ಪ್ರಮಾಣ ವಚನಕ್ಕೆ ಈ ಮೂರು ಘಟಾನುಘಟಿಗಳು ಗೈರು, ಯಾಕೆ?
ರಾಷ್ಟ್ರ ರಾಜಕಾರಣದಲ್ಲಿ ಒಂದು ಹಂತದಲ್ಲಿ ಮುಳುಗಿಯೇ ಹೋಗುತ್ತಿದ್ದ ಕಾಂಗ್ರೆಸ್ಸಿಗೆ ಈ ದಿನ ಅವಿಸ್ಮರಣೀಯ. ದೇಶದ ಬಹುಪಾಲು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಅಮೋಘ ದಿನಕ್ಕೆ ಕಾಂಗ್ರೆಸ್ಸಿನ ಘಟಾನುಘಟಿಗಳು ಸಾಕ್ಷಿಯಾಗಿಲಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ್ದರೆ, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಇಂದು ಮಧ್ಯಾಹ್ನ 1:30 ಕ್ಕೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಛತ್ತೀಸ್ ಗಢ ಮುಖ್ಯಮಂತ್ರಿಯಾಗಿ ಭುಪೇಶ್ ಭಾಗೆಲ್ ಅವರು ಅಪರಾಹ್ನ 4:30 ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮಹಾಘಟಬಂಧನದ ವಿರಾಟರೂಪ ದರ್ಶನ?
2019 ರ ಲೋಕಸಭಾ ಚುನಾವಣೆಗೂ ಮುನ್ನ 'ಮಹಾಘಟಬಂಧನದ ವಿರಾಟರೂಪ ದರ್ಶನ'ಕ್ಕೆ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ವೇದಿಕೆಯಾಗಲಿದೆ ಎನ್ನಲಾಗುತ್ತಿತ್ತು. ಅಂತೆಯೇ ಬಿಜೆಪಿ ವಿರೋಧಿ ಪಕ್ಷಗಳೆಲ್ಲ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂಬುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಈ ನಾಯಕರು ಗೈರಾಗುತ್ತಿರುವುದಕ್ಕೆ ಕಾರಣವೇನು?
ಮಮತಾ ಬ್ಯಾನರ್ಜಿ
ತೃಣಮೂಲ ಕಾಂಗ್ರೆಸ್ ಮುಖಂಡೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಆದರೆ ಇಂದು ಕಾಂಗ್ರೆಸ್ ಮುಖ್ಯಮಂತರಿಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅವರು ಭಾಗವಹಿಸುತ್ತಿಲ್ಲ. ಮಹಾಘಟಬಂಧನದ ಅಗ್ರ ನಾಯಕಿ ಎನ್ನಿಸಿಕೊಂಡ ಮಮತಾ ಗೈರು ಮಹಾಮೈತ್ರಿಕೂಟದ ನಾಯಕರಿಗೆ ಭ್ರಮನಿರಸನ ಮೂಡಿಸಿದೆ. 'ಆದರೆ ತಾವು ಕಾರ್ಯಕ್ರಮಕ್ಕೆ ಆಗಮಿಸದೇ ಇರುವುದಕ್ಕೆ ವೈಯಕ್ತಿಕವಾಗಿ ಕೆಲವು ತುರ್ತು ಕಾರಣವಿದೆ. ದಯವಿಟ್ಟು ಬೇರೆ ಅರ್ಥ ಕಲ್ಪಿಸಬೇಡಿ' ಎಂದು ದೀದಿಯೇ ಸ್ಪಷ್ಟನೆ ನೀಡಿದ್ದಾರೆ.
ಮಾಯಾವತಿ
ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಮಧ್ಯಪ್ರದೇಶ ಮತ್ತು ರಾಜಸ್ಥಾಣಗಳಲ್ಲಿ ಕಾಂಗ್ರೆಸ್ಸಿಗೆ ಅಗತ್ಯವಿದ್ದ ಬಹುಮತ ಪಡೆಯಲು ತಮ್ಮ ಬೆಂಬಲವನ್ನೇನೋ ನೀಡಿದ್ದಾರೆ. ಆದರೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾತ್ರ ಅವರು ಭಾಗವಹಿಸುತ್ತಿಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ ಜೊತೆ ಮುನಿಸಿಕೊಂಡು, ಚುನಾವಣಾ ಪೂರ್ವ ಮೈತ್ರಿಗೆ ಒಲ್ಲೆ ಎಂದಿದ್ದ ಮಾಯಾವತಿ ಚುನಾವಣೆಯ ನಂತರ ಮತ್ತೆ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ. ಆದರೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾತ್ರ ಹಾಜರಾಗುವುದಿಲ್ಲ ಎಂಬ ಅವರ ನಿಲುವು ಅರ್ಥವಾಗುತ್ತಿಲ್ಲ. ಅದೂ ಅಲ್ಲದೆ, ಗೈರಾಗುವ ತಮ್ಮ ನಿರ್ಧಾರಕ್ಕೆ ಅವರು ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ.
ದೇವೇಗೌಡರನ್ನು ಕಡೆಗಣಿಸಿ ಅವಮಾನಿಸಿದರೇ ರಾಹುಲ್ ಗಾಂಧಿ?
ಅಖಿಲೇಶ್ ಯಾದವ್
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಸಹ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಕಾಂಗ್ರೆಸ್ಸಿಗೆ ಅವರು ತಮ್ಮ ಬೆಂಬಲ ನೀಡಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಚುನಾವಣೆಗೆ ಮುನ್ನ ಬಿಎಸ್ಪಿ ಜೊತೆ ಕೈಜೋಡಿಸಿದ್ದ ಎಸ್ಪಿ, ಮಾಯಾವತಿಯವರನ್ನೇ ಅನುಸರಿಸುತ್ತಿರುವುದರಿಂದ, ಅವರು ಗೈರಾಗಿರುವ ಕಾರಣಕ್ಕೆ ಅಖಿಲೇಶ್ ಅವರೂ ಗೈರಾಗಿದ್ದಿರಬಹುದು ಎನ್ನಲಾಗಿದೆ. ಅವರು ಸಹ ತಮ್ಮ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿಲ್ಲ.
Array |
ಪ್ರಮಾಣವಚನದಲ್ಲಿ ಯಾರೆಲ್ಲ ಭಾಗಿ?
ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಅವರು ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಕಾರ್ಯಕ್ರಮದಲ್ಲಿ ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಪಾಲ್ಗೊಂಡಿರಲಿಲ್ಲ. ಆದರೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಆಂಧ್ರಪ್ರದೇಶ ಮುಖ್ಯಮಂತ್ರಿ, ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ಎನ್ ಸಿಪಿ ಮುಖಂಡ ಶರದ್ ಪವಾರ್, ಜೆಡಿಯು ಮಾಜಿ ಮುಖಂಡ ಶರದ್ ಯಾದವ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲ.
ಪ್ರಧಾನಿ ಅಭ್ಯರ್ಥಿ ಯಾರೆಂದು ಪ್ರಕಟಿಸಿ : ಮಹಾಘಟಬಂಧನಕ್ಕೆ ಬಿಜೆಪಿ ಸವಾಲು!