ಮೋದಿ ಸರಕಾರಕ್ಕೆ ಕೇಜ್ರಿವಾಲ್ ರವಾನಿಸಿದ ಖಡಕ್ ಸಂದೇಶ
ನವದೆಹಲಿ, ಆಗಸ್ಟ್ 11: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜನಾದೇಶ ಪಡೆದ ನಂತರ ಒಂದಲ್ಲಾ ಒಂದು ಕಾರಣಗಳಿಂದ ಸುದ್ದಿಯಲ್ಲಿರುವ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರಕಾರ ಕೇಂದ್ರ ಸರಕಾರಕ್ಕೆ ಖಡಕ್ ಸಂದೇಶ ರವಾನಿಸಿದೆ.
ತಿಂಗಳಿಗೊಮ್ಮೆ ನಮ್ಮ ಶಾಸಕರ ವಿರುದ್ದ ಕೇಸ್ ದಾಖಲಿಸುವುದು ಕೇಂದ್ರ ಸರಕಾರಕ್ಕೆ ಕಾಯಕವಾಗಿದೆ. ಇದಕ್ಕೆಲ್ಲಾ ನಾವು ಕ್ಯಾರ್ ಮಾಡುವವರಲ್ಲ ಎನ್ನುವುದನ್ನು ಕೇಂದ್ರ ಸರಕಾರ ಅರಿತುಕೊಳ್ಳಲಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ರಾಜಧಾನಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಜ್ರಿವಾಲ್, ದೆಹಲಿಯಲ್ಲಿನ ಪೊಲೀಸ್ ವರಿಷ್ಠ ಬಿ ಎಸ್ ಬಸ್ಸಿ ಅವರು ಬಿಜೆಪಿಯ ಹಿರಿಯ ಮುಖಂಡರು ಎಂದು ಲೇವಡಿ ಮಾಡಿದ್ದಾರೆ. (ಅಲಕಾ ವಿರುದ್ದ FIR)
ಕೇಂದ್ರ ಸರಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್, ನಮ್ಮ ಶಾಸಕರನ್ನು ಬಂಧಿಸಲೆಂದೇ ಪೊಲೀಸರನ್ನು ಕೇಂದ್ರ ಗೃಹ ಸಚಿವಾಲಯ ನೇಮಿಸಿದೆ. ಹಾಗಾಗಿ, ಪೊಲೀಸರಿಗೆ ನಗರದ ಮಹಿಳೆಯರಿಗೆ ರಕ್ಷಣೆ ನೀಡಲು ಸಮಯವಿಲ್ಲ ಎಂದಿದ್ದಾರೆ.
ನಮ್ಮ ಪಕ್ಷದ ಎಲ್ಲ 67 ಶಾಸಕರು ತಿಹಾರ್ ಜೈಲಿನಿಂದ ಕೆಲಸ ಮಾಡಲು ಸಿದ್ದರಿದ್ದಾರೆ ಎಂದು ಕೇಜ್ರಿವಾಲ್, ಕೇಂದ್ರ ಸರಕಾರಕ್ಕೆ ಸಂದೇಶ ರವಾನಿಸಿದ್ದಾರೆ. ಮುಂದೆ ಓದಿ..

ಅಲಕಾ ಲಂಬಾ ಕೇಸ್
ದೆಹಲಿಯ ಚಾಂದನಿ ಚೌಕ್ ಶಾಸಕಿ ಅಲಕಾ ಲಂಬಾ ಮತ್ತು ಆಕೆಯ ಹಿಂಬಾಲಕರು ಅಂಗಡಿಯೊಂದರ ಮೇಲೆ ದಾಳಿ ನಡೆಸಿದ್ದಕ್ಕೆ ಕೇಸು ದಾಖಲಾಗುತ್ತದೆ. ಈ ಸಿಹಿ ತಿಂಡಿ ಮಾರಾಟದ ಅಂಗಡಿ ಬಿಜೆಪಿ ಶಾಸಕ ಓ ಪಿ ಶರ್ಮಾ ಒಡೆತನದ್ದು - ಆಪ್ ಮುಖಂಡ ಅಶುತೋಶ್.

ಶರ್ಮಾ ಅವರ ತಂಟೆಗೆ ಹೋಗದ ಪೊಲೀಸರು
ದೆಹಲಿ ಪೊಲೀಸರು ಶರ್ಮಾ ಅವರನ್ನು ಈ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿಲ್ಲ. ದೆಹಲಿ ಪೊಲೀಸ್ ಮುಖ್ಯಸ್ಥರು ಬಿಜೆಪಿಯ ವಕ್ತಾರರು ಆಗುವುದು ಲೇಸು ಎಂದು ಆಪ್ ಮುಖಂಡ ಅಶುತೋಶ್ ಕಿಡಿಕಾರಿದ್ದಾರೆ.

ತಿಹಾರ್ ನಿಂದ ಆಡಳಿತ ನಡೆಸುತ್ತೇವೆ
ನಮ್ಮ ಎಷ್ಟಾದರೂ ಶಾಸಕರನ್ನು ಜೈಲಿಗೆ ಅಟ್ಟಿ ನಾವು ತಿಹಾರ್ ಜೈಲಿನಿಂದಲೇ ಅಧಿಕಾರ ನಡೆಸಿ ತೋರಿಸುತ್ತೇವೆ. ಕೇಂದ್ರದ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರದ ವಿರುದ್ದ ನಮ್ಮ ಸರಕಾರ, ಮೋದಿ ಸರಕಾರದ ಯಾವುದೇ ನಿಯಂತ್ರಣಕ್ಕೆ ನಾವು ಬಗ್ಗುವುದಿಲ್ಲ ಎಂದು ಕೇಜ್ರಿವಾಲ್ ಕೇಂದ್ರ ಸರಕಾರಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.

ಲಂಬಾ ಮೇಲಿನ ಆರೋಪ ಏಕಪಕ್ಷೀಯ
ಆಪ್ ಶಾಸಕಿ ಅಲಕಾ ಲಂಬಾ ಮೇಲಿನ ಆರೋಪ ಏಕಪಕ್ಷೀಯವಾಗಿದ್ದು, ದೆಹಲಿ ಪೊಲೀಸರು ಕೇಂದ್ರ ಸರಕಾರದ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ. ಇದು ಮಹಿಳಾ ಶಾಸಕಿಗೆ ದೆಹಲಿ ಪೊಲೀಸರು ನೀಡುತ್ತಿರುವ ರಕ್ಷಣೆ ಎಂದು ಅಶುತೋಶ್, ಮೋದಿ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಲಂಬಾ ಡ್ರಗ್ ಅಡಿಕ್ಟ್
ಆಪ್ ಶಾಸಕಿ ಅಲಕಾ ಲಾಂಬಾ ಡ್ರಗ್ ಅಡಿಕ್ಟ್. ಈಕೆಯ ಮತ್ತು ದೆಹಲಿ ಸಿಎಂ ಪರವಾಗಿರುವ ಸಮಾಜಘಾತಕರು ಅಂಗಡಿ ಮುಗ್ಗಟ್ಟುಗಳನ್ನು ಒಡೆದುಹಾಕುತ್ತಾರೆ. ಇದೇ ರೀತಿ ಇವರ ದುಂಡಾವರ್ತನೆ ಮುಂದುವರಿದರೆ ಲಾಠಿ ಏಟಿನ ರುಚಿ ತೋರಿಸದೆ ಬೇರೆ ದಾರಿಯಿಲ್ಲ ಎಂದು ಬಿಜೆಪಿ ಶಾಸಕ ಓ ಪಿ ಶರ್ಮಾ, ಆಪ್ ಮೇಲೆ ಕಿಡಿಕಾರಿದ್ದಾರೆ.












Click it and Unblock the Notifications