ನವದೆಹಲಿಯಲ್ಲೇ ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ
ನವದೆಹಲಿ, ಸಪ್ಟೆಂಬರ್.24: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆಯನ್ನು ನವದೆಹಲಿಯಲ್ಲೇ ನೆರವೇರಿಸಲು ತೀರ್ಮಾನಿಸಲಾಗಿದೆ. ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ.
ನವದೆಹಲಿಯಲ್ಲಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಬೆಳಗಾವಿಯಿಂದ ಕುಟುಂಬ ಸದಸ್ಯರು ಗುರುವಾರ ಬೆಳಗ್ಗೆ ನವದೆಹಲಿಗೆ ತೆರಳಲಿದ್ದಾರೆ.
ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆ ಕೊವಿಡ್-19 ನಿಯಮಗಳ ಅನುಸಾರ ಅಂತ್ಯಕ್ರಿಯೆ ನಡೆಸುವುದಕ್ಕೆ ಮೊದಲು ತೀರ್ಮಾನಿಸಲಾಗಿತ್ತು. ತದನಂತರ ಕುಟುಂಬ ಸದಸ್ಯರ ಮನವಿ ಮೇರೆಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲು ಅನುಮತಿ ನೀಡಲಾಗಿದೆ. ಬಾಳಯ್ಯ ಹಿರೇಮಠ ಸಲಹೆಯಂತೆ ಅಂತ್ಯಕ್ರಿಯೆ ಅಂತಿಮ ವಿಧಿವಿಧಾನಗಳು ನೆರವೇರಲಿವೆ ಎಂದು ತಿಳಿದು ಬಂದಿದೆ.

ಮಗ ಅಂತಿಮ ದರ್ಶನಕ್ಕೆ ಮಿಡಿದ ತಾಯಿಹೃದಯ:
ನವದೆಹಲಿಯಲ್ಲೇ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ನೆರವೇರಿಸುತ್ತಿರುವ ಹಿನ್ನೆಲೆ ಮಗನ ಅಂತಿಮ ದರ್ಶನಕ್ಕಾಗಿ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆ ಹಿರಿಯ ವಯಸ್ಸಿನ ತಾಯಿಯವರನ್ನು ನವದೆಹಲಿಗೆ ಕರೆದುಕೊಂಡು ಹೋಗುವುದಕ್ಕೆ ನಿರಾಕರಿಸಲಾಗಿದೆ. ಅಗಲಿದ ಮಗನ ನೆನಪಿನಲ್ಲಿ ಅಂತಿಮ ದರ್ಶನವನ್ನೂ ಪಡೆಯಲಾಗದ ನೋವಿನಲ್ಲಿ ತಾಯಿಹೃದಯ ಮಿಡಿಯುತ್ತಿದೆ.












Click it and Unblock the Notifications