ಕಡಿಮೆ ದರದಲ್ಲಿ ವಿದ್ಯುತ್ : ಆಮ್ ಆದ್ಮಿ ಪ್ರಣಾಳಿಕೆ
ನವದೆಹಲಿ,ನ. 20 : ದೆಹಲಿ ವಿಧಾನಸಭೆ ಚುನಾವಣೆಗಾಗಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬುಧವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅಧಿಕಾರ ವಿಕೇಂದ್ರೀಕರಣ, ಕಡಿಮೆ ದರದಲ್ಲಿ ವಿದ್ಯುತ್, ದೆಹಲಿ ಲೋಕಪಾಲ್ ಮಸೂದೆ ಸೇರಿದಂತೆ ಹಲವಾರು ಭರವಸೆಗಳನ್ನು ಜನರಿಗೆ ನೀಡಿದೆ.
ನವೆದೆಹಲಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ನಾಯಕ ಯೋಗೇಂದ್ರ ಯಾದವ್, ಡಿಸೆಂಬರ್ 4ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪಕ್ಷ ಅಧಿಕಾರ ವಿಕೇಂದ್ರಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ, ಪಕ್ಷ ಅಧಿಕಾರಕ್ಕೆ ಬಂದರೆ, 'ಮೊಹಲ್ಲಾ ಸಭಾ'ಗಳನ್ನು ರಚಿಸುವ ಮೂಲಕ ವಿಕೇಂದ್ರಿಕರಣಕ್ಕೆ ಒತ್ತು ನೀಡಲಾಗುವುದು ಎಂದರು.

ಈ 'ಮೊಹಲ್ಲಾ ಸಭಾ'ಗಳಿಗೆ ಪ್ರತಿವರ್ಷ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುವುದು. ಇದರಲ್ಲಿ ಶಾಸಕರ ಮತ್ತು ಅಧಿಕಾರಗಳ ಹಸ್ತಕ್ಷೇಪವಿರುವುದಿಲ್ಲ. ಇದರಿಂದ ಜನರು ತಮ್ಮ ಪ್ರದೇಶಕ್ಕೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ನವ ದೆಹಲಿಯ ವಿದ್ಯುತ್ ವ್ಯವಸ್ಥೆ ಸುಧಾರಣೆಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದ್ದು, ನಗರದ ವಿದ್ಯುತ್ ವ್ಯವಸ್ಥೆಯನ್ನೇ ಬದಲಿಸುತ್ತೇವೆ ಮತ್ತು ಶೇ.50ರಷ್ಟು ರಿಯಾಯ್ತಿ ದರದಲ್ಲಿ ವಿದ್ಯುತ್ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿನ ಅಂಶಗಳನ್ನು ತಿಳಿಸಿದರು.
ಕಾನೂನು ಮತ್ತು ಸುವ್ಯವಸ್ಥೆಗೆ ಬಗ್ಗೆ ಮಾತನಾಡಿದ ಅವರು, ಎಎಪಿ ಅಧಿಕಾರಕ್ಕೆ ಬಂದರೆ, ಸದ್ಯ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸ್ ಅನ್ನು ದೆಹಲಿ ಸರ್ಕಾರದ ನಿಯಂತ್ರಣಕ್ಕೆ ತರಲಾಗುವುದು ಎಂದರು.












Click it and Unblock the Notifications