ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ; ತಮಿಳುನಾಡು ಸಚಿವ
ನವದೆಹಲಿ, ಜುಲೈ 16: ಮೇಕೆದಾಟು ಅಣೆಕಟ್ಟು ಯೋಜನೆ ಪ್ರಸ್ತಾವನೆಯನ್ನು ಕರ್ನಾಟಕ ಮುಂದುವರೆಸುವಂತಿಲ್ಲ. ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್ ಶುಕ್ರವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಣೆಕಟ್ಟು ನಿರ್ಮಾಣದ ಮಾತು ರಾಜಕೀಯ ಹೇಳಿಕೆಯಷ್ಟೇ ಎಂದಿದ್ದಾರೆ.
ತಮಿಳುನಾಡು ವಿಧಾನಸಭೆ ಪ್ರತಿನಿಧಿಸುವ ಎಲ್ಲಾ ಪಕ್ಷಗಳ ನಿಯೋಗದ ನೇತೃತ್ವ ವಹಿಸಿದ್ದ ದೊರೈಮುರುಗನ್ ಶುಕ್ರವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, "ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆಯನ್ನು ಬೆಂಬಲಿಸಬಾರದೆಂದು ಶೇಖಾವತ್ ಅವರಿಗೆ ಮನವಿ ಮಾಡಲಾಗಿದೆ. ತಮಿಳುನಾಡು ರೈತರು ಹಾಗೂ ರಾಜ್ಯದ ಮೇಲೆ ಇದು ದುಷ್ಪರಿಣಾಮ ಬೀರಲಿದೆ" ಎಂದಿದ್ದಾರೆ.

"ಯೋಜನೆ ಕುರಿತು ವಿಸ್ತೃತ ವರದಿ ತಯಾರಿಸಲು ಕೇಂದ್ರ ನಿಗದಿಪಡಿಸಿದ ಷರತ್ತುಗಳನ್ನು ಕರ್ನಾಟಕ ಪೂರೈಸಿಲ್ಲ. ಷರತ್ತಿನಲ್ಲಿ, ತಮಿಳುನಾಡು, ಪುದುಚೇರಿ, ಕೇರಳ ರಾಜ್ಯಗಳ ಸಮ್ಮತಿ ಹಾಗೂ ಕಾವೇರಿ ಜಲ ಪ್ರಾಧಿಕಾರ ಹಾಗೂ ಕೇಂದ್ರ ಜಲ ಮಂಡಳಿಯ ಅನುಮೋದನೆ ಪಡೆಯಬೇಕೆಂದು ಹೇಳಿತ್ತು. ಆದರೆ ಈ ಯಾವುದೇ ಷರತ್ತುಗಳನ್ನು ಕರ್ನಾಟಕ ಪೂರೈಸಿಲ್ಲ. ಯಾವುದೇ ಮಾನದಂಡಗಳನ್ನು ಪೂರೈಸದೇ ಕರ್ನಾಟಕ ತನ್ನದೇ ನಿಯಮಗಳನ್ನು ಸೃಷ್ಟಿಸುತ್ತಿದೆ. ಇದನ್ನು ಅನುಮೋದಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
"ಸದ್ಯಕ್ಕೆ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಶ್ನೆಯಿಲ್ಲ. ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಕಾವೇರಿ ಜಲ ಪ್ರಾಧಿಕಾರದ ಪೂರ್ವಾಪೇಕ್ಷಿತ ಅಂಶಗಳನ್ನು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸುವವರೆಗೂ ಈ ಯೋಜನೆಯ ಪ್ರಶ್ನೆ ಇಲ್ಲ" ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಈ ಹಿಂದೆ, ಕುಡಿಯುವ ನೀರಿನ ಉದ್ದೇಶದ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಕರ್ನಾಟಕದ ಪ್ರಸ್ತಾವನೆಗೆ ನ್ಯಾಯ ಒದಗಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಭರವಸೆ ನೀಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್, "ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ತೀರ್ಪಿನ ವಿರುದ್ಧ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಹಕ್ಕು ಕರ್ನಾಟಕಕ್ಕೆ ಇದ್ದರೆ, ಕಾನೂನು ಮಾರ್ಗದ ಮೂಲಕ ಯೋಜನೆ ಸ್ಥಗಿತಗೊಳಿಸುವ ಹಕ್ಕು ನಮಗೂ ಇದೆ" ಎಂದು ಹೇಳಿದ್ದರು.











Click it and Unblock the Notifications