ಕೊರೊನಾವೈರಸ್ ನಿಂದ ಬಲಿಯಾದ ಹಿರಿಯ ವೈದ್ಯರಿಗೆ ಸಿಎಂ ಸಂತಾಪ!
ನವದೆಹಲಿ, ಜೂನ್.29: ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ವೈದ್ಯರೇ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಆತಂಕಪಡುವಂತಾ ಪರಿಸ್ಥಿತಿ ದೇಶಾದ್ಯಂತ ನಿರ್ಮಾಣವಾಗಿ ಬಿಟ್ಟಿದೆ.
ನವದೆಹಲಿಯ ಲೋಕನಾಯಕ್ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ಹಿರಿಯ ವೈದ್ಯ 56 ವರ್ಷ ಅಸೀಮ್ ಗುಪ್ತಾ ಕೊರೊನಾವೈರಸ್ ನಿಂದಲೇ ಪ್ರಾಣ ಬಿಟ್ಟಿದ್ದಾರೆ. ಹಿರಿಯ ವೈದ್ಯರ ಸಾವಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ.
ಅರಿವಳಿಕೆ ತಜ್ಞರಾಗಿದ್ದ ಅಸೀಮ್ ಗುಪ್ತಾರಿಗೆ ಕಳೆದ ಜೂನ್.06ರಂದು ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ಲೋಕನಾಯಕ್ ಜಯ ಪ್ರಕಾಶ್ ಆಸ್ಪತ್ರೆಯ ಐಸಿಯುನಲ್ಲಿ ಸೋಂಕಿತ ವೈದ್ಯರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಜೂನ್.08ರಂದು ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್:
ಹಿರಿಯ ವೈದ್ಯರಾಗಿದ್ದ ಅಸೀಮ್ ಗುಪ್ತಾ ಮನವಿ ಮೇರೆಗೆ ಅವರನ್ನು ದಕ್ಷಿಣ ದೆಹಲಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ಅವರು ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾರೆ. ಲೋಕನಾಯಕ್ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಎ ಗ್ರೇಡ್ ಅಧಿಕಾರಿಯಾಗಿದ್ದ ಅಸೀಮ್ ಗುಪ್ತಾ ಅರಿವಳಿಕೆ ತಜ್ಞರು ಎನಿಸಿದ್ದರು.
ಇನ್ನು, ನವದೆಹಲಿಯಲ್ಲಿ 2889 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಂದೇ ದಿನ 65 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 83,077 ಮಂದಿಗೆ ಸೋಂಕು ತಗಲಿದ್ದು, 52,607 ಜನರು ಗುಣಮುಖರಾಗಿದ್ದಾರೆ. 27847 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications