'ಮೋದಿ ಮತ್ತೊಮ್ಮೆ' ಎಂದ ಮುಲಾಯಂ, ಕಾಂಗ್ರೆಸ್ ಗೆ ಖುಷಿ! ಯಾಕಂತೀರಾ?
Recommended Video

ನವದೆಹಲಿ, ಫೆಬ್ರವರಿ 14: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪಕ್ಕದಲ್ಲೇ ಕುಳಿತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಏನೋ 'ಮೋದಿ ಮತ್ತೊಮ್ಮೆ' ಎಂದುಬಿಟ್ಟರು.
ಆ ಕ್ಷಣದಲ್ಲಿ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸಾಗಿದ್ದು ಸಹಜವನೇ. ಆದರೆ ಕೆಲವೇ ಹೊತ್ತಲ್ಲಿ ಕಾಂಗ್ರೆಸ್ ಬಳಗದಲ್ಲಿ ಖುಷಿಯೋ ಖುಷಿ! 2014 ರಲ್ಲಿ ಲೋಕಸಭಾ ಚುನಾವಣೆಗೂ ಕೆಲವೇ ದಿನ ಬಾಕಿ ಇರುವಾಗ ಇದೇ ಮುಲಾಯಂ ಸಿಂಗ್ ಯಾದವ್ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ 'ನೀವೇ ಮತ್ತೆ ಪ್ರಧಾನಿಯಾಗಿ' ಎಂದು ಹಾರೈಸಿದ್ದರಂತೆ! ಅವರ ಬಾಯಿ ಹರಕೆಯ ಶಾಪವೋ, ಅಥವಾ ಕಾಕತಾಳೀಯವೋ ಗೊತ್ತಿಲ್ಲ ಮನಮೋಹನ್ ಸಿಂಗ್ ಬರೋಬ್ಬರಿ ಹತ್ತು ವರ್ಷಗಳ ನಂತರ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು.
ಈ ಘಟನೆಯನ್ನು ನೆನಪಿಸಿಕೊಂಡ ಕಾಂಗ್ರೆಸ್, ಮುಲಾಯಂ ಮಾತಿಗೆ ತನ್ನದೇ ಆದ ರೀತಿಯಲ್ಲಿ ಸಮಜಾಯಿಷಿಯನ್ನೇನೋ ಕೊಟ್ಟಿದೆ. ಆದರೆ ಮುಲಾಯಂ ಸಿಂಗ್ ಲೆಕ್ಕಾಚಾರ ಬೇರೆಯೇ ಇದ್ದಂತಿದೆ!

ಮುಲಾಯಂ ಸಿಂಗ್ ಹೇಳಿದ್ದೇನು?
79 ವರ್ಷ ವಯಸ್ಸಿನ ಮುಲಾಯಂ ಸಿಂಗ್, "ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ. ನನಗೆ ಭರವಸೆ ಇದೆ ನೀವು ಮತ್ತೊಮ್ಮೆ ಪ್ರಧಾನಿಯಾಗುತ್ತೀರಿ, ಅದೇ ನನ್ನ ಹಾರೈಕೆ" ಎಂದು ಸಂಸತ್ತಿನಲ್ಲಿ ಬುಧವಾರ ಹೇಳಿದ್ದರು. ನಂತರ ಮಾತನಾಡಿದ ಮೋದಿ ಸಹ ಮುಲಾಯಂ ಅವರ ಮಾತಿಗೆ ಕೃತಜ್ಞತೆ ಅರ್ಪಿಸಿದರು.

ಹಳೇ ಹೇಳಿಕೆ ನೆನಪಿಸಿ ಸಮಾಧಾನ ಮಾಡಿಕೊಂಡ ಕಾಂಗ್ರೆಸ್!
ಮುಲಾಯಂ ಅಚ್ಚರಿಯ ಹೇಳಿಕೆಯಿಂದ ಕೊಂಚ ಮುಜುಗರವಾದರೂ ತೋರಿಸಿಕೊಳ್ಳದ ಕಾಂಗ್ರೆಸ್, 2014 ರಲ್ಲೂ ಮುಲಾಯಂ ಸಿಂಗ್, ಮನಮೋಹನ್ ಅವರಿಗೆ ಇದೇ ಮಾತನ್ನು ಹೇಳಿದ್ದರು. ಆದರೆ ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿತು. ಸಿಂಗ್ ಹುದ್ದೆಯಿಂದ ಕೆಳಗಿಳಿದಿದ್ದರು ಎಂದು ಕಾಂಗ್ರೆಸ್ ನೆನಪಿಸಿದೆ.

ಅರ್ಥವಾಗದ ಮುಲಾಯಂ ನಡೆ
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹೊತ್ತಲ್ಲಿ ಮುಲಾಯಂ ಸಿಂಗ್ ಆಡಿದ ಈ ಮಾತು ಭಾರೀ ಕುತೂಹಲ ಕೆರಳಿಸಿದ್ದು, ಮುಲಾಯಂ ನಡೆ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ಮಹಾಘಟಬಂಧನದ ಕುರಿತು ದಿನೇ ದಿನೇ ಚರ್ಚೆಯಾಗುತ್ತಿದ್ದರೂ ಮೌನವಾಗಿಯೇ ಇದ್ದ ಮುಲಾಯಂ ಸಿಂಗ್ ಯಾದವ್ ನಡೆಗೂ, ಈ ಹೇಳಿಕೆಗೂ ಸಂಬಂಧ ಕಲ್ಪಿಸುವುದಾದರೆ ಲೋಕಸಭಾ ಚುನಾವಣೆಗೂ ಮುನ್ನ ಭಾರೀ ರಾಜಕೀಯ ಬೆಳವಣಿಗೆ ಸಂಭವಿಸಿದರೆ ಅಚ್ಚರಿಯಿಲ್ಲ!

ಅಖಿಲೇಶ್ ಯಾದವ್ ಏನಂತಾರೆ?
ತಂದೆ ಮುಲಾಯಂ ಸಿಂಗ್ ಹೇಳಿಕೆಯ ಕುರಿತು ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಮಾಜವಾದಿ ಪಕ್ಷದ ಅಧ್ಯಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಿರಾಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ತಂದೆ-ಮಗನ ನಡುವೆ ಅಷ್ಟೊಂದು ಚೇತೋಹಾರಿ ಬಾಂಧವ್ಯ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಮುಲಾಯಂ ಮಾತು ಕೇವಲ ಮುಲಾಯಂ ಅವರ ಮಾತೊಂದೇ ಆಗಿದ್ದು, ಅದು ಎಸ್ಪಿಯ ನಿಲುವಲ್ಲ ಎಂದು ಅಖಿಲೇಶ್ ಹೇಳಿದರೆ ಅಚ್ಚರಿಯಿಲ್ಲ. ಏಕೆಂದರೆ ಮೋದಿಯವರನ್ನು ಅಧಿಕಾರದಿಂದ ಕಿತ್ತೆಸೆಯಲು ಪಣತೊಟ್ಟವರ ಸಾಲಲ್ಲಿ ಅಖಿಲೇಶ್ ಸಹ ಇದ್ದಾರೆ.











Click it and Unblock the Notifications