ತುಟ್ಟಿ ಭತ್ಯೆ ಏರಿಕೆ: ಸರ್ಕಾರಿ ನೌಕರರಿಗೆ ಕೇಂದ್ರದಿಂದ ದೀಪಾವಳಿ ಉಡುಗೊರೆ
ನವದೆಹಲಿ, ಅಕ್ಟೋಬರ್ 9: ದಸರಾ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆಯೇ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿಗೂ ಮುನ್ನ ಸಿಹಿ ಸುದ್ದಿಯ ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯಲ್ಲಿ ಶೇ 5ರಷ್ಟು ಹೆಚ್ಚಳ ಮಾಡಲಾಗಿದೆ. ಈ ಏರಿಕೆಯು ಪ್ರಸಕ್ತ ವರ್ಷದ ಜುಲೈ ತಿಂಗಳಿನಿಂದಲೇ ಅನ್ವಯವಾಗಲಿದೆ. ಈ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
'ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು (ಡಿಎ) ಶೇ 12ರಿಂದ ಶೇ 17ಕ್ಕೆ ಹೆಚ್ಚಿಸಿದೆ' ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಬುಧವಾರ ಸಂಪುಟ ಸಭೆಯ ಬಳಿಕ ತಿಳಿಸಿದರು.
ಈ ಘೋಷಣೆಯಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಲಾಭ ಪಡೆದುಕೊಳ್ಳಲಿದ್ದಾರೆ. ಈ ಏರಿಕೆಯು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಅಂದಾಜು 16,000 ಕೋಟಿ ರೂ. ಹೊರೆಯಾಗಲಿದೆ ಎಂದು ಹೇಳಲಾಗಿದೆ.
ತುಟ್ಟಿಭತ್ಯೆಯು ಹಣದುಬ್ಬರದ ಪ್ರಭಾವವನ್ನು ತಗ್ಗಿಸಲು ಸರ್ಕಾರಿ ನೌಕರರಿಗೆ, ಸಾರ್ವಜನಿಕ ವಲಯದ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಮೂಲ ವೇತನದ ಮೇಲೆ ಶೇಕಡಾವಾರು ಲೆಕ್ಕಾಚಾರದೊಂದಿಗೆ ನೀಡಲಾಗುವ ಜೀವನೋಪಾಯ ವೆಚ್ಚದ ಭತ್ಯೆಯಾಗಿದೆ.

ಆಶಾ ಕಾರ್ಯಕರ್ತೆಯರಿಗೂ ಸಿಹಿ
ಇದರ ಜತೆಗೆ ಆಶಾ ಕಾರ್ಯಕರ್ತೆಯರಿಗೂ ಕೇಂದ್ರ ಸರ್ಕಾರ ಹಬ್ಬದ ಉಡುಗೊರೆ ನೀಡಿದೆ. ಆಶಾ ಕಾರ್ಯಕರ್ತರ ಸಂಭಾವನೆಯನ್ನು 1,000 ರೂ.ನಿಂದ 2,000 ರೂಪಾಯಿಗೆ ಹೆಚ್ಚಿಸಲು ಕೂಡ ಸರ್ಕಾರ ನಿರ್ಧರಿಸಿದೆ ಎಂದು ಜಾವೇಡಕರ್ ಮಾಹಿತಿ ನೀಡಿದರು. ಸರ್ಕಾರಿ ನೌಕರರಿಗೆ ಕೇಂದ್ರದ ದೀಪಾವಳಿ ಉಡುಗೊರೆ ಎಂದು ಅವರು ಹೇಳಿದರು.

ಮೊದಲ ಬಾರಿಗೆ ಅಧಿಕ ಏರಿಕೆ
'ಈ ಘೋಷಣೆಯು ದುಡಿಯುವ ವರ್ಗಕ್ಕೆ ಉತ್ಸಾಹ ತುಂಬುವ ಪ್ರಯತ್ನವಾಗಿದೆ. ಇದಕ್ಕೂ ಹಿಂದೆ ಡಿಎ ಹೆಚ್ಚಳವನ್ನು ಶೇ 2-3ರಷ್ಟು ಮಾತ್ರ ಮಾಡಲಾಗಿತ್ತು. ಆದರೆ ಈ ಬಾರಿ ಶೇ 5ರಷ್ಟು ಹೆಚ್ಚಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿಯೇ ಇದು ಅತಿ ಹೆಚ್ಚಿನ ಏರಿಕೆಯಾಗಿದೆ' ಎಂದು ಜಾವಡೇಕರ್ ಹೇಳಿದರು.

ಕಿಸಾನ್ ಸಮ್ಮಾನ್ ಗಡುವು ವಿಸ್ತರಣೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿ ಆಗಸ್ಟ್ 1ರ ಬಳಿಕ ಪ್ರಯೋಜನ ಪಡೆಯಲು ಅಗತ್ಯವಾದ ಆಧಾರ್ ಕಡ್ಡಾಯವಾಗಿ ನೀಡುವ ಗಡುವನ್ನು ನವೆಂಬರ್ 30ರವರೆಗೂ ವಿಸ್ತರಿಸಲು ಕೂಡ ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.

ನೆಲೆ ಕಳೆದುಕೊಂಡವರಿಗೆ ಪರಿಹಾರ
ಆರ್ಥಿಕ ಕುಸಿತದ ಸಮಸ್ಯೆ ಎದುರಿಸುತ್ತಿರುವ ವಿವಿಧ ವಲಯಗಳಿಗೆ ನೆರವಾಗಲು ನರೇಂದ್ರ ಮೋದಿ ನೇತೃತ್ವದಲ್ಲಿ ವಿವಿಧ ಕ್ರಮಗಳನ್ನು ಪ್ರಕಟಿಸುವುದಾಗಿ ಭರವಸೆ ನೀಡಿದರು.
ಜಮ್ಮು ಮತ್ತು ಕಾಶ್ಮೀರವಲ್ಲದೆ ಬೇರೆ ಪ್ರದೇಶಗಳಲ್ಲಿ ನೆಲೆಸಿದ್ದು, ಈಗ ರಾಜ್ಯಕ್ಕೆ ಬಂದು ವಾಸಿಸುತ್ತಿರುವ 5,300 ನೆಲೆ ಕಳೆದುಕೊಂಡ ಕುಟುಂಬದವರಿಗೂ ತಲಾ 5.5 ಲಕ್ಷ ರೂಪಾಯಿ ನೀಡಲಾಗುವುದು. ಇದು ನೆಲೆ ಕಳೆದುಕೊಂಡ ಕುಟುಂಬಗಳಿಗೆ ಒದಗಿಸಲಾಗುವ ನ್ಯಾಯ ಎಂದು ಜಾವಡೇಕರ್ ವಿವರಿಸಿದರು.












Click it and Unblock the Notifications