'ವಿಐಪಿ ರೋಗಿಯಂತೆ ನೋಡಲಾಗದು': ಸಿಖ್ ನರಮೇಧ ಪ್ರಕರಣ ಅಪರಾಧಿ ಸಜ್ಜನ್ ಜಾಮೀನು ತಿರಸ್ಕೃತ
ನವದೆಹಲಿ, ಸೆಪ್ಟೆಂಬರ್ 03: ಸುಪ್ರೀಂ ಕೋರ್ಟ್ ಶುಕ್ರವಾರ 1984 ರ ಸಿಖ್ ವಿರೋಧಿ ಗಲಭೆಯ ಅಪರಾಧಿಯಾಗಿ ಜೀವಿತಾವಧಿ ಶಿಕ್ಷೆ ಅನುಭವಿಸುತ್ತಿರುವ, ಮಾಜಿ ಸಂಸದ ಸಜ್ಜನ್ ಕುಮಾರ್ನ ಮಧ್ಯಂತರ ಜಾಮೀನು ಅರ್ಜಿ ತಿರಸ್ಕಾರ ಮಾಡಿರುವ ಸುಪ್ರೀಂ ಕೋರ್ಟ್, "ನಿಮ್ಮನ್ನು ವಿಐಪಿ ರೋಗಿಯಂತೆ ನೋಡಲಾಗದು," ಎಂದು ಹೇಳಿದೆ.
ತನ್ನ ಆರೋಗ್ಯ ಸಮಸ್ಯೆ ಹದಗೆಡುತ್ತಿದೆ ಎಂದು ವೈದ್ಯಕೀಯ ಕಾರಣದಕ್ಕೆ ಮಧ್ಯಂತರ ಜಾಮೀನು ನೀಡುವಂತೆ ಸಜ್ಜನ್ ಕುಮಾರರ ಮನವಿ ಮಾಡಿದ್ದಾರೆ. ಈ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಅಪರಾಧಿ ಸಜ್ಜನ್ರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಆರೋಗ್ಯ ಸ್ಥಿರವಾಗಿದೆ ಎಂಬುವುದುನ್ನು ಗಮನಿಸಿದೆ.
ಹಾಗೆಯೇ ಸಜ್ಜನ್ ಕುಮಾರ್ಗೆ ದೆಹಲಿ ಸಮೀಪದ ಗುರುಗ್ರಾಮದ ಮೆದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ಕೋರಿ ಸಜ್ಜನ್ ಕುಮಾರ್ ಪರ ವಕೀಲರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. "ಆತ ಹೇಯವಾದ ಅಪರಾಧವನ್ನು ಮಾಡಿದಾತ, ಆತನನ್ನು ವಿಐಪಿಯಂತೆ ನೋಡಬೇಕು ಎಂದು ನೀವು ಬಯಸುತ್ತಿರಿಯೇ?," ಎಂದು ಸುಪ್ರೀಂ ಕೋರ್ಟ್ ವಕೀಲರನ್ನು ಪ್ರಶ್ನಿಸಿದೆ.

75 ವರ್ಷದ ಮಾಜಿ ಕಾಂಗ್ರೆಸ್ ನಾಯಕ ದೆಹಲಿಯ ರಾಜ್ ನಗರದಲ್ಲಿ ಒಂದು ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆಗೈದು, ನವೆಂಬರ್ 1, 1984 ರಂದು ಗುರುದ್ವಾರಕ್ಕೆ ಬೆಂಕಿ ಹಚ್ಚಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾರೆ.ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಜ್ಜನ್ ಆ ಸಮಯದಲ್ಲಿ ಆ ಪ್ರದೇಶದ ಸಂಸದನಾಗಿದ್ದರು.
ಕಳೆದ ತಿಂಗಳು ಕೂಡ ಸಜ್ಜನ್ ಕುಮಾರ್ ಪರ ವಕೀಲರು ತಮ್ಮ ಕಕ್ಷಿದಾರರ ಆರೋಗ್ಯ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿದ್ದರು.ಡಿಸೆಂಬರ್ 2018 ರಿಂದ ಎಂಟರಿಂದ 10 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ವಕೀಲರು ಹೇಳಿದ್ದರು. ವಕೀಲರು "ಸಜ್ಜನ್ ಕುಮಾರ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು," ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆ ಸಜ್ಜನ್ ಕುಮಾರ್ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಮತ್ತು ಸೆಪ್ಟೆಂಬರ್ 6 ರ ಮೊದಲು ಮಧ್ಯಂತರ ಜಾಮೀನು ಅರ್ಜಿಗೆ ಉತ್ತರಿಸಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐಗೆ ಸೂಚನೆ ನೀಡಿತ್ತು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ವೈದ್ಯಕೀಯ ಕಾರಣಕ್ಕಾಗಿ ಜಾಮೀನು ನೀಡುವುದನ್ನು ನಿರಾಕರಿಸಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ, "ಇದು ಸಣ್ಣ ಪ್ರಕರಣವಲ್ಲ. ನಾವು ಜಾಮೀನು ನೀಡಲು ಸಾಧ್ಯವಿಲ್ಲ," ಎಂದು ಸ್ಪಷ್ಟವಾಗಿ ಹೇಳಿತ್ತು. "ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಹ ಸ್ಥಿತಿ ಸಜ್ಜನ್ ಕುಮಾರ್ಗೆ ಇಲ್ಲ ಎಂದು ಅವರ ವೈದ್ಯಕೀಯ ವರದಿಯು ಹೇಳುವಾಗ ಅವರು ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಪಡೆಯಬೇಕಾದ ಅವಶ್ಯಕತೆ ಇಲ್ಲ," ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಸಜ್ಜನ್ ಕುಮಾರ್ ಅಪರಾಧಿ ಎಂದು ನೀಡಿದ ತೀರ್ಪು ಹಾಗೂ ಜೀವಾವಧಿ ಶಿಕ್ಷೆಯ ವಿರುದ್ಧ ಸಜ್ಜನ್ ಕುಮಾರ್ ಸಲ್ಲಿಸಿದ್ದ ಮನವಿಯನ್ನು ಆನ್ಲೈನ್ ಹೊರತಾಗಿ ವಿಚಾರಣೆ ಮುಖಾಮುಖಿಯಾಗಿ ನಡೆಸಲು ಸಾಧ್ಯವಾಗುವ ಸಂದರ್ಭದಲ್ಲಿ ನಡೆಸಲಾಗುವುದು ಎಂದು ಕೋರ್ಟ್ ಹೇಳಿತ್ತು. ಹಾಗೆಯೇ ಕೊರೊನಾ ವೈರಸ್ ಸೋಂಕು ಲಾಕ್ಡೌನ್ ಕಾರಣದಿಂದಾಗಿ ನ್ಯಾಯಾಲಯಗಳು ಅಧಿಕವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗಳನ್ನು ನಡೆಸುತ್ತಿವೆ. ಈ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದೆ.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಈ ಆರೋಪ ಮುಕ್ತ ಮಾಡುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ನರಮೇಧ ಎಂದು ಕರೆಯಲಾಗುವ ಈ ಪ್ರಕರಣದಲ್ಲಿ ಆರೋಪ ಮುಕ್ತ ಮಾಡಲಾಗದು. ಸಂತ್ರಸ್ತರಿಗೆ ಭರವಸೆ ನೀಡುವುದು ಮುಖ್ಯ, ಸತ್ಯಕ್ಕೆ ಜಯವಿದೆ," ಎಂದು ಹೇಳಿತ್ತು.
(ಒನ್ ಇಂಡಿಯಾ ಸುದ್ದಿ)












Click it and Unblock the Notifications