ಸುಪ್ರೀಂಕೋರ್ಟ್ ನಲ್ಲಿ ವಕೀಲ ಪ್ರಶಾಂತ್ ಭೂಷಣ್ ಶಿಕ್ಷೆ ಪ್ರಮಾಣದ ಬಗ್ಗೆ ತೀರ್ಪು
ನವದೆಹಲಿ, ಆಗಸ್ಟ್.31: ಸುಪ್ರೀಂಕೋರ್ಟ್ ಮತ್ತು ಮುಖ್ಯನ್ಯಾಯಮೂರ್ತಿ ಎಸ್.ಎ.ಬೋಬ್ಡೆ ವಿರುದ್ಧ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಶಿಕ್ಷೆ ಪ್ರಮಾಣದ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ತೀರ್ಪು ಹೊರಡಿಸಲಿದೆ.
ಸರ್ವೋಚ್ಛ ನ್ಯಾಯಾಲಯ ಮತ್ತು ಸಿಜೆಐ ಎಸ್.ಎ.ಬೋಬ್ಡೆ ಕ್ಷಮಾಪಣೆ ಕೋರುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕ್ಷಮಾಪಣೆ ಕೇಳುವುದು ತಮ್ಮ ಆತ್ಮಸಾಕ್ಷಿಗೆ ಮತ್ತು ನ್ಯಾಯಾಲಯಕ್ಕೆ ವಿರುದ್ಧವಾಗಿದೆ. ಯಾವುದೇ ಕಾರಣಕ್ಕೂ ಕ್ಷಮಾಪಣೆ ಕೋರುವುದಿಲ್ಲ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದರು.
ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ: ಹೊಸ ನ್ಯಾಯಪೀಠ ಸ್ಥಾಪನೆಗೆ ಮನವಿ
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ್ದು, ಪ್ರಶಾಂತ್ ಭೂಷಣ್ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆ ಪ್ರಮಾಣವನ್ನು ಸಪ್ಟೆಂಬರ್.31ರಂದು ಹೊರಡಿಸುವುದಾಗಿ ತಿಳಿಸಿತ್ತು.
ಸಪ್ಟೆಂಬರ್.25ರಂದು ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ
ಕಳೆದ ಸಪ್ಟೆಂಬರ್.25ರಂದು ನ್ಯಾ.ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿತು. "ಒಂದು ವ್ಯವಸ್ಥೆಯಲ್ಲಿ ಬದುಕುತ್ತಿರುವ ನೀವು, ವ್ಯವಸ್ಥೆಗೆ ಹಾನಿ ಉಂಟಾಗುವಂತೆ ನಡೆದುಕೊಳ್ಳುವಂತಿಲ್ಲ. ನಾವೆಲ್ಲರೂ ಪರಸ್ಪರ ಗೌರವಯುತವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ನೀವು ಈ ವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ನಡೆದುಕೊಂಡಲ್ಲಿ, ಅನ್ಯರು ಹೇಗೆ ಈ ಬಗ್ಗೆ ಗೌರವ ಹೊಂದಿರುತ್ತಾರೆ" ಎಂದು ಪ್ರಶಾಂತ್ ಭೂಷಣ್ ರನ್ನು ಕೋರ್ಟ್ ಪ್ರಶ್ನಿಸಿತ್ತು.
10 ತಪ್ಪುಗಳಿಗೆ 100 ಉತ್ತಮ ಕಾರ್ಯಗಳು ಪರವಾನಗಿಯಲ್ಲ
ನೀವು 100 ಉತ್ತಮ ಕಾರ್ಯಗಳನ್ನೇ ಮಾಡಿರಬಹುದು. ಆದರೆ ಆ 100 ಉತ್ತಮ ಕಾರ್ಯಗಳು ನೀವು ಮಾಡುವ 10 ತಪ್ಪುಗಳಿಗೆ ಪರವಾನಗಿಯನ್ನು ನೀಡುವುದಿಲ್ಲ. ನಿಮ್ಮ ತಪ್ಪುಗಳನ್ನು ಅದರಿಂದ ಮನ್ನಿಸಲು ಆಗುವುದಿಲ್ಲ ಎಂದ ಸುಪ್ರೀಂಕೋರ್ಟ್, ಈ ವಿಷಯದ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವುದಕ್ಕೆ ಮೂರು ದಿನಗಳ ಸಮಯಾವಕಾಶವನ್ನು ನೀಡಿತ್ತು.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದವೇನು?
"ನಾನು ನಂಬಿರುವ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ಹಿಂಪಡೆದರೆ ಅಥವಾ ಅಪ್ರಾಮಾಣಿಕ ಕ್ಷಮೆ ಕೋರಿದರೆ, ಅದು ನನ್ನ ದೃಷ್ಟಿಯಲ್ಲಿ ನನ್ನ ಆತ್ಮಸಾಕ್ಷಿಯ ಹಾಗೂ ನಾನು ಅತ್ಯಂತ ಗೌರವಿಸುವ ಸಂಸ್ಥೆಯ ನಿಂದನೆಯಾಗುತ್ತದೆ. ಸದುದ್ದೇಶದಿಂದ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆಯೇ ವಿನಾ ಸುಪ್ರೀಂ ಕೋರ್ಟ್ ಅಥವಾ ಯಾವುದೇ ನಿರ್ದಿಷ್ಟ ಮುಖ್ಯ ನ್ಯಾಯಮೂರ್ತಿಯನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ. ಈ ಮೂಲಕ ಸುದೀರ್ಘ ಕಾಲದಿಂದ ಸಂವಿಧಾನ ಮತ್ತು ಜನರ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ನಿಭಾಯಿಸುತ್ತಿರುವ ಕೋರ್ಟ್ ತನ್ನ ಕಾರ್ಯನಿರ್ವಹಣೆಯಿಂದ ವಿಮುಖವಾಗದಂತೆ ರಚನಾತ್ಮಕ ಟೀಕೆ ಮಾಡಲಾಗಿದೆ" ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಪ್ಟೆಂಬರ್.20ರಂದು ಸಲ್ಲಿಸಿರುವ ವಿಚಾರಕ್ಕೆ ಬದ್ಧವಾಗಿರುವಂತೆ ಸ್ಪಷ್ಟಪಡಿಸಿದ್ದರು.
ನ್ಯಾಯಾಂಗ ನಿಂದನೆ ಪ್ರಕರಣದ ಹಿನ್ನೆಲೆ?
ಭಾರತ ಲಾಕ್ ಡೌನ್ ವೇಳೆ ಸುಪ್ರೀಂಕೋರ್ಟ್ ಸಿಜೆಐ ಎಸ್.ಎ. ಬೋಬ್ಡೆ ಮಹಾರಾಷ್ಟ್ರದ ನಾಗಪುರದಲ್ಲಿದ್ದರು. ಹರ್ಲೆ ಡೇವಿಡ್ ಸನ್ ಬೈಕ್ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಖತ್ ಸುದ್ದಿಯಾಗಿತ್ತು. ಈ ರೀತಿ ಫೋಟೋ ಅಪ್ ಲೋಡ್ ಮಾಡಿದ್ದ ನ್ಯಾ.ಎಸ್.ಎ. ಬೋಬ್ಡೆ ವಿರುದ್ಧ ವಕೀಲ ಪ್ರಶಾಂತ್ ಭೂಷಣ್ ಟ್ವಿಟರ್ ನಲ್ಲಿ ಟೀಕಿಸಿದ್ದರು. ಬೈಕ್ ಮೇಲೆ ಕುಳಿತ ನ್ಯಾ. ಎಸ್.ಎ. ಬೋಬ್ಡೆಯವರು ತಲೆಗೆ ಹೆಲ್ಮೆಟ್ ಹಾಕಿಲ್ಲ. ಲಾಕ್ ಡೌನ್ ನಿಂದಾಗಿ ಸುಪ್ರೀಂಕೋರ್ಟ್ ಬಾಗಿಲು ಹಾಕಿಕೊಂಡು ಬೈಕ್ ಮೇಲೆ ಸುತ್ತಾಡುತ್ತಿದ್ದಾರೆ ಎಂದೆಲ್ಲ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ನೋಟಿಸ್ ಜಾರಿಗೊಳಿಸಲಾಗಿತ್ತು.
ಸುಪ್ರೀಂಕೋರ್ಟ್ ನೋಟಿಸ್ ಗೆ ಉತ್ತರ ನೀಡಿದ ವಕೀಲರು, ಸಿಜೆಐ ಅವರು ತಲೆಗೆ ಹೆಲ್ಮೆಟ್ ಧರಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಏಕೆಂದರೆ ಅಂದು ಅವರು ಕುಳಿತ ಬೈಕಿನ ಸ್ಟ್ಯಾಂಡ್ ಹಾಕಲಾಗಿದ್ದು, ಆಗ ಹೆಲ್ಮೆಟ್ ಧರಿಸುವ ಅಗತ್ಯ ಇರಲಿಲ್ಲ. ಆದರೆ, ಟ್ವೀಟ್ ನ ಉಳಿದ ಭಾಗಕ್ಕೆ ನಾನೀಗಲೂ ಬದ್ಧನಾಗಿದ್ದೇನೆ. ಆ ಟ್ವೀಟ್ ಅಂಶಗಳನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದರು.