ಮಮತಾ 'ಲಂಕಿಣಿ', ಅಖಿಲೇಶ್ 'ಔರಂಗಜೇಬ್' ಎಂದ ಬಿಜೆಪಿ ಶಾಸಕ
ನವದೆಹಲಿ, ಜುಲೈ 30: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಲಂಕಿಣಿ ಎಂದು ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಔರಂಗಜೇಬ್ ಎಂದು ಬಿಜೆಪಿಯ ಶಾಸಕರೊಬ್ಬರು ಹೇಳಿಕೆ ನೀಡಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.
ಶಾಸಕ ಸುರೇಂದ್ರ ಸಿಂಗ್ ಅವರು ಈ ಹೇಳಿಕೆ ನೀಡಿದ್ದು, ಈಗ ಹೊಸ ವಿವಾದವನ್ನು ಸೃಷ್ಟಿಸಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸೆಯನ್ನು ಉಲ್ಲೇಖಿಸಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಲಂಕಿಣಿ ಎಂದು ಸುರೇಂದ್ರ ಸಿಂಗ್ ಸಂಬೋಧಿಸಿದ್ದಾರೆ.
ಇನ್ನು, ತನ್ನ ತಂದೆ ಹಾಗೂ ಚಿಕ್ಕಪ್ಪನನ್ನು ಪಕ್ಷದಿಂದ ಹೊರ ಹಾಕಿದ ಅಖಿಲೇಶ್ ಯಾದವ್ ಅವರನ್ನು ಔರಂಗಜೇಬ್ ಎಂದು ವ್ಯಾಖ್ಯಾನಿಸಿದ್ದಾರೆ.

ಈ ಎರಡೂ ಹೇಳಿಕೆಗೆ ತನ್ನದೇ ಆದ ಅರ್ಥವನ್ನು ನೀಡಿರುವಂತಹ ಸುರೇಂದ್ರ ಸಿಂಗ್ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಗೆಲುವಿನ ಬಳಿಕ ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆಸಲಾಗಿದೆ ಇದಕ್ಕೆ ಟಿಎಂಸಿ ಪಕ್ಷ ಹಾಗೂ ಸರ್ಕಾರದ ಬೆಂಬಲವಿದೆ. ಹೀಗಾಗಿ ಮಮತಾ ಬ್ಯಾನರ್ಜಿಗೆ ಲಂಕಿಣಿ ಎಂದು ಕರೆದಿದ್ದಾರೆ.
ಇನ್ನು, ಅಖಿಲೇಶ್ ಯಾದವ್ ಅವರು 2017ರಲ್ಲಿ ಹೊಸ ಪಕ್ಷವನ್ನು ಸ್ಥಾಪಿಸುತ್ತಿದ್ದಂತೆ ತಂದೆಯನ್ನು ಪಕ್ಷದಿಂದ ಹೊರಹಾಕಿದರು, ಹಾಗೂ ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ಕೂಡ ಪಕ್ಷದಿಂದ ಹೊರಹಾಕಿದರು.
ಈ ಹಿಂದೆ ಮೊಘಲ್ ಸಾಮ್ರಾಜ್ಯದಲ್ಲಿ ಔರಂಗಜೇಬ್ ಕೂಡ ಇದೇ ರೀತಿ ಮಾಡಿದ್ದ, ಶಹಜಹಾನ್ನಿಂದ ಅಧಿಕಾರ ಪಡೆದುಕೊಂಡ ಕೂಡಲೇ ಶಹಜಹಾನ್ನನ್ನು ಔರಂಗಜೇಬ್ ಜೈಲಿಗಟ್ಟಿದ್ದ. ಈ ಕಾರಣಕ್ಕಾಗಿ ಔರಂಗಜೇಬ್ ಹಾಗೂ ಅಖಿಲೇಶ್ ಜಾದವ್ಗೆ ಸಾಮ್ಯತೆ ಇದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಈಗ ಚುನಾವಣೆಗೆ ಎಲ್ಲಾ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುರೇಂದ್ರ ಸಿಂಗ್ ಈ ಹೇಳಿಕೆ ನೀಡಿರುವುದು ಇನ್ನಷ್ಟು ರಾಜಕೀಯ ವಿವಾದವನ್ನು ಸೃಷ್ಟಿಸುವ ಸಾಧ್ಯತೆ ಇದೆ.
ಮಾನವ ಹಕ್ಕುಗಳ ಆಯೋಗದಿಂದ ವರದಿ: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಹಿಂಸಾಚಾರದ ಕುರಿತಂತೆ ಕೋಲ್ಕತ್ತ ಹೈಕೋರ್ಟ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈಗಾಗಲೇ ವರದಿ ನೀಡಿದೆ.
ಚುನಾವಣಾ ಗೆಲುವಿನ ಬಳಿಕ ರಾಜ್ಯದಲ್ಲಿ ಹಿಂಸಾಚಾರ ವ್ಯಾಪಕವಾಗಿ ನಡೆದಿದೆ, ಬಿಜೆಪಿ ಕಾರ್ಯಕರ್ತರ ಮೇಲೆ ಸಾಕಷ್ಟು ಹಿಂಸಾಚಾರ ನಡೆದಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕ್ರಮ ಕೈಗೊಂಡಿಲ್ಲ ಎಂದು ಮಾನವ ಹಕ್ಕುಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದರು: ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿತ್ತು. ಹೀಗಿರುವಾಗ ತಮ್ಮ ಪಕ್ಷದ ಅನೇಕ ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು.
ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ, ಲೂಟಿ ಮತ್ತು ಕೊಲೆಗಳ ಬಗ್ಗೆ ನಾನು ಪ್ರಧಾನ ಮಂತ್ರಿ ಕಚೇರಿ ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲು ತ್ವರಿತ ಪ್ರಯತ್ನ ನಡೆಯಬೇಕು ಎಂದು ಮೋದಿ ಹೇಳಿದ್ದರು.
ಅದಕ್ಕೂ ಮುನ್ನ ಮಮತಾ ಬ್ಯಾನರ್ಜಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಅಲ್ಲದೇ ಹಿಂಸಾಚಾರಕ್ಕೆ ಬಿಜೆಪಿಗರೇ ಕಾರಣ ಎಂದು ದೂರಿದ್ದರು. ಬಂಗಾಳ ಒಂದು ಶಾಂತಿಪ್ರಿಯ ರಾಜ್ಯ. ಚುನಾವಣೆ ವೇಳೆ ಕೊಂಚ ಇದರ ತಾಪ ಇತ್ತು. ಬಿಜೆಪಿ ಬಹಳಷ್ಟು ಹಿಂಸೆ ನೀಡಿತ್ತುಯ. ಸಿಎಪಿಎಫ್ ಕೂಡ ಹೀಗೇ ಮಾಡಿತು.
ಆದರೆ ನಾನು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಹಿಂಸಾಚಾರದಲ್ಲಿ ತೊಡಗಬಾರದು ಎಂದು ಜನರಿಗೆ ಮನವಿ ಮಾಡುತ್ತೇನೆ. ಯಾವುದೇ ವಿವಾದ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಿ. ಪೊಲೀಸರು ಕಾನೂನು ಸುವ್ಯವಸ್ಥೆ ನಿರ್ವಹಿಸಬೇಕಾಗುತ್ತದೆ ಎಂದಿದ್ದರು.
ತನಿಖೆ ನಡೆಸಲು ಸಮಿತಿ ರಚನೆ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ನಾಲ್ವರು ಸದಸ್ಯರ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯ ರಚಿಸಿದೆ. ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದರ ಜೊತೆಗೆ ಸ್ಥಳೀಯ ಪರಿಸ್ಥಿತಿಯ ಬಗ್ಗೆ ಕೂಡ ಈ ಸಮಿತಿ ವರದಿ ನೀಡಲಿದೆ.
ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದಲ್ಲಿ ಈ ಸಮಿತಿ ಕಾರ್ಯನಿರ್ವಹಣೆ ಮಾಡಲಿದ್ದು, ಸಮಿತಿಯ ಸದಸ್ಯರು ಈಗಾಗಲೇ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಮೇ.05 ರಂದು ಗೃಹ ಸಚಿವಾಲಯ ರಾಜ್ಯಕ್ಕೆ ವರದಿ ಸಲ್ಲಿಸುವಂತೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ.
ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದರೆ ಅದನ್ನು ಸಚಿವಾಲಯ ಗಂಭೀರವಾಗಿ ಪರಿಗಣಿಸುವುದಾಗಿ ಎಚ್ಚರಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವನೋತ್ತರ ಗಲಭೆಯಲ್ಲಿ ಕನಿಷ್ಟ 6 ಮಂದಿ ಸಾವನ್ನಪ್ಪಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಟಿಎಂಸಿ ಬೆಂಬಲಿತ ಗೂಂಡಾಗಳು ಹತ್ಯೆ ಮಾಡುತ್ತಿದ್ದಾರೆಂದು ಬಿಜೆಪಿ ಆರೋಪಿಸಿದೆ. 14 ಮಂದಿ ಬಿಜೆಪಿ ಕಾರ್ಯಕರ್ತರನ್ನು ಈ ವರೆಗೂ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.












Click it and Unblock the Notifications