ಸುತ್ತೂರು ಮಠದಿಂದ ಸಿಎಂ ಪರಿಹಾರ ನಿಧಿಗೆ 50ಲಕ್ಷ ರೂ. ದೇಣಿಗೆ
ಮೈಸೂರು ಏಪ್ರಿಲ್ 01: ಕೊರೊನಾ ವಿರುದ್ಧ ಹೋರಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿವೆ. ಜೊತೆಗೆ ಅನೇಕ ದಾನಿಗಳು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೂ ದೇಣಿಗೆ ಕೊಟ್ಟಿದ್ದಾರೆ.
ಸಿಎಂ ಮನವಿಗೆ ಸ್ಪಂದಿಸಿರುವ ಸಾವಿರಾರು ಕಂಪನಿಗಳು, ಸಂಸ್ಥೆಗಳು, ದೇವಾಲಯಗಳು ಮತ್ತು ಶ್ರೀಮಂತರು ಧನ ಸಹಾಯ ನೀಡುತ್ತಿದ್ದಾರೆ. ಮೈಸೂರಿನ ಸುತ್ತೂರು ಮಠ, ಜೆಎಸ್ಎಸ್ ವಿದ್ಯಾಪೀಠ ಹಾಗೂ ಜೆಎಸ್ಎಸ್ ಸಂಸ್ಥೆಯ ನೌಕರರು ಸ್ವಇಚ್ಛೆಯಿಂದ ಕೈಲಾದ ಹಣವನ್ನು ನೀಡಿದ್ದಾರೆ.
ಹೀಗೆ ನೀಡಿದ ಹಣವನ್ನು ಒಟ್ಟುಗೂಡಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ಚೆಕ್ ನ್ನು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಇಂದು ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ ಬೆಟಸೂರ್ ಮಠ್, ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ, ಜೆಎಸ್ಎಸ್ ಎ.ಎಚ್.ಇ.ಆರ್ ನ ಕುಲಾಧಿಪತಿಗಳಾದ ಡಾ.ಬಿ.ಸುರೇಶ್, ಎಂ.ವಿ.ಪಿ ಯ ಹಣಕಾಸು ವಿಭಾಗದ ನಿರ್ದೇಶಕರಾದ ಎಸ್.ಪುಟ್ಟಸುಬ್ಬಪ್ಪ, ಕಾಲೇಜು ಶಿಕ್ಷಣ ವಿಭಾಗದ ಬಿ.ನಿರಂಜನಮೂರ್ತಿ ಮತ್ತಿತರರಿದ್ದರು.