ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಏಕಕಾಲದಲ್ಲಿ ಎರಡು ಪದವಿ ಮಾಡಬಹುದು: ಕುಲಪತಿ ಡಾ.ಶರಣಪ್ಪ ಮಾಹಿತಿ
ಮೈಸೂರು, ಮೇ, 22: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿ ಮಾಡಬಹುದು ಎಂದು ಮುಕ್ತ ವಿವಿ ಕುಲಪತಿ ಡಾ.ಶರಣಪ್ಪ ವಿ.ಹಲ್ಸೆ ಅವರು ಮೈಸೂರಿನಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮುಕ್ತ ವಿವಿಗೆ ನ್ಯಾಕ್ನಲ್ಲಿ ಎ ಪ್ಲಸ್ ಸಿಕ್ಕಿದೆ. ಇಡೀ ದೇಶದಲ್ಲಿ 16 ಮುಕ್ತ ವಿವಿಗಳಿದ್ದು, ಗುಜರಾತ್ನ ಮುಕ್ತ ವಿವಿ ಮಾತ್ರ ಎ++ ಗಳಿಸಿದೆ. ಅದನ್ನು ಹೊರತುಪಡಿಸಿದರೆ ರಾಜ್ಯ ಮುಕ್ತ ವಿವಿಯೇ ಮುಂಚೂಣಿಯಲ್ಲಿದೆ ಎನ್ನುವುದು ಹೆಮ್ಮೆ ಎಂದು ಹೇಳಿದರು. ನ್ಯಾಕ್ ಮಾನ್ಯತೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಬಹುದು.

ಇಲ್ಲಿಯವರೆಗೆ ತನ್ನದೇ ಆದಾಯದಲ್ಲಿ ವಿವಿ ಮುನ್ನಡೆಯಬೇಕಿತ್ತು. ಇದೀಗ ಕನಿಷ್ಠ 100 ಕೋಟಿ ರೂಪಾಯಿ ಅನುದಾನ ತಂದು ವಿವಿಯ ಗುಣಮಟ್ಟ ಹಾಗೂ ಸೌಲಭ್ಯವನ್ನು ಇನ್ನಷ್ಟು ಏರಿಕೆ ಮಾಡುವ ಉದ್ದೇಶ ಇದೆ. ನಿರಂತರ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನ್ಯಾಕ್ ಎ+ ಮಾನ್ಯತೆ ಪಡೆದುಕೊಂಡಿದ್ದು, ಈ ಗೌರವಕ್ಕೆ ಪಾತ್ರವಾದ ರಾಜ್ಯದ ಮೊದಲ ವಿವಿ ಎಂದು ಹೇಳಿದರು.
ರಾಜ್ಯ ಮುಕ್ತ ವಿವಿ ಸ್ಥಾಪನೆಯಾಗಿ ಕಳೆದ 25 ವರ್ಷಗಳಲ್ಲಿ ನ್ಯಾಕ್ ಮಾನ್ಯತೆ ಲಭ್ಯವಾಗಿರಲಿಲ್ಲ. ನ್ಯಾಕ್ ಗ್ರೇಡ್ ಮುಂದಿನ ಐದು ವರ್ಷಗಳ ಅವಧಿಗೆ ಮಾನ್ಯತೆಯಲ್ಲಿರುತ್ತದೆ. ನಂತರ ಮತ್ತೆ ಪ್ರಯತ್ನಿಸಿ ಎ++ ಪಡೆದುಕೊಳ್ಳಲಾಗುವುದು. ಈಗ ಎ+ ಇರುವುದರಿಂದ ವಿದ್ಯಾರ್ಥಿಗಳು ಮತ್ತಷ್ಟು ಗುಣಮಟ್ಟದೊಂದಿಗೆ ಹೆಮ್ಮೆಯಿಂದ ಅಧ್ಯಯನ ನಡೆಸಬಹುದು. ಎಲ್ಲಾ ವಿಶ್ವವಿದ್ಯಾಲಯಗಳ ಪದವಿಗೆ ನಮ್ಮ ವಿವಿಯ ಪದವಿ ಸಮಾನವಾಗಿದೆ.
ಈಗಾಗಲೇ 64 ಕೋರ್ಸ್ಗಳಿದ್ದು, ಇನ್ನೂ 51 ಕೋರ್ಸ್ಗಳನ್ನು ಹಾಗೂ ಆನ್ಲೈನ್ ಕೋರ್ಸ್ಗಳನ್ನು ಕೂಡ ಆರಂಭಿಸಲು ಪ್ರಯತ್ನಿಸಲಾಗುವುದು. ಗ್ರಾಮಾಂತರ ಪ್ರದೇಶ ಹಾಗೂ ಉದ್ಯೋಗಸ್ಥರ ಕಲಿಕೆಗೆ ಮುಕ್ತ ವಿವಿ ಆಶಾಕಿರಣವಾಗಿದೆ ಎಂದು ವಿವರಿಸಿದರು. ಈಗಾಗಲೇ 18,500 ವಿದ್ಯಾರ್ಥಿಗಳು ಹೊಸದಾಗಿ ದಾಖಲಾಗಿದ್ದಾರೆ. ನಾನು ಬರುವ ಮುನ್ನ ಈ ಸಂಖ್ಯೆ ಸುಮಾರು 5 ಸಾವಿರಕ್ಕೆ ಸೀಮಿತವಾಗಿತ್ತು. ಇದೀಗ ಆಮೂಲಾಗ್ರ ಬದಲಾವಣೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಮುಕ್ತ ವಿವಿ ಕುರಿತು ನಂಬಿಕೆ ಬಂದಿದ್ದು, ಪ್ರವೇಶಾತಿ ಹೆಚ್ಚಾಗುತ್ತಿದೆ ಎಂದರು.
ಸುಮಾರು 2 ಲಕ್ಷ ವಿದ್ಯಾರ್ಥಿಗಳ ಪ್ರವೇಶಾತಿ ನನ್ನ ಗುರಿಯಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೂಡ ಪ್ರಾದೇಶಿಕ ಕೇಂದ್ರವನ್ನು ತೆರೆಯಲಾಗುವುದು ಎಂದರು. ವಿವಿಗೆ ಮೊದಲ ಬಾರಿ 10 ಕೋಟಿ ರೂಪಾಯಿಗಳ ಐಟಿ ಆದಾಯ ಹಿಂತಿರುಗಿ ಬಂದಿದೆ. ಕಳೆದ ಆರು ತಿಂಗಳಿನಲ್ಲಿ ಪ್ರವೇಶಾತಿ ಸೇರಿದಂತೆ 40 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪನ್ಮೂಲ ಲಭ್ಯವಾಗಿದೆ. ವಿವಿಯಲ್ಲಿ ವಿಜ್ಞಾನ ಲ್ಯಾಬ್ ಮೇಲ್ದರ್ಜೆಗೆ ಏರಿಸಲಾಗಿದೆ. ಗ್ರಂಥಾಲಯದಲ್ಲಿ ಆಧುನಿಕ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ರಿಜಿಸ್ಟ್ರಾರ್ ಡಾ.ಕೆ.ಎಲ್.ಎನ್. ಮೂರ್ತಿ, ಪರೀಕ್ಷಾಂಗ ರಿಜಿರ್ಸ್ಟ್ರಾ ಪ್ರೊ.ಕೆ.ಪ್ರವೀಣ್, ಹಣಕಾಸು ಅಧಿಕಾರಿ ಖಾದರ್ ಪಾಷ, ಡೀನ್ ಅಕಾಡೆಮಿಕ್ ಪ್ರೊ.ಲಕ್ಷ್ಮಿ, ಸ್ಟಡಿ ಸೆಂಟರ್ ಡೀನ್ ಎಂ.ರಾಮನಾಥಂ ನಾಯ್ಡು, ಪ್ರಮುಖ ಅಧಿಕಾರಿಗಳಾದ ಡಾ.ನಿರಂಜನ್ ರಾಜ್, ಡಾ.ಮಹೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications