಿಕ ತನಿಖೆಯಲ್ಲಿ ಆಸಿಡ್ ಮಾದರಿ ದ್ರವ ಸೇವಿಸಿರುವುದು ಪತ್ತೆಯಾಗಿದೆ. ಕೊರೊನಾವೈರಸ್ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.