'ಹಾಯ್ ಕೃಷ್ಣ' ನಾಯಕ ನವೀನ್ ಕೊಲೆ, ಇಬ್ಬರ ಬಂಧನ
ಮೈಸೂರು, ಮಾ. 20 : 'ಹಾಯ್ ಕೃಷ್ಣ' ಚಿತ್ರದ ನಾಯಕ, ನಿರ್ಮಾಪಕ ನವೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೆಳವಾಡಿಯ ನಿವಾಸಿಗಳಾದ ಮಣಿ (20), ಶಂಕರ್ (21) ಎಂದು ಗುರತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನವೀನ್ ಕೊಲೆ ಮಾಡಿದ ನಂತರ ಇಬ್ಬರು ಆರೋಪಿಗಳು ಬೋಗಾದಿಯ ತೋಟದ ಮನೆಯಲ್ಲಿ ಅಡಗಿದ್ದರು. ಗುರುವಾರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. [ನಾಯಕ ನಟ ನವೀನ್ ಕೊಲೆ]
5 ದಿನದಲ್ಲೇ ಬಂಧನ : 'ಹಾಯ್ ಕೃಷ್ಣ' ಚಿತ್ರದ ನಾಯಕ, ನಿರ್ಮಾಪಕ ನವೀನ್ ಅವರನ್ನು ದುಷ್ಕರ್ಮಿಗಳ ಗುಂಪು ಮಾ.15ರ ಭಾನುವಾರ ರಾತ್ರಿ ಕೊಲೆ ಮಾಡಿತ್ತು. ಹಳೆ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.
ಮೈಸೂರಿನ ಬೆಳವಾಡಿಯ ಮಾರಮ್ಮ ದೇಗುಲದ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕೊಲೆಯಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications