ಬೀದಿ ಬೀದಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ 'ಅಪ್ಪುಗೆ' ಪ್ರಹಸನ!
ನವದೆಹಲಿ, ಜುಲೈ 25: ರಾಹುಲ್ ಗಾಂಧಿ ಅವರ 'ಅಪ್ಪುಗೆ' ಪ್ರಹಸನದಿಂದ ಸ್ಫೂರ್ತಿ ಪಡೆದ ಕಾಂಗ್ರೆಸ್ ಕಾರ್ಯಕರ್ತರು ಬೀದಿ ಬೀದಿಯಲ್ಲಿ 'ಅಪ್ಪಿಕೋ' ಚಳವಳಿ ಆರಂಭಿಸಿದ್ದಾರೆ!
ದೆಹಲಿಯ ಕನ್ನೌಟ್ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಹೋಗುವ ಜನರನ್ನೆಲ್ಲ ತಬ್ಬಿಕೊಂಡು 'ಪರಸ್ಪರ ಸಹಬಾಳ್ವೆಯ' ಸಂದೇಶ ಸಾರಿದರು.
ಮೋದಿಯನ್ನು ತಬ್ಬಿಕೊಳ್ಳಲು ರಾಹುಲ್ ಗಾಂಧಿಗೆ ಸಲಹೆ ನೀಡಿದ್ದು ಜ್ಯೋತಿಷಿ!
ಜು.24 ರಂದು ಕಾಂಗ್ರೆಸ್ಸಿನ ಸುಮಾರು 50 ಕಾರ್ಯಕರ್ತರು ಪ್ಲೆಕಾರ್ಡ್ ಗಳನ್ನು, ಬ್ಯಾನರ್ ಗಳನ್ನು ಹಿಡಿದು, 'ಶತ್ರುತ್ವ ನಾಶಮಾಡಿ, ದೇಶ ಉಳಿಸಿ' ಎಂದು ಕೂಗುತ್ತ ದಾರಿಹೋಕರನ್ನು ತಬ್ಬಿಕೊಂಡರು.
ಮುಂಗಾರು ಅಧಿವೇಶನದ ಅವಿಶ್ವಾಸ ನಿರ್ಣಯದ ಸಮಯದಲ್ಲಿ ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡಿದ್ದ ರಾಹುಲ್ ಗಾಂಧಿ ಅವರ ಚಿತ್ರವನ್ನು ಹಿಡಿದ ಕಾರ್ಯಕರ್ತರು, ರಾಹುಲ್ ನಡೆ ನಮಗೆ ಸ್ಫೂರ್ತಿ ಎಂದರು.
ದೇಶದಲ್ಲಿ ಶತ್ರುತ್ವ ನಾಶವಾಗಿ, ಪ್ರೀತಿ, ಸಹಬಾಳ್ವೆ ನೆಲೆ ನಿಲ್ಲಬೇಕು. ಎಲ್ಲ ಮತದ, ಜಾತಿಯ ಜನರನ್ನೂ ಸಮಾನ ಗೌರವ, ನಂಬಿಕೆ, ಪ್ರೀತಿಯಿಂದ ಕಾಣುವುದರಲ್ಲಿ ಭಾರತೀಯತೆಯ ಉನ್ನತ ತತ್ವ ಅಡಗಿದೆ ಎಂದು ಕಾರ್ಯಕರ್ತರು ಹೇಳಿದರು.
ಈ 'ಅಪ್ಪಿಕೋ' ಚಳವಳಿಯನ್ನು ಇನ್ನಿತರ ಕಡೆಗಳಲ್ಲೂ ಹಮ್ಮಿಕೊಳ್ಳುವ ಇಂಗಿತವನ್ನು ಕಾಂಗ್ರೆಸ್ ಕಾರ್ಯಕರ್ತರು ಹೊಂದಿದ್ದಾರೆ.