Siddaramaiah: ಮೈಸೂರು ಕೊಡಗು ಕ್ಷೇತ್ರದ ಮೇಲೇಕೆ ಸಿಎಂ ಸಿದ್ದರಾಮಯ್ಯಗೆ ತೀವ್ರ ಆಸಕ್ತಿ? ಇದು ಸಿಎಂ ಕುರ್ಚಿಗಾಗಿ ಹೋರಾಟವೇ?
ಮೈಸೂರು, ಏಪ್ರಿಲ್. 13: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಏರಿಕೆಯಾಗಿದೆ. ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಇಳಿದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ಚುನಾವಣಾ ಕಣದಲ್ಲಿದ್ದಾರೆ. ಆದರೆ, ಸಿದ್ದರಾಮಯ್ಯನವರ ತೀವ್ರ ಆಸಕ್ತಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಕುತೂಹಲಕಾರಿ ಸ್ಪರ್ಧೆಗೆ ಕಾರಣವಾಗಿದೆ.
ಹೌದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಅವರಿಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಕ್ಷೇತ್ರವನ್ನು ಹೆಚ್ಚು ಕುತೂಹಲಕ್ಕೆ ನೂಕಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಅವರ ಹಿತಾಸಕ್ತಿ ಅಡಗಿದೆಯೇ ಅಥವಾ ಪಕ್ಷದ ಹಿತಾಸಕ್ತಿ ಅಡಗಿದೆಯೇ ತಿಳಿಯದಂತಾಗಿದೆ.

ಮೈಸೂರಿನಲ್ಲಿ ವಾರಗಟ್ಟಲೆ ಸಿದ್ದರಾಮಯ್ಯ ಪ್ರಚಾರ!
ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಘೋಷಣೆಯಾದ ಬಳಿಕ ರಾಜ್ಯದ ಮುಖ್ಯಮಂತ್ರಿಯಾದವರು ತಮ್ಮ ಪಕ್ಷದ ಪರವಾಗಿ ಒಂದೊಂದು ದಿನ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವುದು ಸಾಮಾನ್ಯ. ಆದರೆ, ಮೈಸೂರು- ಕೊಡಗು ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ನಂತರ ಸಿದ್ದರಾಮಯ್ಯ ವಾರಗಟ್ಟಲೆ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಇದು ಕ್ಷೇತ್ರ ಮತ್ತು ಸಿದ್ದರಾಮಯ್ಯ ಬಗ್ಗೆ ಇನ್ನೂ ಚರ್ಚೆಯಾಗುವಂತೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಕ್ಷೇತ್ರವಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮತ್ತು ಪಕ್ಕದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಬಲ ಬಿಜೆಪಿ ಎದುರಾಳಿಗಳನ್ನು ಎದುರಿಸುತ್ತಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಿದ್ದರಾಮಯ್ಯಗೆ ಅನಿವಾರ್ಯ ಎನಿಸುತ್ತಿದೆ.
ಮುಗಿಯುತಿದ್ಯಾ ಸಿಎಂ ಪಟ್ಟದ ಅವಧಿ!?
ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಸಿಎಂ ಸ್ಥಾನದ ಅವಧಿ ಮುಗಿಯುತ್ತಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ತೀವ್ರವಾಗಿವೆ, ಇದೇ ವೇಳೆ ಎರಡು ಕ್ಷೇತ್ರಗಳಲ್ಲಿ ಸಿದ್ದರಾಮ್ಯಯ ತೀವ್ರ ಆಸಕ್ತಿಯಿಂದ ಪ್ರಚಾರ, ತಂತ್ರ ಹೆಣೆಯುತ್ತಿದ್ದಾರೆ. ತನ್ನ ಸಿಎಂ ಸ್ಥಾ ಬಿಟ್ಟುಕೊಡದಂತೆ ಇರಲು ಎರಡೂ ಸ್ಥಾನಗಳಲ್ಲಿ ಬೆವರು ಹರಿಸಲು ಸಿದ್ಧರಾಗಿದ್ದಾರೆ.

ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತಮ್ಮ ಆಪ್ತ ಎಂ.ಲಕ್ಷ್ಮಣ್ ಅವರ ಪರ ಮೈಸೂರು ಜಿಲ್ಲೆಯಲ್ಲಿ ಪ್ರಚಾರ ನಡೆಸಲು ಸಿದ್ದರಾಮಯ್ಯ ಬರೋಬ್ಬರಿ ನಾಲ್ಕು ದಿನ ಬೀಡು ಬಿಟ್ಟಿದ್ದರು. ಸಿದ್ದರಾಮಯ್ಯ ಅವರಿಗಿರುವ ಸವಾಲು ಮತ್ತು ಒತ್ತಡವನ್ನು ಚೆನ್ನಾಗಿ ಅರಿತಿರುವ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಎರಡೂ ಕ್ಷೇತ್ರಗಳಲ್ಲಿ ತಮ್ಮ ಕೈ ಮೀರಿ ಶ್ರಮಿಸುತ್ತಿದ್ದಾರೆ.
ರಾಜಮನೆತನದ ಬಗ್ಗೆ ಬಾಯಿಬಿಡದ ಸಿದ್ದರಾಮಯ್ಯ!
ಇಷ್ಟು ದಿನ ಮೈಸೂರು ರಾಜಮನೆತನವನ್ನು ಕಟುವಾಗಿ ವಿರೋಧಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಭ್ಯರ್ಥಿಗೆ ಹಿನ್ನಡೆಯಾಗುವ ಭೀತಿಯಿಂದ ಯದುವೀರ್ ಒಡೆಯರ್ ಮತ್ತು ಮೈಸೂರು ಅರಸರ ಬಗ್ಗೆ ಏನು ಮಾತಾಡದೇ ಬಾಯಿ ಮುಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಯಾವುದೇ ಹೇಳಿಕೆ ನೀಡದಂತೆ ಪಕ್ಷದ ನಾಯಕರಿಗೆ ಸೂಚನೆ ಕೂಡ ನೀಡಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಹಿಂದುಳಿದ ಸಮುದಾಯ ಮತಗಳ ಬಗ್ಗೆ ಸಿದ್ದರಾಮಯ್ಯ ಎಚ್ಚರಿಕೆ ವಹಿಸುತ್ತಿದ್ದಾರೆ. ಸುಮಾರು 15 ಲಕ್ಷ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು 4 ಲಕ್ಷಕ್ಕೂ ಹೆಚ್ಚು, ಲಿಂಗಾಯತರು, ದಲಿತರು ಮತ್ತು ಒಬಿಸಿಗಳು ನಂತರದ ಸ್ಥಾನದಲ್ಲಿವೆ. 1.5 ಲಕ್ಷ ಮುಸ್ಲಿಂ ಮತ್ತು 1 ಲಕ್ಷ ಬ್ರಾಹ್ಮಣ ಮತದಾರರಿದ್ದಾರೆ.
2018ರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಸೋಲಿನ ನಂತರ ಸಿದ್ದರಾಮಯ್ಯ ಅವರು ಇಲ್ಲಿನ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಯಾವುದೇ ಒಂದು ಚಿಕ್ಕ ವಿಷಯವನ್ನು ಕಡೆಗಣಿಸುತ್ತಿಲ್ಲ. ಬಿಜೆಪಿಯ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ಸಂಧಾನ ಮಾಡುವ ಮಟ್ಟಕ್ಕೆ ಕೂಡ ಹೋಗಿದ್ದಾರೆ. ಪ್ರಭಾವಿ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರೂ ಅವರ ಕುಟುಂಬ ಸದಸ್ಯರು ಮತ್ತು ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರೆ.












Click it and Unblock the Notifications