ನಿಮಗೆ ಗೊತ್ತೇ? 370 ವಿಧಿ ರದ್ದತಿಗೆ 1964ರಲ್ಲಿ ಕಾಂಗ್ರೆಸ್ ಸಂಸದರೂ ಒತ್ತಾಯಿಸಿದ್ದರು
ನವದೆಹಲಿ, ಆಗಸ್ಟ್ 10: ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯ ರದ್ದತಿಯನ್ನು ಕಾಂಗ್ರೆಸ್ನ ಸಂಸದರು ಮತ್ತು ಇತರೆ ಮುಖಂಡರು ವಿರೋಧಿಸುತ್ತಿದ್ದಾರೆ. ಆದರೆ, ಒಂದು ಕಾಲದಲ್ಲಿ ಕಾಂಗ್ರೆಸ್ನ ಹೆಚ್ಚಿನ ಸಂಸದರು ಈ ವಿಧಿಯನ್ನು ರದ್ದುಗೊಳಿಸಲು ಬಯಸಿದ್ದರು ಎನ್ನುವುದು ಗೊತ್ತೇ?
1964ರಲ್ಲಿಯೂ ಈ 370ನೇ ವಿಧಿಯನ್ನು ತೆಗೆದುಹಾಕಬೇಕು ಎಂಬ ಮಸೂದೆಯನ್ನು ಲೋಕಸಭೆಯಲ್ಲಿ ಚರ್ಚೆಗೆ ಮುಂದಿಡಲಾಗಿತ್ತು. ದೇಶದ ಉಳಿದ ಭಾಗದೊಂದಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಸಂಪೂರ್ಣವಾಗಿ ವಿಲೀನಗೊಳಿಸಿ ಈ ವಿಧಿಯನ್ನು ರದ್ದುಗೊಳಿಸಬೇಕು ಎಂಬ ಬಗ್ಗೆ ಒತ್ತಾಯ ಮಾಡಲಾಗಿತ್ತು.
ಈ ಕುರಿತು 1964ರ ಸೆಪ್ಟೆಂಬರ್ 12ರಂದು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ್ದ ವರದಿಯಲ್ಲಿ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಸೇರ್ಪಡೆ ಮಾಡುವುದರ ಕುರಿತು ಬೇಡಿಕೆ ಮುಂದಿಡಲಾಗಿತ್ತು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ದೊರಕಿತ್ತು ಎಂದು ವರದಿಯಾಗಿದೆ. ಇದರ ಕುರಿತು ಸುದೀರ್ಘ ಚರ್ಚೆಗಳು ನಡೆದಿತ್ತು. ಒಕ್ಕೊರಲ ಬೆಂಬಲ ದೊರಕಿದ್ದರೂ ಇದು ಅಂದು ಕಾರ್ಯಗತಗೊಂಡಿರಲಿಲ್ಲ. ಈ ಚರ್ಚೆ ನಡೆದು ಸುಮಾರು 55 ವರ್ಷ ಕಳೆದರೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಮಾನ್ಯತೆಯನ್ನು ತೆಗೆದುಹಾಕುವ ಯಾವುದೇ ಪ್ರಯತ್ನಗಳು ಕೈಗೂಡಿರಲಿಲ್ಲ.

ಕಾಂಗ್ರೆಸ್ ಸಂಸದರ ಬೆಂಬಲ
ಸಂವಿಧಾನ 370ನೇ ವಿಧಿಯನ್ನು ರದ್ದುಗೊಳಿಸುವಂತೆ ಮಂಡಿಸಲಾಗಿದ್ದ ಖಾಸಗಿ ಮಸೂದೆಯ ಕುರಿತು ಲೋಕಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಈ ಬಗ್ಗೆ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದರು. ಈ ಮಸೂದೆಗೆ ಅನಿರೀಕ್ಷಿತವಾಗಿ ಕಾಂಗ್ರೆಸ್ ಸಂಸದರಿಂದಲೂ ಬೆಂಬಲ ದೊರಕಿತ್ತು. ಜಮ್ಮು ಮತ್ತು ಕಾಶ್ಮೀರದ ಭವಿಷ್ಯದ ಹಿತದೃಷ್ಟಿಯಿಂದ ಈ ಅನಿಶ್ಚಿತತೆಯ ಸ್ಥಿತಿಯನ್ನು ಅಂತ್ಯಗೊಳಿಸಲು ಸಮಯ ಬಂದಿದೆ ಎಂದು ಅವರು ವಿರೋಧಪಕ್ಷದ ಸದಸ್ಯರೊಂದಿಗೆ ಸೇರಿಕೊಂಡು ಒತ್ತಾಯಿಸಿದ್ದರು.

ಕಾಶ್ಮೀರಿ ನಾಯಕರೂ ಜತೆಗೂಡಿದ್ದರು
ಕಾಂಗ್ರೆಸ್ನ ನಾಯಕರಾದ ರಾಮ್ ಮನೋಹರ್ ಲೋಹಿಯಾ, ಸರೋಜಿನಿ ನಾಯ್ಡು ಅವರೊಂದಿಗೆ ಕಾಶ್ಮೀರದ ನಾಯಕರಾದ ಅಬ್ದುಲ್ ಘನಿ ಗೋನಿ ಮತ್ತು ಎನ್ಎಚ್ ಸಮ್ನಾನಿ ಸೇರಿದಂತೆ ಅನೇಕ ಮುಖಂಡರು ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಮಸೂದೆ ಕುರಿತ ಚರ್ಚೆ ಲೋಕಸಭೆಯಲ್ಲಿ ತಾರ್ಕಿಕ ಅಂತ್ಯ ಪಡೆದುಕೊಳ್ಳಲಿಲ್ಲ.

ಕೊನೆಗೂ ಬದಲಾದ ಸನ್ನಿವೇಶ
ಅಂದಿನಿಂದಲೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವಂತೆ ಅನೇಕ ಬಾರಿ ವಿವಿಧ ರೀತಿಯ ಬೇಡಿಕೆಗಳು ಕೇಳಿಬಂದಿದ್ದವು. ಕೊನೆಗೂ ಅದು ಕಳೆದ ವಾರ ಜಾರಿಗೆ ಬಂದಿತು. ಜತೆಗೆ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲು ಕೂಡ ನಿರ್ಧಾರ ತೆಗೆದುಕೊಳ್ಳಲಾಯಿತು. ರಾಜ್ಯಸಭೆಯಲ್ಲಿ 351 ಸದಸ್ಯರು ಮಸೂದೆಯನ್ನು ಬೆಂಬಲಿಸಿದರೆ, 72 ಮಂದಿ ವಿರೋಧ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ 370 ಮಂದಿಯ ಬೆಂಬಲ ಸಿಕ್ಕಿತು. 70 ಸದಸ್ಯರು ವಿರೋಧಿಸಿದ್ದರು.

ಭಾರತಕ್ಕೆ ರಷ್ಯಾ ಬೆಂಬಲ
ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ನಿರ್ಧಾರಕ್ಕೆ ರಷ್ಯಾ ಬೆಂಬಲ ವ್ಯಕ್ತಪಡಿಸಿದೆ. ಭಾರತ ಗಣರಾಜ್ಯದ ಸಂವಿಧಾನದ ಚೌಕಟ್ಟಿನೊಳಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಷ್ಯಾ ಪ್ರತಿಕ್ರಿಯೆ ನೀಡಿದೆ. ನಾವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕುವ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಭಾರತ ಗಣರಾಜ್ಯದ ನಿರ್ಧಾರದ ವಾಸ್ತವಗಳನ್ನು ಅರಿತಿದ್ದೇವೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಈ ವಿಚಾರವಾಗಿ ಯಾವುದೇ ಉದ್ವಿಗ್ನತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ರಷ್ಯಾ ಹೇಳಿದೆ.












Click it and Unblock the Notifications