ಲಾಕ್‌ಡೌನ್ ಮಾಡಿದರೂ ಪಾದಯಾತ್ರೆ ನಿಲ್ಲಿಸಲ್ಲ: ಡಿಕೆಶಿ

ಮೈಸೂರು, ಜನವರಿ 03; " ಮೇಕೆದಾಟು ಪಾದಯಾತ್ರೆಯನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರ ಲಾಕ್‌ಡೌನ್ ಮಾಡಿದರೂ ನಾವು ಪಾದಯಾತ್ರೆ ಮಾಡಿಯೇ ಸಿದ್ಧ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಗುಡುಗಿದರು. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮತ್ತೆ ಲಾಕ್‌ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಸೋಮವಾರ ಮೈಸೂರು ನಗರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿ. ಕೆ. ಶಿವಕುಮಾರ್, "ಬಿಜೆಪಿ ಪಕ್ಷ ಮೇಕೆದಾಟು ಪಾದಯಾತ್ರೆ ತಡೆಯಲು ಸಾಕಷ್ಟು ಹುನ್ನಾರ ನಡೆಸುತ್ತಿದೆ. ಅದಕ್ಕೆಲ್ಲ ನಾವು ಜಗ್ಗುವುದಿಲ್ಲ" ಎಂದರು.

"ಯೋಜನೆ ಜಾರಿಗೆ ಒತ್ತಾಯಿಸಿ ಜನವರಿ 9ರಿಂದ ಮೇಕೆದಾಟು ಸ್ಥಳದಿಂದ ಪಾದಯಾತ್ರೆ ಶುರು ಮಾಡುತ್ತೇವೆ. 19 ರಂದು ಬೆಂಗಳೂರಿನಲ್ಲಿ ಪಾದಯಾತ್ರೆ ಸಮಾರೋಪಗೊಳ್ಳಲಿದೆ. ಮೇಕೆದಾಟು ನಮ್ಮ ನೀರಿನ ನಮ್ಮ ಹಕ್ಕು. ಇದು ನೀರಿಗಾಗಿ ನಡೆಯುತ್ತಿರುವ ನಡಿಗೆ. ಸರಕಾರ ಕೋವಿಡ್ ನೆಪ ಹೇಳಿ ಲಾಕ್‌ಡೌನ್ ಮಾಡಿದರೂ ನಾವು ಪಾದಯಾತ್ರೆ ನಿಲ್ಲಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

Will Not Stop Padayatra From Mekedatu If Lockdown Imposed Says DK Shivakumar

"ಕಾಂಗ್ರೆಸ್ ಸರಕಾರ ಇದ್ದಾಗ ಮೇಕೆದಾಟು ಯೋಜನೆಗೆ ಡಿಪಿಆರ್ ಆಗಿದೆ. ಅಲ್ಲದೆ, ಕಾವೇರಿ ವಿವಾದವೂ ಪರಿಹಾರ ಆಗಿದೆ. ಗ್ರೀನ್ ಟ್ರಿಬ್ಯೂನಲ್ ತಮಿಳುನಾಡಿನ ದೂರಿಗೆ ಮನ್ನಣೆ ನೀಡಿಲ್ಲ. ಹೀಗಿದ್ದರೂ ಸರಕಾರ ಯಾಕೆ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸುತ್ತಿದೆ?. ರಾಜ್ಯದ 25 ಸಂಸದರು ಏನು ಮಾಡುತ್ತಿದ್ದಾರೆ?. ಪರೋಕ್ಷವಾಗಿ ತಮಿಳುನಾಡಿನ ಸರಕಾರಕ್ಕೆ ಬಿಜೆಪಿ ನಾಯಕರು ಸಹಕಾರ ಕೊಡುತ್ತಿದ್ದಾರೆ" ಎಂದು ಡಿ. ಕೆ. ಶಿವಕುಮಾರ ದೂರಿದರು.

ಮುನ್ನೆಚ್ಚರಿಕೆ ಕ್ರಮಗಳು; "ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಪಾದಯಾತ್ರೆಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 160 ಕಿ. ಮೀ. ಪಾದಯಾತ್ರೆ ನಡೆಯಲಿದ್ದು, 1 ಲಕ್ಷ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗೆ ಆರ್ಡರ್ ಕೊಡಲಾಗಿದೆ. 100 ಜನರ ವೈದ್ಯರು ಹಾಗೂ 10 ಟೀಂ ಇದಕ್ಕಾಗಿ ಕೆಲಸ ಮಾಡಲಿದೆ. 5 ಸಾವಿರ ಜನರಿಗೆ ಮಠ, ಶಾಲೆ, ಛತ್ರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆ ಜಾರಿಗೆ ಬಂದರೆ ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಅನುಕೂಲವಾಗಲಿದೆ. 2.5 ಕೋಟಿ ಜನರಿಗೆ ನೀರಿನ ಸಮಸ್ಯೆ ಇರುವುದಿಲ್ಲ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ, "ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರನ್ನು ಉಳಿಸಲು ಈ ಯೋಜನೆ ಜಾರಿಗೊಳಿಸಬೇಕಿದೆ. ಇದರಿಂದ 66 ಟಿಎಂಸಿ ನೀರು ಸಂಗ್ರಹವಾಗಲಿದೆ. ಅಲ್ಲದೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು" ಎಂದರು.

"ಬೆಂಗಳೂರಿನ ನೀರಿನ ಸಮಸ್ಯೆಯನ್ನು ನೀಗಿಸಬಹುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಸೂಕ್ತ ಪ್ರಮಾಣದ ಮಳೆ ಆಗದಿದ್ದಲ್ಲಿ ಮೇಕೆದಾಟು ಅಣೆಕಟ್ಟಿನಲ್ಲಿ ಸಂಗ್ರಹಿಸಿರುವ ನೀರನ್ನು ತಮಿಳುನಾಡಿಗೂ ಹರಿಸಬಹುದು. ಇದು ತಮಿಳುನಾಡಿಗೂ ಅನುಕೂಲಕರವಾದ ಯೋಜನೆ" ಎಂದು ವಿವರಣೆ ನೀಡಿದರು.

"ಮೇಕೆದಾಟು ಅಣೆಕಟ್ಟು ನಿರ್ಮಾಣದ ಹೋರಾಟ ಪಕ್ಷಾತೀತವಾಗಿ ಆಗಬೇಕು. ಆದರೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ರಾಜ್ಯದ ಸಿ. ಟಿ. ರವಿ ಯೋಜನೆ ವಿರುದ್ಧ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಅಣೆಕಟ್ಟು ನಿರ್ಮಾಣದ ಸಂಪೂರ್ಣ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಕೇವಲ ಕೇಂದ್ರ ಸರಕಾರದ ಪರಿಸರ ಸಚಿವಾಲಯದ ಅನುಮತಿಯಷ್ಟೇ ಬಾಕಿ ಇದೆ. ಅನೇಕ ಬಾರಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ" ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಆಗ್ರಹಿಸಲು ಕಾಂಗ್ರೆಸ್ ಪಕ್ಷ ಜನವರಿ 9 ರಿಂದ 19 ರ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಪಾದಯಾತ್ರೆಗೂ ಮೊದಲು ದೇವರ ಆಶೀರ್ವಾದ ಪಡೆಯಲು ಡಿ. ಕೆ. ಶಿವಕುಮಾರ್ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.

ಹಾಸನ, ತುಮಕೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಈಗಾಗಲೇ ಡಿ. ಕೆ. ಶಿವಕುಮಾರ್ ಸಂಚಾರ ನಡೆಸು ಪಾದಯಾತ್ರೆಗೆ ಪಕ್ಷದ ನಾಯಕರು, ಜನರನ್ನು ಆಹ್ವಾನಿಸಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಈ ಪಾಯಾತ್ರೆ ರಾಜಕೀಯ ಗಿಮಿಕ್ ಎಂದು ಆರೋಪಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+