Monsoon Rain 2026: ದುರ್ಬಲ ಮುಂಗಾರು ಮಳೆಯಿಂದ ರಾಜ್ಯದಲ್ಲಿ ಬರಗಾಲ, ನೀರಿನ ಬಿಕ್ಕಟ್ಟು ಸಂಭವ: ಐಎಂಡಿ
ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತಕ ವರ್ಷ 2026 ಮುಂಗಾರು ಮಳೆ (South West Monsoon 2026) ನಿರೀಕ್ಷೆಗಿಂತ ಕಡಿಮೆ ಬರಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಿನ ಬೇಸಿಗೆಯಲ್ಲಿ ನಿರಂತರವಾಗಿ ವಾರಗಳ ಕಾಲ ಅಧಿಕ ತಾಪಮಾನ ನಿರ್ಮಾಣವಾಗಲಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಜಲಾಶಯಗಳ ನೀರು ವೇಗವಾಗಿ ಖಾಲಿಯಾಗುತ್ತದೆ. ಈ ವರ್ಷ ಕಡಿಮೆ ಮಳೆ, ನೀರಿನ ಅಲಭ್ಯತೆ ಸೃಷ್ಟಿಯಾಗಬಹುದೆಂಬ ಕಳವಳ ವ್ಯಕ್ತವಾಗುತ್ತಿದೆ. ಇದು ಕೃಷಿ ಹಾಗೂ ಇತರ ವಲಯಗಳ ಮೇಲೆ, ಕುಡಿಯುವ ನೀರಿನ ಮೇಲೆ ಪರಿಣಾಮ ಉಂಟು ಮಾಡಲಿದೆ.
ರಾಜ್ಯದಲ್ಲಿ ಕಳೆದ ವರ್ಷ 2025ರಲ್ಲಿ ವಾಡಿಕೆಯಷ್ಟು ಉತ್ತಮ ಮಳೆ ಆಗಿದೆ. ಈ ವರ್ಷ 2026ರಲ್ಲಿ ಬರಗಾಲ ಉಂಟಾಗುವ ಲಕ್ಷಣಗಳು ಕಾಣುತ್ತಿದೆ. ಏಕೆಂದರೆ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಆಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಇದು ರಾಜ್ಯದಲ್ಲಿ ನೀರಿನ ಬಳಕೆ, ಅಭಾವ, ಲಭ್ಯತೆ ಕುರಿತು ಗಂಭೀರ ಯೋಚನೆ ಮಾಡುವಂತೆ ಮಾಡಿದೆ.

ದೀರ್ಘಾವಧಿಯ ಸರಾಸರಿಗಿಂತ ಮುಂಗಾರು ಮಳೆ ಶೇ. 92ರಷ್ಟು ಮಳೆ ಬರುವುದು ಬಹುತೇಕ ಖಚಿತವಾದರೂ ಇಷ್ಟು ಪ್ರಮಾಣದ (ಸಾಮಾನ್ಯಕ್ಕಿಂತ ಕಡಿಮೆ) ನೀರು ರಾಜ್ಯಕ್ಕೆ ಸಾಕಾಗುವುದಿಲ್ಲ. ಇದನ್ನು ನಿರೀಕ್ಷೆಗಿಂತ ಕಡಿಮೆ ಮಳೆ ಅಂತಲೇ ಐಎಂಡಿ ಪರಿಗಣಿಸುತ್ತದೆ. ಇದರಿಂದ ಮುಂದಿನ ಜೂನ್-ಸೆಪ್ಟೆಂಬರ್ ಅವಧಿಗೆ ನೀರಿನ ಬಳಕೆ ವಿಚಾರದಲ್ಲಿ ಪರಿಸ್ಥಿತಿ ಈ ಮೊದಲಿನಂತೆ ಇರದೇ ಹದಗೆಡುವ ಸಾಧ್ಯತೆ ಇದೆ ಎಂದು ಬುಧವಾರ (ಏಪ್ರಿಲ್ 15) ಐಎಂಡಿ ಮುನ್ಸೂಚನೆ ನೀಡಿದೆ.
ಮಳೆ ಇಳಿಕೆ, ನೀರಿನ ಬಿಕ್ಕಟ್ಟು ಸಂಭವ
ಮುಂಗಾರು ಮಳೆ ಕಡಿಮೆ ಆಗುತ್ತದೆ ಎಂಬುದಕ್ಕೆ ಪ್ರಮುಖ ಸಾಕ್ಷಿ ಎಂದರೆ ಈಗಿನ ಗರಿಷ್ಠ ತಾಪಮಾನದಲ್ಲಿನ ಏರಿಕೆ. ಇದು ಸಹ ನೀರನ್ನು ಹೆಚ್ಚು ಬಳಕೆ ಆಗುವಂತೆ ಮಾಡುತ್ತದೆ. ಮಳೆಗಾಲದಲ್ಲಿ ಭೂಮಿ ಹೆಚ್ಚಿನ ನೀರನ್ನು ಇಂಗುತ್ತದೆ. ಮಳೆ ಕಡಿಮೆ ಆದಾಗ ನೀರಿನ ಸಂಗ್ರಹ ಉತ್ತಮವಾಗಿರುವುದಿಲ್ಲ. ಮುಖ್ಯವಾಗಿ ಫೆಸಿಪಿಕ್ ಮಹಾಸಾಗರದ ಮೇಲೆ ಹೆಚ್ಚಿನ ಉಷ್ಣಾಂಶ (ಎಲ್ನಿನಾ ಪ್ರಭಾವ) ಕಂಡು ಬರುತ್ತಿರುವುದು ಮಳೆ ಕಡಿಮೆ ಆಗಲು ಪ್ರಮುಖ ಕಾರಣವಾಗಿದೆ. ಇದೆಲ್ಲ ಅಂಶಗಳಿಂದ ಬರಗಾಲ ಉಂಟಾಗಬಹುದೆಂದು ಐಎಂಡಿ ಅಂದಾಜಿಸಿದೆ. ಉತ್ತರ ಕರ್ನಾಟಕ, ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಿಂದ ಕುಡಿಯಲು ನೀರಿನ ತಾತ್ವಾರ, ಕೃಷಿ ಬಳಕೆಗೆ ಕುತ್ತು ತರುವ ಹಾಗೂ ನೀರಿನ ಬಿಕ್ಕಟ್ಟು ಎದುರಾಗುವ ಸಂಭವವಿದೆ.
ಕಳೆದ ಮುಂಗಾರಿನಲ್ಲಿ ಕಾವೇರಿ ಸೇರಿ ಹಲವು ನದಿಗಳ ಉಕ್ಕಿ ಹರಿದಿದ್ದವು. ಕೆಆರ್ಎಸ್ ಜಲಾಶಯ ಮೂರು ಭಾರಿ ಭರ್ತಿಯಾಗಿತ್ತು. ಅದರಿಂದಲೇ ಇಂದಿನ ಬೇಸಿಗೆಯಲ್ಲಿ ಸಮರ್ಪಕ ನೀರಿನ ಬಳಕೆಗೆ ಅನುಕೂಲವಾಗಿದೆ. ಮುಂದಿನ ವರ್ಷ ಇದೇ ರೀತಿ ಮಳೆ ಕಡಿಮೆಯದಲ್ಲಿ ನೀರಿನ ಪೂರೈಕೆಯಲ್ಲಿ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ. ಈ ಹಿಂದೆ ಬೆಂಗಳೂರು, 2024-25ರ ಬೇಸಿಗೆಯ ಸನ್ನಿವೇಶದಲ್ಲಿ ನೀರಿನ ಸಮಸ್ಯೆ ಎದುರಿಸಿತ್ತು. ಅಂಥದ್ದೆ ಸಮಸ್ಯೆ ಮತ್ತೆ ಬಿಗುಡಾಯಿಸಲೂಬಹುದು.
ಉತ್ತರ ಕರ್ನಾಟಕಕ್ಕೆ ಬರಗಾಲ ಸಂಭವ?
ಕರ್ನಾಟಕದ ಉತ್ತರ ಒಳನಾಡಿನ ಹಲವೆಡೆ ನದಿ ಮೂಲಗಳಿವೆ. ಆದರೆ ಅವುಗಳಲ್ಲಿ ಬಹುತೇಕ ಸಣ್ಣ ನದಿಗಳು (ವರದಾ, ತುಂಗಭದ್ರಾ, ಇತರ) ಬೇಸಿಗೆಯಲ್ಲಿ ಒಣಗುತ್ತವೆ. ಭೀಮಾ, ಕೃಷ್ಣಾದಂತಹ ದೊಡ್ಡ ನದಿಗಳಲ್ಲಿ ತಕ್ಕ ಮಟ್ಟಿನ ನೀರು ಕಾಣಬಹುದು. ಇನ್ನೂ ಈ ಭಾಗಗಳಲ್ಲಿ ಮಳೆಯಾಶ್ರಿತ ಪ್ರದೇಶ, ಕೃಷಿ ಚಟುವಟಿಕೆ ಹೆಚ್ಚು. ಅವುಗಳ ಮೇಲೆ ಮಳೆ ಕೊರತೆ ಪರಿಣಾಮ ಉಂಟಾಗಬಹುದು.
ಇದರಿಂದ ಈ ಭಾಗದಲ್ಲಿ ಬೆಳೆಯಲಾಗುವ ಭತ್ತ, ಜೋಳ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜ ಸೇರಿ ಖಾರಿಫ್ ಬೆಳೆಗಳ ಬಿತ್ತನೆ, ಇಳುವರಿ ಕುಂಠಿತಕ್ಕೆ ಕಾರಣವಾಗುತ್ತದೆ. ಇದು ನೇರವಾಗಿ ರೈತರ ಆದಾಯಕ್ಕೆ ಪೆಟ್ಟು ನೀಡುತ್ತದೆ. ಒಟ್ಟಾರೆಯಾಗಿ ರಾಜ್ಯಾದ್ಯಂತ ಮುಂಗಾರು ಮಳೆ ಅಭಾವ ಕಂಡು ಬರಲಿದ್ದು, ಕೆಲವೆಡೆ ತೀವ್ರ ಬರಗಾಲ, ಹಲವೆಡೆ ಸಾಮಾನ್ಯ ಬರ ಸ್ಥಿತಿ ಉಂಟಾಗುವ ನಿರೀಕ್ಷೆಗಳು ಇವೆ ಎಂದು ಹೇಳಲಾಗುತ್ತಿದೆ.













Click it and Unblock the Notifications