ಲಾಕ್ಡೌನ್ನಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳು ತವರಿಗೆ ಹೋಗಲು ಕೇಂದ್ರ ಸಮ್ಮತಿ
ದೆಹಲಿ, ಏಪ್ರಿಲ್ 29: ಲಾಕ್ಡೌನ್ ಘೋಷಣೆ ಆದ ದಿನದಿಂದ ಭಾರತದ ಹಲವು ಕಡೆ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ತಮ್ಮ ಊರುಗಳಿಗೆ ವಾಪಸ್ ಹೋಗಲು ಬುಧವಾರ ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿದೆ.
ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿರುವ ಕೇಂದ್ರ ಸರ್ಕಾರ, ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಸುರಕ್ಷಿತವಾಗಿ ತಲುಪಲು ಆಯಾ ರಾಜ್ಯ ಸರ್ಕಾರಗಳು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಆದೇಶಿಸಿದೆ.
'ಕೇಂದ್ರ ಸರ್ಕಾರಕ್ಕೆ ಸಮಯವಿದೆ, ಆದರೆ, ಕಾರ್ಮಿಕರು ಉಳಿಯಲು ಸಮಯವಿಲ್ಲ'
ಮಾರ್ಗಸೂಚಿಯ ಪ್ರಕಾರ, ಪ್ರಯಾಣ ಆರಂಭಿಸುವುದಕ್ಕೂ ಮುಂಚೆ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಮತ್ತು ಮನೆ ತಲುಪಿದ ನಂತರ ಅವರು ಹೋಮ್ ಕ್ವಾರೆಂಟೈನ್ ಆಗಬೇಕು ಎಂದು ಹೇಳಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕಾರ್ಮಿಕರು, ವಿದ್ಯಾರ್ಥಿಗಳು ಹೋಗಬೇಕಾಗಿರುವುದರಿಂದ ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮುಂತಾದವರ ಸಂಚಾರ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾರ್ಗ ಸೂಚಿ#lockdown #MigrantWorkers pic.twitter.com/gGvZyi9SbY
— oneindiakannada (@OneindiaKannada) April 29, 2020
ಅಂತರರಾಜ್ಯ ಕಾರ್ಮಿಕರು ಇದ್ದರೆ ಅವರಿಗೆ ರಸ್ತೆ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಉಭಯ ರಾಜ್ಯಗಳು ಕ್ರಮ ಜರುಗಿಸಬೇಕು. ವ್ಯಕ್ತಿಗಳನ್ನು ಸಾಗಿಸುವ ಸಲುವಾಗಿ ಬಸ್ಗಳ ವ್ಯವಸ್ಥೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆ ವಾಹನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಎಂದು ಕೇಂದ್ರ ಸಲಹೆ ನೀಡಿದೆ.
ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ
ಮಧ್ಯಪ್ರದೇಶ, ಬಿಹಾರ್, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಸುಮಾರು 5 ಮಿಲಿಯನ್ ಕಾರ್ಮಿಕರು ಲಾಕ್ಡೌನ್ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈಗ, ಈ ಎಲ್ಲರನ್ನು ತಮ್ಮ ತಮ್ಮ ಊರುಗಳಿಗೆ ಸಾಗಿಸುವುದು ಬಹಳ ಕಷ್ಟದ ಕೆಲಸ ಆಗಿದ್ದು, ಇದನ್ನು ರಾಜ್ಯ ಸರ್ಕಾರಗಳು ಯಾವ ರೀತಿ ನಿಭಾಯಿಸುತ್ತೆ ಎಂಬುದು ನೋಡಬೇಕಿದೆ.
ಇನ್ನುಳಿದಂತೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 31.787ಕ್ಕೆ ಏರಿದ್ದು, ಸಾವಿನ ಸಂಖ್ಯೆ 1008. ಪ್ರಸ್ತುತ 22982 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 7796 ಜನರು ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.