ಹಿಮಲಿಂಗ ದರ್ಶನಕ್ಕೆ ಹೊರಟವರ ರಕ್ಷಣೆಗೆ 'ಆಪರೇಷನ್ ಶಿವ'
ನವದೆಹಲಿ, ಜು. 02 : 'ಆಪರೇಷನ್ ಶಿವ' ಎಂಬ ಹೆಸರಿನಲ್ಲಿ ಅಮರನಾಥ ಯಾತ್ರೆ ಕೈಗೊಂಡಿರುವ ಭಕ್ತಾದಿಗಳ ರಕ್ಷಣೆಗಾಗಿ 7,500 ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಒನ್ ಇಂಡಿಯಾದೊಂದಿಗೆ ಮಾತನಾಡಿದ ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳು ಉಗ್ರವಾದಿ ಸಂಘಟನೆ ಆಕ್ರಮಣದ ಗುಮಾನಿ ಇರುವುದರಿಂದ ಯಾತ್ರಾ ಸ್ಥಳದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಉಗ್ರವಾದಿ ಸಂಘಟನೆ ಹಿಜ್ ಬುಲ್ ಮುಜಾಹಿದ್ದೀನ್ ಆಕ್ರಮಣಕಾರಿ ಧೋರಣೆ ತಾಳಬಹುದೆಂದು ಗುಪ್ತಚಾರ ಇಲಾಖೆ ವರದಿ ಸಲ್ಲಿಸಿತ್ತು. ಅಲ್ಲದೇ ಕಳೆದ ಎರಡು ತಿಂಗಳಿನಿಂದ ಇದು ಆಕ್ರಮಣಕ್ಕೆ ತಯಾರಿ ನಡೆಸುತ್ತಿದ್ದು, ಮೊದಲು ಟೆಲಿಕಾಂ ಸೆಕ್ಟರ್ ಮೇಲೆ ದೃಷ್ಠಿ ನೆಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳು ಹೇಳಿದ್ದಾರೆ [ಅಮರನಾಥ ಯಾತ್ರಿಕರಿಗೆ ಭಾರತ ಸೈನ್ಯದ ರಕ್ಷಣೆ]
ಉಗ್ರವಾದಿ ಸಂಘಟನೆ ಹಿಜ್ ಬುಲ್ ಮುಜಾಹಿದ್ದೀನ್ ಆಕ್ರಮಣ ಸಾಧನಗಳ ನಿರ್ವಹಣೆಗೆ ಪಾಕಿಸ್ತಾನ ನಿರ್ವಾಹಕರೊಂದಿಗೆ ಸಂಪರ್ಕ ಕಲ್ಪಿಸಿಕೊಂಡಿದ್ದು, ಮೊದಲು ಎಲ್ಲಾ ರಕ್ಷಣಾ ಸಂಸ್ಥೆಗಳು ಅವಲಂಬಿಸಿರುವ ಟೆಲಿಕಾಂ ಟವರ್ಸ್ ಮೇಲೆ ಆಕ್ರಮಣ ಮಾಡುವ ಯೋಜನೆ ರೂಪಿಸಿದೆ. ಬಳಿಕ ಅಮರನಾಥ ಯಾತ್ರೆ ಕೈಗೊಂಡಿರುವ ಭಕ್ತಾಧಿಗಳ ನಡುವೆ ಸಂಪರ್ಕ ಕಡಿತಗೊಳಿಸಿ ಅವರಿಗೆ ತೊಂದರೆ ನೀಡುವುದರ ಮೂಲಕ ತನ್ನ ಕಾರ್ಯ ಸಾಧನೆಗೆ ಮುಂದಾಗಿದೆ.
ಯಾತ್ರಾರ್ಥಿಗಳು ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಯಾರಾದರೂ ಆಕ್ರಮಣ ಮಾಡಲು ಮುಂದಾದಲ್ಲಿ ಅಲರ್ಟ್ಸ್ ಟ್ಯೂನ್ ಬಂದು ತಲುಪುದರಿಂದ ಯಾವುದೇ ರೀತಿ ತೊಂದರೆ ಸಂಭವಿಸಲಾರದು. ಇದರಲ್ಲಿ ಉಗ್ರವಾದಿಗಳು ಜಯಗಳಿಸಲು ಸಾಧ್ಯವಿಲ್ಲ ಎಂದು ಸೇನಾ ಅಧಿಕಾರಿಗಳು ಭರವಸೆ ನೀಡಿದ್ದಾರೆ.