ಬೋಫೋರ್ಸ್ ಹೆಚ್ಚುವರಿ ತನಿಖೆ : ಅರ್ಜಿ ಹಿಂತೆಗೆದ ಸಿಬಿಐ
ನವದೆಹಲಿ, ಮೇ 16 : ಬೋಫೋರ್ಸ್ ಹಗರಣದ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ಸಿಬಿಐ ಕೋರ್ಟಿಗೆ ತಿಳಿಸಿದೆ. ಖಾಸಗಿ ಅರ್ಜಿದಾರ ಅಜಯ್ ಅಗರವಾಲ್ ಅವರು ಕೂಡ ಹೆಚ್ಚಿನ ತನಿಖೆಯ ಮನವಿ ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇದಕ್ಕೆ ಪ್ರತಿಯಾಗಿ, ಅರ್ಜಿಯನ್ನು ಹಿಂತೆಗೆದುಕೊಳ್ಳಲು ಸಿಬಿಐಗೆ ಮತ್ತು ಖಾಸಗಿ ಅರ್ಜಿದಾರ ಅಜಯ್ ಅಗರವಾಲ್ ಅವರಿಗೆ ಅನುಮತಿ ನೀಡಿದೆ. ಅಲ್ಲದೆ, ಬೋಫೋರ್ಸ್ ಹಗರಣದ ಹೆಚ್ಚಿನ ತನಿಖೆ ನಡೆಸಲು ತಮಗಿರುವ ಅರ್ಹತೆಯಾದರೂ ಏನು ಎಂದು ಅಜಯ್ ಅಗರವಾಲ್ ಅವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಇದಕ್ಕೂ ಮೊದಲು, ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಲ್ ನವೀನ್ ಕಶ್ಯಪ್ ಅವರು, ಬೋಫೋರ್ಸ್ ಹಗರಣದ ಹೆಚ್ಚುವರಿ ತನಿಖೆಗಾಗಿ ನ್ಯಾಯಾಲಯದ ಅನುಮತಿ ಏಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಯಾವ ಕಾನೂನಿನ ಅಡಿಯಲ್ಲಿ ಹೆಚ್ಚಿನ ತನಿಖೆಗಾಗಿ ಅನುಮತಿ ನೀಡಬೇಕು ಎಂದು ಸಿಬಿಐ ಅನ್ನು ಪ್ರಶ್ನಿಸಿದ್ದರು.
1987ರಲ್ಲಿ ಭಾರತ ಸರಕಾರ ಮತ್ತು ಸ್ವೀಡನ್ನಿನ ಶಸ್ತ್ರಾಸ್ತ್ರ ತಯಾರಿಕಾ ಕಂಪನಿ ನಡುವೆ ನಡೆದಿದ್ದ ಬಹುಕೋಟಿ ರುಪಾಯಿಯ ಈ ಹಗರಣದಲ್ಲಿ ಬೋಫೋರ್ಸ್ ಕಂಪನಿ ಭಾರತೀಯ ರಾಜಕಾರಣಿಗಳಿಗೆ, ಕೆಲ ಕಾಂಗ್ರೆಸ್ ಸದಸ್ಯರಿಗೆ, ಮತ್ತು ಕೆಲ ರಕ್ಷಣಾಧಿಕಾರಿಗಳಿಗೆ 64 ಕೋಟಿ ರು.ಯಷ್ಟು ಲಂಚ ನೀಡಿದೆ ಎಂದು ಸ್ವೀಡನ್ ರೇಡಿಯೇ ಸ್ಫೋಟಕ ಮಾಹಿತಿ ನೀಡಿತ್ತು.
ಭಾರತದ ಮತ್ತು ಸ್ವೀಡನ್ನಿನ ಅಧಿಕಾರಿಗಳಲ್ಲದೆ, ಇದರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಕೂಡ ಭಾರೀ ಪ್ರಮಾಣದಲ್ಲಿ ಬೋಫೋರ್ಸ್ ಎಬಿ ಬ್ಯಾಂಕ್ ನಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಗರಣ ಮೈಮೇಲೆ ಸುತ್ತಿಕೊಂಡಿದ್ದರಿಂದ ರಾಜೀವ್ ಗಾಂಧಿ ಅವರ ಪಕ್ಷ 1989ರ ಲೋಕಸಭೆ ಚುನಾವಣೆಯಲ್ಲಿ ಭಾರೀ ಸೋಲು ಕಾಣಬೇಕಾಯಿತು.
ಈ ಹಗರಣದಲ್ಲಿ ಸ್ವೀಡನ್ ಮತ್ತು ಭಾರತದ ನಡುವೆ ಡೀಲ್ ಕುದುರಿಸಲು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಒಟ್ಟಾವಿಯೋ ಕ್ವಟ್ರೋಚಿ. ಈತ ಸೋನಿಯಾ ಗಾಂಧಿ ಅವರ ಆಪ್ತ ವಲಯದ ಸಖ. ಈತ ನಡೆಸುತ್ತಿದ್ದ ಎಇ ಸರ್ವೀಸಸ್ ಎಂಬ ಕಂಪನಿಗೂ ಈ ಹಗರಣದಲ್ಲಿ ಲಂಚ ನೀಡಲಾಗಿತ್ತು. ಇದರಲ್ಲಿ ಕ್ಯೂ ಮತ್ತು ಆರ್ ಎಂಬ ಎರಡು ಹೆಸರುಗಳನ್ನು ಪ್ರಸ್ತಾಪಿಸಲಾಗಿತ್ತಾದರೂ, ಸಾಕ್ಷ್ಯವಾಗಿ ವಶಪಡಿಸಿಕೊಳ್ಳಲಾಗಿದ್ದ ದಾಖಲೆಗಳು ಝೆರಾಕ್ಸ್ ಕಾಪಿ ಆಗಿದ್ದರಿಂದ ಅವರಿಬ್ಬರ ಹೆಸರನ್ನು ಕೈಬಿಡಲಾಗಿತ್ತು.












Click it and Unblock the Notifications