ಸಂಚಾರ ನಿಯಮ ಉಲ್ಲಂಘನೆ: ಮೈಸೂರಿನಲ್ಲಿ 50% ಡಿಸ್ಕೌಂಟ್ನೊಂದಿಗೆ ದಂಡ ಪಾವತಿಸಿದ ಶಾಸಕ
ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆ ಮೈಸೂರಿನಲ್ಲೊಬ್ಬ ಶಾಸಕ ಶೇಕಡಾ 50ರಷ್ಟು ಡಿಸ್ಕೌಂಟ್ನೊಂದಿಗೆ ದಂಡ ಪಾವತಿ ಮಾಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮೈಸೂರು, ಫೆಬ್ರವರಿ, 05: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಸವಾರರಿಗೆ ಡಿಸ್ಕೌಟ್ ಘೋಷಿಸಿದ್ದೆ ತಡ ಬಿಲ್ ಪಾವತಿಗೆ ಜನ ಮುಗಿಬಿದ್ದಿದ್ದಾರೆ. ಹಾಗೆಯೇ ಮೈಸೂರಿನಲ್ಲೊಬ್ಬ ಶಾಸಕರು ಕೂಡ ದಂಡ ಪಾವತಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಅವರು ಸ್ವ ಇಚ್ಛೆಯಿಂದ ತಮ್ಮ ಖಾಸಗಿ ವಾಹನದ ಮೇಲಿದ್ದ ಪ್ರಕರಣದ ದಂಡವನ್ನು ಶೇಕಡಾ 50ರಷ್ಟು ಡಿಸ್ಕೌಂಟ್ನೊಂದಿಗೆ ಪಾವತಿ ಮಾಡಿದ್ದಾರೆ. ನಗರದ ಮೆಟ್ರೋಪೋಲ್ ವೃತ್ತದಲ್ಲಿ ದೇವರಾಜ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಶಾಸಕರು ಅದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದರು. ದಂಡ ವಸೂಲಿ ಗಮನಿಸಿದ ಶಾಸಕರು, ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ. ಜೊತೆಗೆ ಕಾರಿನ ಮೇಲೆ ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿವೆಯಾ, ಪರಿಶೀಲಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
ದಂಡ ಪಾವತಿಸಿದ ಬಿಜೆಪಿ ಶಾಸಕ
ಈ ವೇಳೆ ಪೊಲೀಸರು ಅತೀ ವೇಗದ ಚಾಲನೆಯಡಿ ಪ್ರಕರಣ ದಾಖಲಾಗಿದ್ದು, 7 ಸಾವಿರ ರೂಪಾಯಿ ದಂಡ ಇದೆ. ಸರ್ಕಾರದ ಆದೇಶದಂತೆ ದಂಡದ ಹಣಕ್ಕೆ ಶೇಕಡಾ 50ರಷ್ಟು ರಿಯಾಯಿತಿ ಇದೆ. ಆದ್ದರಿಂದ 3,500 ರೂಪಾಯಿ ಪಾವತಿಸಬೇಕು ಎಂದು ಮಾಹಿತಿ ನೀಡಿದ್ದಾರೆ.ತಕ್ಷಣ ಶಾಸಕರು 3,500 ರೂಪಾಯಿ ದಂಡ ಪಾವತಿಸಿ, ತಮ್ಮ ವಾಹನದ ಮೇಲಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಂಡಿದ್ದಾರೆ.
"ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ವಾಹನ ಸವಾರರು ತಮ್ಮ ವಾಹನಗಳ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ದಂಡ ಪಾವತಿಸಿ. ಈ ಮೂಲಕ ಸರ್ಕಾರ ನೀಡಿರುವ ಶೇಕಡಾ 50ರಷ್ಟು ರಿಯಾಯಿತಿ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು," ಎಂದು ಶಾಸಕ ಎಲ್.ನಾಗೇಂದ್ರ ಅವರು ವಾಹನ ಸವಾರರಿಗೆ ಮನವಿ ಮಾಡಿದರು.
12,000 ಪೌರ ಕಾರ್ಮಿಕರ ನೇಮಕಾತಿಗೆ ಕ್ರಮ
ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ಪೌರ ಕಾರ್ಮಿಕರ ಆರೋಗ್ಯ, ಮಕ್ಕಳ ಶಿಕ್ಷಣ, ನಿವೇಶನ, ಮನೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳ ರೂಪುರೇಷೆ ಸಿದ್ಧಪಡಿಸಿದೆ ಎಂದು ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮೈಸೂರಿನಲ್ಲಿ ತಿಳಿಸಿದರು. ಮಾನಸ ಗಂಗೋತ್ರಿ ಆವರಣದ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ಥಳೀಯ ಸಂಸ್ಥೆ ಪೌರ ಕಾರ್ಮಿಕರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನಾ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ 11,138 ಪೌರಕಾರ್ಮಿಕರ ಕಾಯಂಗೆ ಸರ್ಕಾರ ಸಮ್ಮತಿಸಿದೆ. ಅಲ್ಲದೆ 12,000 ಪೌರ ಕಾರ್ಮಿಕರ ನೇಮಕಾತಿಗೆ ಆರ್ಥಿಕ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.