Get Updates
Get notified of breaking news, exclusive insights, and must-see stories!

ಕಾಂಗ್ರೆಸ್ ವಿರುದ್ಧ ಮುಸ್ಲಿಂ ಮಹಿಳೆಯರು ಹೋರಾಡಿ: ಅನಂತ್ ಕುಮಾರ್

ನವದೆಹಲಿ, ಆಗಸ್ಟ್ 11 : ಮುಸ್ಲಿಂ ಮಹಿಳೆಯರ ಹಿತರಕ್ಷಣೆಗೆ ತಂದಿರುವ ಮಹತ್ವಪೂರ್ಣ ತ್ರಿವಳಿ ತಲಾಖ್ ಮಸೂದೆಗೆ ತಡೆಯೊಡ್ಡಿರುವ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ವಿರುದ್ದ ದೇಶದಾದ್ಯಂತ ಮುಸ್ಲಿಂ ಸಹೋದರಿಯರು, ಮಹಿಳಾ ಸಂಘಟನೆಗಳು ಹಾಗೂ ಸಾಮಾಜಿಕ ನ್ಯಾಯಪರ ಹೋರಾಟ ಸಂಘಟನೆಗಳು ಶಾಂತಿಯುತ ಆಂದೋಲನ ಕೈಗೊಳ್ಳಬೇಕಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.

ಮುಂಗಾರು ಅಧಿವೇಶನ ಮುಕ್ತಾಯಗೊಂಡ ನಂತರ ನವದೆಹಲಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 18 ವರ್ಷಗಳ ನಂತರ ಇಷ್ಟು ಫಲಪ್ರದವಾದ ಅಧಿವೇಶನ ನಡೆದಿದೆ ಎಂದರು.

ಲೋಕಸಭೆಯಲ್ಲಿ ಶೇ 118 ಹಾಗೂ ರಾಜ್ಯಸಭೆಯಲ್ಲಿ ಶೇ 68 ರಷ್ಟು ಉತ್ಪಾದಕತೆ ಕಂಡಿದ್ದೇವೆ. ಅಲ್ಲದೆ, ಅವಿಶ್ವಾಸ ಗೊತ್ತುವಳಿ ಎನ್ನುವ ದುಸ್ಸಾಹಸಕ್ಕೆ ಕೈ ಹಾಕಿದ್ದ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳಿಗೆ ಆಘಾತವಾಗುವಂತಹ ಉತ್ತರವನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ನೀಡಿದೆ. ಈ ಮೂಲಕ ಮಿತ್ರ ಪಕ್ಷಗಳು ಬಿಜೆಪಿ ಜತೆಗಿವೆ ಎಂದು ಸಾಬೀತು ಮಾಡಿದ್ದೇವೆ. ಹಾಗೆಯೇ, ಇದು ರಾಜ್ಯಸಭಾ ಚುನಾವಣೆಯಲ್ಲಿಯೂ ಸಾಬೀತಾಗಿದೆ ಎಂದರು.

ananth kumar called for movement for triple talaq

ಓಬಿಸಿ ಆಯೋಗಕ್ಕೆ ಸಾಂವಿಧಾನಕ ಸ್ಥಾನಮಾನ ನೀಡುವ ಮಸೂದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ಮಸೂದೆಗಳು ಈ ಮುಂಗಾರು ಅಧಿವೇಶನದಲ್ಲಿ ಅಂಗೀಕಾರಗೊಂಡಿವೆ. ಇಂತಹ ಮಹತ್ವದ ಓಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಐತಿಹಾಸಿಕ ನಿರ್ಣಯವನ್ನು ಕಾಂಗ್ರೆಸ್ ಸರಕಾರ 1955 ರಿಂದಲೂ ಮುಂದೂಡುತ್ತಾ ಬಂದಿತ್ತು.

2 ವರ್ಷಗಳ ಹಿಂದೆ ಬಿಜೆಪಿ ಈ ಮಸೂದೆಯನ್ನು ಪರಿಚಯಿಸಿತ್ತು. ಕೆಲ ಮಾರ್ಪಾಡುಗಳೊಂದಿಗೆ ಮತ್ತೊಮ್ಮೆ ಈ ಬಾರಿ ಮಸೂದೆಯನ್ನು ಈ ಅಧಿವೇಶನದಲ್ಲಿ ಪರಿಚಯಿಸಲಾಗಿತ್ತು. ಈ ಅಧಿವೇಶನದಲ್ಲಿ ಎರಡೂ ಸದನದಲ್ಲೂ ಬಹುಮತದಿಂದ ಅಂಗೀಕಾರಗೊಂಡಿದೆ ಎಂದರು.

ದಲಿತ ಹಕ್ಕುಗಳ ರಕ್ಷಣೆಗೆ ಒತ್ತು ನೀಡುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತಾಸಕ್ತಿ ಕಾಪಾಡುವ ಐತಿಹಾಸಿಕ ಮಸೂದೆ ಅಂಗೀಕಾರಗೊಂಡಿದೆ. ದಲಿತ ಹಕ್ಕಗಳನ್ನು ಮತ್ತೊಮ್ಮೆ ಸಶಕ್ತಗೊಳಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ಹೇಳಿದರು.

ಸಾಮಾಜಿಕ ನ್ಯಾಯದ ಈ ಮಸೂದೆಗಳ ಜೊತೆಗೆ ಇನ್ನೊಂದು ಮಹತ್ವಪೂರ್ಣ ತ್ರಿವಳಿ ತಲಾಖ್ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಮಂಡಿಸಲಾಗಿತ್ತು. ಆದರೆ, ಅದಕ್ಕೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಬಿಡುತ್ತಿಲ್ಲ. ಕಳೆದೊಂದು ವರ್ಷದಿಂದ ರಾಜ್ಯಸಭೆಯಲ್ಲೇ ಈ ಮಸೂದೆ ಉಳಿದುಕೊಂಡಿದೆ.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಷಾಭಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು. ಆಗಲೂ ಮುಸ್ಲಿಂ ಮಹಿಳೆಯರ ವಿರೋಧಿ ನಿಲುವನ್ನು ಕಾಂಗ್ರೆಸ್ ಸರಕಾರ ಕೈಗೊಂಡಿತ್ತು. ಅದೇ ಇತಿಹಾಸ ಮತ್ತೆ ಮರುಕಳಿಸಿದೆ. ಮುಸ್ಲಿಂ ಮಹಿಳೆಯರ ವೈವಾಹಿಕ ಜೀವನವನ್ನು ಸುಧಾರಿಸುವ ಈ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಈ ಮೂಲಕ ಸೋನಿಯಾ ಹಾಗೂ ರಾಹುಲ್ ಗಾಂಧಿಯವರು ಮುಸ್ಲಿಂ ಮಹಿಳೆಯರಿಗೆ ವಿಶ್ವಾಸಘಾತುಕತನ ಎಸಗಿದ್ದಾರೆ ಎಂದು ಹೇಳಿದರು.

ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಎನ್ನುವ ಪದ್ಧತಿಯಿಂದಾಗಿ ಭಯದ ವಾತಾವರಣದಲ್ಲಿ ಎಲ್ಲ ನೋವುಗಳನ್ನು ಸಹಿಸಿಕೊಂಡು ಬದುಕುತ್ತಿದ್ದಾರೆ. ಈ ನೋವುಗಳಿಗೆ ಮುಕ್ತಿ ನೀಡುವ ಮೂಲಕ ಮುಸ್ಲಿಂ ಸಹೋದರಿಯರಿಗೆ ಅನುಕೂಲ ಮಾಡಿಕೊಡಲು ನರೇಂದ್ರ ಮೋದಿ ನೇತೃತ್ವದ ಸರಕಾರ ಈ ಮಸೂದೆಯನ್ನು ಪರಿಚಯಿಸಿತ್ತು ಎಂದರು.

ಲೋಕಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಿರುವ ಕಾಂಗ್ರೆಸ್ ಅಧ್ಯಯನದ ನೆಪದಲ್ಲಿ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದೆ. ದೇಶದ ಎಲ್ಲ ಮಹಿಳಾ ಸಂಘಟನೆಗಳು, ಸಾಮಾಜಿಕ ನ್ಯಾಯಕ್ಕಾಗಿ ದನಿಯೆತ್ತುವವರು ಹಾಗೂ ಕೋಟ್ಯಂತರ ಮುಸ್ಲಿಂ ಮಹಿಳೆಯರು ಕಾಂಗ್ರೆಸ್ ಪಕ್ಷದ ವಿರುದ್ದ ದೇಶದಾದ್ಯಂತ ಶಾಂತಿಯುತ ಆಂದೋಲನ ಹುಟ್ಟು ಹಾಕಬೇಕು ಎಂದು ಕರೆ ನೀಡಿದರು.

ಈ ಮೂಲಕ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಮೇಲೆ ನೈತಿಕ ಒತ್ತಡ ಹೇರುವ ಅಗತ್ಯವಿದೆ. ತ್ರಿವಳಿ ತಲಾಖ್ ಬಗ್ಗೆ ನಿಮ್ಮ ಅಡಚಣೆಗೆ ಕಾರಣಗಳೇನು ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕಾಗಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+