ದೈಹಿಕ ಹಲ್ಲೆ ಇಲ್ಲದಿದ್ದರೂ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ : ಅಭಿನಂದನ್
ನವದೆಹಲಿ, ಮಾರ್ಚ್ 02 : ಪಾಕಿಸ್ತಾನದ ಸೇನೆಯ ವಶದಲ್ಲಿದ್ದಾಗ ಅಲ್ಲಿನ ಅಧಿಕಾರಿಗಳು ಯಾವುದೇ ದೈಹಿಕ ಹಲ್ಲೆ ನಡೆಸದಿದ್ದರೂ, ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೇಳಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಎರಡು ದಿನಗಳ ನಂತರ ಪಾಕಿಸ್ತಾನದ ಬಂಧನದಿಂದ ಮುಕ್ತರಾಗಿ ಭಾರತಕ್ಕೆ ಶುಕ್ರವಾರ ಮರಳಿದ ಅಭಿನಂದನ್ ಅವರನ್ನು ಡಿಬ್ರೀಫಿಂಗ್ ಜೊತೆಗೆ ಶನಿವಾರ ಹಲವಾರು ದೈಹಿಕ ಮತ್ತು ಮಾನಸಿಕ ಪರೀಕ್ಷೆಗೆ ಗುರಿಪಡಿಸಲಾಗಿದೆ. ಡಿಬ್ರೀಫಿಂಗ್ ನಲ್ಲಿ ಅಲ್ಲಿ ಅವರು ಎದುರಿಸಿದ ಪ್ರತಿಯೊಂದು ಘಟನೆಯ ವಿವರಗಳನ್ನು ನೀಡಬೇಕಾಗುತ್ತದೆ.
ಭಾರತದ ಸೈನಿಕರನ್ನು ಅಥವಾ ಕೈದಿಗಳನ್ನು ಪಾಕಿಸ್ತಾನ ಹೇಗೆ ನಡೆಸಿಕೊಳ್ಳುತ್ತದೆ ಎಂದು ತಿಳಿದಿರುವಾಗ, ಪಾಕ್ ಸೈನಿಕರು ತಮ್ಮನ್ನು ಜಂಟ್ಲ್ಮನ್ರಂತೆ ನಡೆಸಿಕೊಂಡರು ಎಂದು ಅಭಿನಂದನ್ ಅವರು ವಿಡಿಯೋ ವೊಂದರಲ್ಲಿ ಹೇಳಿದಾಗಲೇ ಅನುಮಾನ ವ್ಯಕ್ತಪಡಿಸಲಾಗಿತ್ತು. ಏನೇ ಆಗಲಿ, ಅಭಿನಂದನ್ ಅವರು ಕ್ಷೇಮವಾಗಿ ಭಾರತಕ್ಕೆ ವಾಪಸ್ ಬಂದರೆ ಸಾಕು ಎಂದು ಸರಕಾರ ಕೂಡ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ, ಇದೀಗ ಒಂದೊಂದೇ ಸತ್ಯಗಳು ಹೊರಬೀಳಲು ಆರಂಭಿಸಿವೆ.
ಈ ವಿಷಯ ತಿಳಿಯುತ್ತಿದ್ದಂತೆ, ಭಾರತದ ಅಭಿಮಾನಿಗಳು ಭಾರೀ ಆಕ್ರೋಶ ಹೊರಹಾಕಲು ಆರಂಭಿಸಿದ್ದಾರೆ. ಇನ್ನಷ್ಟು ಸಂಗತಿಗಳು ಹೊರಬಿದ್ದರೂ ಅಚ್ಚರಿಯಿಲ್ಲ.
ನಿರ್ಮಲಾ ಸೀತಾರಾಮನ್ ಭೇಟಿ
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ದೆಹಲಿಯಲ್ಲಿರುವ ಏರ್ ಫೋರ್ಸ್ ಸೆಂಟ್ರಲ್ ಮೆಡಿಕಲ್ ಆಸ್ಪತ್ರೆಯಲ್ಲಿ ಶನಿವಾರ ಭೇಟಿ ಮಾಡಿದರು.
ಪಾಕಿಸ್ತಾನದಿಂದ ಬಂಧಿತರಾಗಿದ್ದ 35 ವರ್ಷದ ಅಭಿನಂದನ್ ವರ್ಧಮಾನ್ ಅವರು, ಭಾರತಕ್ಕೆ ಶುಕ್ರವಾರ ರಾತ್ರಿ ಮರಳಿ ಬಂದನಂತರ, ದೈಹಿಕ ಮತ್ತು ಮಾನಸಿಕ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇದಕ್ಕೂ ಮೊದಲು ಅವರು ಭಾರತೀಯ ವಾಯು ಸೇನೆಯ ಚೀಫ್ ಬಿಎಸ್ ಧನೋವಾ ಅವರನ್ನು ಭೇಟಿ ಮಾಡಿ, ಪಾಕಿಸ್ತಾನದಲ್ಲಿ ಬಂದಿಯಾಗಿದ್ದಾಗ ನಡೆದ ಘಟನಾವಳಿಗಳ ಬಗ್ಗೆ ವಿವರಿಸಿದರು. ಕುಟುಂಬ ಸದಸ್ಯರು ಕೂಡ ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು.
ವಾಪಸ್ ಬಂದ ಅಭಿಯನ್ನು ಎಂಥ ಪರೀಕ್ಷೆಗೆ ಒಳಪಡಿಸಲಾಗುತ್ತದೆ?
ಎಲ್ಲ ಮಾಹಿತಿ ನೀಡಬೇಕಾಗಿರುವ ಡಿಬ್ರೀಫಿಂಗ್
ಅಭಿನಂದನ್ ಅವರು ಪಾಕಿಸ್ತಾನದಲ್ಲಿ ಬಂಧಿತರಾಗಿ ವಾಪಸ್ ಆಗಿರುವುದರಿಂದ, ಭಾರತೀಯ ವಾಯು ಸೇನೆಯ ರೀತಿ ರಿವಾಜಿನಂತೆ ಅವರು ಹಲವಾರು ಕಡ್ಡಾಯ ಪರೀಕ್ಷೆಗಳಿಗೆ ಒಳಪಡಬೇಕಾಗಿದೆ. ಶನಿವಾರ ಡಿಬ್ರೀಫಿಂಗ್ ಕೂಡ ಆಗಲಿದ್ದು, ಪಾಕಿಸ್ತಾನದಲ್ಲಿ ನಡೆದ ಎಲ್ಲ ಘಟನೆ, ವಿಚಾರಣೆ, ಅವರು ನೀಡಿದ ಹೇಳಿಕೆ, ಹಲ್ಲೆ, ನೀಡಲಾಗಿರುವ ಮಾಹಿತಿ, ಪಡೆದುಕೊಳ್ಳಲಾಗಿರುವ ಮಾಹಿತಿಗಳ ಬಗ್ಗೆ ವಿವರ ಕೊಡಬೇಕಾಗಿದೆ.
ಫಾರ್ಮ್ಯಾಲಿಟಿಯಿಂದಾಗಿ ಬಿಡುಗಡೆಗೆ ತಡ
ಅಟ್ಟಾರಿ-ವಾಘಾ ಬಾರ್ಡರ್ ನಲ್ಲಿ ಶುಕ್ರವಾರ ರಾತ್ರಿ 9.21ರ ಸುಮಾರಿಗೆ ಅಭಿನಂದನ್ ಅವರು ಭಾರತದೊಳಗೆ ಪ್ರವೇಶಿಸಿದ ನಂತರ ಅವರನ್ನು ನೇರವಾಗಿ ದೈಹಿಕ ಮತ್ತು ಮಾನಸಿಕ ಪರೀಕ್ಷೆಗೆಂದು ದೆಹಲಿಗೆ ಕರೆದೊಯ್ಯಲಾಗಿದೆ. ಸಹಸ್ರಾರು ಭಾರತೀಯರು ಅವರನ್ನು ಮಧ್ಯಾಹ್ನ 12 ಗಂಟೆಯಿಂದಲೇ ಅವರ ಬಿಡುಗಡೆಗಾಗಿ ಕಾಯುತ್ತಿದ್ದರೂ, ಪಾಕಿಸ್ತಾನದ ಇಲ್ಲಸಲ್ಲದ 'ಫಾರ್ಮ್ಯಾಲಿಟಿ'ಯಿಂದಾಗಿ ಅಭಿನಂದನ್ ಅವರ ಬಿಡುಗಡೆ ತಡವಾಗಿತ್ತು.
ಅಭಿನಂದನ್ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಇದು...
ಕ್ಷಮಿಸಿ, ಉತ್ತರಿಸುವುದಿಲ್ಲ
ಸುಮಾರು ಎರಡು ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ಅವರನ್ನು ಪಾಕಿಸ್ತಾನದ ಸೇನಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಮಾಡಲಾಗಿದ್ದ ವಿಡಿಯೋದಲ್ಲಿ ಅವರು ಯಾವುದೇ ಮುಖ್ಯ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಕೆಲವು ಕ್ಲಿಷ್ಟಕರ ಪ್ರಶ್ನೆಗಳಿಗೆ, 'ಕ್ಷಮಿಸಿ, ಇದಕ್ಕೆ ಉತ್ತರ ನೀಡಲಾಗುವುದಿಲ್ಲ' ಎಂದು ಮುಕ್ತವಾಗಿಯೇ ಉತ್ತರ ನೀಡಿದ್ದರು. ತಮ್ಮನ್ನು ಪಾಕಿಸ್ತಾನದ ಅಧಿಕಾರಿಗಳು ಚೆನ್ನಾಗಿಯೇ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಭಿನಂದನ್ ಹೇಳಿಕೆ ನೀಡಿದ್ದರು.
ಬೇಷರತ್ ಬಿಡುಗಡೆಗೆ ಒತ್ತಡ
ಅವರನ್ನು ಬೇಷರತ್ ಬಿಡುಗಡೆ ಮಾಡಬೇಕೆಂದು ಭಾರತ ರಾಜತಾಂತ್ರಿಕ ಮಟ್ಟದಲ್ಲಿ ಒತ್ತಡ ಹೇರಿತ್ತು. ಕಾಶ್ಮೀರ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದಂತೆ ಮಾತುಕತೆಗೆ ಸಿದ್ಧವಾದರೆ ಬಿಡುಗಡೆ ಮಾಡಲು ಸಿದ್ಧ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ಭಯೋತ್ಪಾದನೆಯನ್ನು ನಿಗ್ರಹಿಸದೆ ಮಾತುಕತೆ ಸಾಧ್ಯವೇ ಇಲ್ಲ ಎಂಬ ನಿಲುವನ್ನು ತಳೆದಿರುವ ಭಾರತ ಪ್ರತಿಕ್ರಿಯೆ ತೋರಿಸದಿದ್ದರಿಂದ ಮತ್ತು ವಿಶ್ವದೆಲ್ಲೆಡೆಯಿಂದ ಪಾಕಿಸ್ತಾನಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಅಭಿನಂದನ್ ಅವರನ್ನು ಬೇಷರತ್ ಆಗಿ ಬಿಡುಗಡೆ ಮಾಡಲೇಬೇಕಾಯಿತು.
ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ
ನಿಲ್ಲದ ನುಸುಳುವಿಕೆ, ದಾಳಿ
ಭಾರತಕ್ಕೆ ಕಳಿಸುವ ಮುನ್ನ ಸಾಕಷ್ಟು ನಾಟಕ ಮಾಡಿದ್ದ ಪಾಕಿಸ್ತಾನ, ಅಭಿನಂದನ್ ಅವರಿಂದ ಒಂದು ಬಲವಂತವಾಗಿ ಹೇಳಿಕೆಯನ್ನೂ ಪಡೆದು, ಆ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿತ್ತು. ನಂತರ, ಅದಕ್ಕೂ ಭಾರೀ ಪ್ರತಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಡಿಲೀಟ್ ಮಾಡಿದೆ. ಪಾಕಿಸ್ತಾನ ಶಾಂತಿ ಮಾತುಕತೆಯ ಬಗ್ಗೆ ಮಾತಾಡುತ್ತಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಉಗ್ರರ ಉಪಟಳ ಇನ್ನೂ ನಿಂತಿಲ್ಲ. ಭಾರತದೊಳಗೆ ನುಸುಳಿ ಹಾವಳಿ ಎಬ್ಬಿಸುತ್ತಲೇ ಇದೆ. ಇದಕ್ಕೆ ಪರಿಹಾರವೇನು?