ಮೈಸೂರು : ಶನಿವಾರದಿಂದ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ
ಮೈಸೂರು, ಜ. 16 : ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜನವರಿ 17ರಿಂದ 22ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರೆಯ ಅಂಗವಾಗಿ ಬೆಳಗ್ಗೆಯಿಂದ ರಾತ್ರಿವರೆಗೂ ಗಾಯನ, ನಾಟಕ, ರಸಮಂಜರಿ, ಯಕ್ಷಗಾನ, ವಚನಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಚ್.ಗಂಗಾಧರನ್ ಅವರು ಜಾತ್ರೆಯ ಕುರಿತು ಮಾಹಿತಿ ನೀಡಿದ್ದು, ಈ ಬಾರಿಯ ಭಜನಾ ಮೇಳದಲ್ಲಿ ಪಾಲ್ಗೊಳ್ಳಲು ಈಗಾಗಲೇ 450ಕ್ಕೂ ಹೆಚ್ಚು ತಂಡಗಳು ಹೆಸರು ನೋಂದಾಯಿಸಿಕೊಂಡಿವೆ ಎಂದು ಹೇಳಿದ್ದಾರೆ. ಕಳೆದ ವರ್ಷ ಸುಮಾರು 6 ಲಕ್ಷ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವರ್ಷ ಇದಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಜಾತ್ರೆ ಮೂಲಕ ಸ್ಥಳೀಯ ಸಂಸ್ಕೃತಿ ಪ್ರದರ್ಶನ ಹಾಗೂ ಜನರ ನಡುವೆ ಸಮನ್ವಯತೆ ಸಾಧಿಸಲಾಗುತ್ತಿದೆ. ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಜಾತ್ರೆಯಲ್ಲಿ ಸೋಬಾನೆ ಪದ, ರಂಗೋಲಿ ಸ್ಪರ್ಧೆ ಹಾಗೂ ದೇಸಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಣೆ ನೀಡಿದರು.
ಈ ಬಾರಿಯ ಜಾತ್ರೆಯಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿದ್ಯಾಲಯದಿಂದ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಜ. 18ರ ಪಲ್ಸ್ ಪೋಲಿಯೋ ದಿನದ ಪ್ರಯುಕ್ತ ಜಾತ್ರೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು. [ಜನವರಿ 18 ಮತ್ತು 22 ಪೋಲಿಯೋ ದಿನ]
ಜಾತ್ರೆಯ ಪ್ರಯುಕ್ತ 15 ಲಕ್ಷ ಜನರಿಗೆ ಪ್ರಸಾದ ವಿನಿಯೋಗ ಮಾಡುವ ಗುರಿ ಹೊಂದಲಾಗಿದೆ. ಜಾತ್ರೆಗೆ ಆಗಮಿಸುವ ಸುಮಾರು 20 ಸಾವಿರಕ್ಕೂ ಹೆಚ್ಚು ಜನರಿಗೆ ವಸತಿ, ಶೌಚ ಹಾಗೂ ಸ್ನಾನಕ್ಕಾಗಿ ತಾತ್ಕಾಲಿಕ ಕುಟೀರಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಜನವರಿ 17ರ ಕಾರ್ಯಕ್ರಮಗಳು : ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ 23ನೇ ಭಜನಾಮೇಳ, ಚಿತ್ರಕಲೆ, ರಂಗೋಲಿ, ಸೋಬಾನೆಪದ ಗಾಯನ, ದೋಣಿ ವಿಹಾರ, ಗಾಳಿಪಟ ಮತ್ತು ಸ್ವಚ್ಛತಾ ಆಂದೋಲನ ಅಭಿಯಾನ ಉದ್ಘಾಟನೆ. ಸಂಜೆ 4ಕ್ಕೆ ಕೃಷಿ ಮೇಳ, ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಮೇಳ ಉದ್ಘಾಟನೆ.












Click it and Unblock the Notifications