ಪ್ಲ್ಯಾನ್ ಬಿ ರೆಡಿ! ಲೋಕಸಭಾ ಚುನಾವಣೆಗೆ ಬಿಜೆಪಿಯ ಹೊಸ ಕಾರ್ಯತಂತ್ರ
ನವದೆಹಲಿ, ಡಿಸೆಂಬರ್ 27: ವಿಧಾನಸಭಾ ಚುನಾವಣೆಗಳ ಅನಿರೀಕ್ಷಿತ ಸೋಲು, ಮಿತ್ರ ಪಕ್ಷಗಳೊಂದಿಗೆ ಮುನಿಸು ಎಲ್ಲವೂ ಈಗ ಬಿಜೆಪಿಯನ್ನು ಹೈರಾಣಾಗಿಸಿದೆ. ಲೋಕಸಭಾ ಚುನಾವಣೆಗೂ ಮುನ್ನ ಹೊಸ ಕಾರ್ಯತಂತ್ರ ರೂಪಿಸಲು ಬಿಜೆಪಿ ಮುಂದಾಗಬೇಕಾದ್ದು ಅನಿವಾರ್ಯವಾಗಿದೆ.
ಎನ್ ಡಿಎ ಜೊತೆ ಗುರುತಿಸಿಕೊಂಡಿದ್ದ ಮೈತ್ರಿಪಕ್ಷಗಳು ಮಹಾಘಟಬಂಧನದ ಬೆನ್ನುಹತ್ತಿರುವ ಹೊತ್ತಲ್ಲಿ ಬಿಜೆಪಿಗೆ ತಲೆನೋವು ಸಹಜವೇ.
ಇದೀಗ ಎಚ್ಚೆತ್ತುಕೊಂಡಿರುವ ಬಿಜೆಪಿ 'ಪ್ಲ್ಯಾನ್ ಬಿ' ಬಗ್ಗೆ ಯೋಚಿಸುತ್ತಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಬಿಜೆಪಿ ಮುಖಂಡ ರಾಮ್ ಮಾಧವ್, 'ಮೈತ್ರಿ ಎಂದರೆ ಮತ್ತೇನಿಲ್ಲ, ಹೊಂದಾಣಿಕೆ ಮತ್ತು ರಾಜಿ. ಅದಕ್ಕೆ ನಾವು ಸಿದ್ಧವಿದ್ದೇವೆ' ಎಂದಿದ್ದಾರೆ.

ಏನಿದು ಪ್ಲ್ಯಾನ್ ಬಿ?
ಬಿಜೆಪಿ ಈಗಾಗಲೇ ಹಲವು ಪಕ್ಷಗಳೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದೆ. ಜಮ್ಮು ಕಾಶ್ಮೀರದಲ್ಲಿ ಪಿಡಿಪಿಗೆ ಗುಡ್ ಬೈ ಹೇಳಿದೆ. ಎನ್ ಡಿಎ ಯಿಂದ ಟಿಡಿಪಿ ಹೊರಹೋಗಿದೆ. ಅತ್ತ ಶಿವಸೇನೆ ನಿರಂತರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಿದೆ. ಟಿಆರ್ ಎಸ್ ಮುಖಂಡ ಕೆ ಚಂದ್ರಶೇಖರ್ ರಾವ್ ಸಂಯುಕ್ತ ಕೂಟ ಕಟ್ಟುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಮಹಾಘಟಬಂಧನ ನಿರ್ಮಿಸುತ್ತಿವೆ. ಈ ಸಂದರ್ಭದಲ್ಲಿ ಮೈತ್ರಿ ಪಕ್ಷಗಳೊಂದಿಗೆ ಮುನಿಸಕೊಂಡರೆ ತನಗೇ ನಷ್ಟ ಎಂಬುದನ್ನು ಮನಗಂಡ ಬಿಜೆಪಿ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಸೀಟು ಹಂಚಿಕೆಯ ಸಂಬಂಧ ಸ್ವಲ್ಪ ಉದಾರವಾಗುವ, ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಬಿಜೆಪಿ ಬೆಂಬಲಿಸಲು ಹಲವರು ಸಿದ್ಧರಿದ್ದಾರೆ
ಎನ್ ಡಿಎ ಮೈತ್ರಿಕೂಟವನ್ನು ಕೆಲವರು ತೊರೆದಿರುವುದು ನಿಜ. ಅವೆಲ್ಲ ಸಣ್ಣ-ಪುಟ್ಟ ಪಕ್ಷಗಳು. ಅದರಿದ ನಮಗೆ ಯಾವ ಸಮಸ್ಯೆಯೂ ಇಲ್ಲ. ಆದರೆ ದಕ್ಷಿಣ ಭಾರತ ಮತ್ತು ಪೂರ್ವ ಭಾರತದಲ್ಲಿ ನಮ್ಮೊಂದಿಗೆ ಕೈಜೋಡಿಸಲು ಹಲವರು ಸಿದ್ಧರಿದ್ದಾರೆ ಎಂದು ರಾಮ್ ಮಾಧವ್ ಹೇಳಿದ್ದಾರೆ.

ಮಹಾಘಟಬಂಧನ ಸೇರಿದ ಕುಶ್ವಾಹ
ಇತ್ತೀಚೆಗಷ್ಟೇ ರಾಷ್ಟ್ರೀಯ ಲೋಕ ಸಮತಾ ಪಕ್ಷದ ನಾಯಕ ಉಪೇಂದ್ರ ಕುಶ್ವಾಹ ಎನ್ ಡಿಎ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಮತ್ತಿತರ ವಿಪಕ್ಷಗಳ ನೇತೃತ್ವದ ಮಹಾಘಟಬಂಧನದೊಂದಿಗೆ ಕೈಜೋಡಿಸಿದ್ದರು.

ಬಿಹಾರದಲ್ಲಿ ಬಂಡಾಯ ಶಮನ
ಆದರೆ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಮತ್ತು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಜೊತೆ ಬಿಹಾರದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮೈತರಿ ಮಾಡಿಕೊಂಡಿರುವ ಬಿಜೆಪಿ ಆ ಎರಡು ಪಕ್ಷಗಳು ಎನ್ ಡಿಎ ತೊರೆಯದಂತೆ ಜಾಣ ನಡೆ ಇಟ್ಟಿದೆ.












Click it and Unblock the Notifications