ನವದೆಹಲಿಯಲ್ಲಿ ಗುಂಡಿನ ಮೊರೆತ, ಪೇದೆ ಸಾವು
ನವದೆಹಲಿ, ಅ.13: ರಾಜಧಾನಿಯಲ್ಲಿ ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿ ಗುಂಡಿನ ಮೊರೆತ ಕೇಳಿ ಬಂದಿದೆ. ನಿನ್ನೆ ತಡರಾತ್ರಿ ನಗರದ ಹೊರ ವಲಯದ ವಿಜಯ್ ವಿಹಾರ್ ಪ್ರದೇಶದಲ್ಲಿ ಪೊಲೀಸ್ ಪೇದೆಗಳಿಬ್ಬರ ಮೇಲೆ ಫೈರಿಂಗ್ ನಡೆದಿದೆ. ಈ ದುರ್ಘಟನೆಯಲ್ಲಿ ಒಬ್ಬ ಪೇದೆ ಮೃತಪಟ್ಟಿದ್ದಾರೆ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮುಂಜಾನೆ ಸುಮಾರು 2 ಗಂಟೆ ಹೊತ್ತಿಗೆ ವಿಜಯ್ ವಿಹಾರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಇಬ್ಬರು ಪೊಲೀಸ್ ಪೇದೆಗಳು ತಮ್ಮ ಬೈಕ್ ಏರಿ ಗಸ್ತು ತಿರುಗುತ್ತಿದ್ದರು.ಈ ವೇಳೆಯಲ್ಲಿ ಆಟೋರಿಕ್ಷಾವೊಂದರ ಮೇಲೆ ಸಂಶಯ ಮೂಡಿದೆ. ಎಲ್ ಬ್ಲಾಕ್ ಬಳಿ ಆಟೋದಲ್ಲಿ ಕುಳಿತಿದ್ದ ವ್ಯಕ್ತಿಗಳನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಅದರೆ, ಸರಿಯಾದ ಉತ್ತರ ಬಂದಿಲ್ಲ. ನಂತರ ಪೊಲೀಸ್ ಪೇದೆ ಜಗ್ಬೀರ್ ಎಂಬುವರು ಆಟೋ ಏರಿ ಪೊಲೀಸ್ ಠಾಣೆ ಕಡೆಗೆ ನಡೆ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಮುರ್ನಾಲ್ಕು ಮಂದಿ ದುಷ್ಕರ್ಮಿಗಳು ಹತ್ತಿರದಿಂದ ಗುಂಡು ಹಾರಿಸಿದ ಪರಿಣಾಮ ಪೇದೆ ಜಗ್ಬೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಪೇದೆಯ ಬೆನ್ನಿಗೆ ಗುಂಡು ಹೊಕ್ಕಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಜೀವನ್ಮರಣ ಹೋರಾಟ ನಡೆಸಿದ್ದಾರೆ. ಕ್ಷಣಾರ್ಧದಲ್ಲಿ ಘಟನೆ ನಡೆದಿದ್ದು, ಪೊಲೀಸರ ಬಳಿ ಇದ್ದ ಲಾಠಿಯನ್ನು ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿಗಳು ದುಷ್ಕರ್ಮಿಗಳ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ, ಕೊಲೆ ಯತ್ನ ಮುಂತಾದ ಆರೋಪಗಳನ್ನು ಹೊರೆಸಿ ಎಫ್ ಐಆರ್ ದಾಖಲಿಸಿದ್ದಾರೆ.ದುಷ್ಕರ್ಮಿಗಳ ಪತ್ತೆಯಾಗಿ ವಿಶೇಷ ತನಿಖಾ ದಳ ರಚಿಸಲಾಗಿದೆ.
ಕಳೆದ ಶನಿವಾರ ರಾತ್ರಿ ಕೂಡಾ ಮೂವರು ಯುವಕರು ಇಬ್ಬರು ಪೊಲೀಸರನ್ನು ಗುರಿಯಾಗಿಟ್ಟುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅದರೆ, ಈ ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ. ಒಬ್ಬ ಆರೋಪಿಯನ್ನು ಬಂಧಿಸಲಾಗಿತ್ತು. ಈ ಘಟನೆ ನಡೆದು ಮೂರು ದಿನದೊಳಗೆ ಮತ್ತೊಮ್ಮೆ ದೆಹಲಿಯ ಹೊರ ವಲಯದಲ್ಲಿ ಗುಂಡಿನ ಮೊರೆಯ ಕೇಳಿ ಬಂದಿದೆ.(ಪಿಟಿಐ)












Click it and Unblock the Notifications