ದೆಹಲಿಯಲ್ಲಿ ಕೈಮೀರಿದ ಕೊರೊನಾ; ಎಲ್ಲಾ ಸಿಎಂಗಳಿಗೆ ಕೇಜ್ರಿವಾಲ್ ಮನವಿ
ನವದೆಹಲಿ, ಏಪ್ರಿಲ್ 24: ಕೊರೊನಾ ಎರಡನೇ ಅಲೆಯಲ್ಲಿ ದೆಹಲಿಯಲ್ಲಿ ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜೊತೆಗೆ ರಾಜ್ಯದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ, ಹಾಸಿಗೆಗಳ ಕೊರತೆಯೂ ತೀವ್ರವಾಗುತ್ತಿದೆ. ಹೀಗಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೂ ರಾಜಧಾನಿಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ.
ನಿಮ್ಮಲ್ಲಿ ಹೆಚ್ಚಿನ ವೈದ್ಯಕೀಯ ಆಮ್ಲಜನಕ ಲಭ್ಯವಿದ್ದರೆ ದೆಹಲಿಗೆ ನೀಡಿ ಈ ಬಿಕ್ಕಟ್ಟನ್ನು ಪರಿಹರಿಸಲು ನೆರವಾಗಿ ಎಂದು ಮನವಿ ಮಾಡಿದ್ದಾರೆ.
"ನಾನು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ತಮ್ಮಲ್ಲಿ ಹೆಚ್ಚುವರಿ ವೈದ್ಯಕೀಯ ಆಮ್ಲಜನಕ ಲಭ್ಯವಿದ್ದರೆ ದೆಹಲಿಗೆ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಆಮ್ಲಜನಕ ನೀಡುವಲ್ಲಿ ಕೇಂದ್ರ ಸರ್ಕಾರ ನಮಗೆ ತುಂಬಾ ಸಹಾಯ ಮಾಡುತ್ತಿದೆ. ಇದಾಗಿಯೂ ಕೊರೊನಾ ಪರಿಸ್ಥಿತಿ ದೆಹಲಿಯಲ್ಲಿ ಗಂಭೀರವಾಗಿದೆ. ಈಗಿರುವ ಸೌಲಭ್ಯಗಳು ಸಾಲದಾಗಿವೆ" ಎಂದು ಟ್ವೀಟ್ ಮಾಡಿದ್ದಾರೆ.
ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾದ ಕೇಜ್ರಿವಾಲ್ : ಪ್ರಧಾನಿ ಮೋದಿಗೆ ಕೈಮುಗಿದು ಮನವಿ
ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ 20 ಸಾವಿರದಷ್ಟು ದಿನನಿತ್ಯದ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ 24,331 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿ 348 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೆಹಲಿ ಆಸ್ಪತ್ರೆಗಳಲ್ಲಿ ತೀವ್ರತರವಾದ ಆಮ್ಲಜನಕ ಕೊರತೆ ಎದುರಾಗಿದೆ.
ಶನಿವಾರ ಆಮ್ಲಜನಕ ಕೊರತೆ ಕಾರಣವಾಗಿ ನಗರದ ಆಸ್ಪತ್ರೆಯೊಂದರಲ್ಲಿ 25 ಮಂದಿ ಸಾವನ್ನಪ್ಪಿರುವ ಸಂಗತಿ ನಡೆದಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.